Sunday 29 September 2013

ಆರೋಗ್ಯಕ್ಕಾಗಿ ಅತ್ತುಬಿಡಿ ...!

’ನಕ್ಕರೆ ಅದೇ ಸ್ವರ್ಗ’ ಅನ್ನೋ ಮಾತು ಕೆಳಿರ‍್ತಿರಾ.. ಮನಸ್ಸು ಬಿಚ್ಚಿ ನಕ್ಕರೆ ದೇಹದ ಆರೊಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತೆ. ಉತ್ತಮ ಆರೋಗ್ಯ ನಮ್ಮದಾಗುತ್ತೆ. ಇದು ಎಲ್ಲರಿಗೂ ಗೊತ್ತಿರುವ ಸತ್ಯ. ಹೌದು, ಮನುಷ್ಯ ಭಾವನಾ ಜೀವಿ. ಪ್ರತಿನಿತ್ಯ ನಗು, ಅಳು ಮಾಮೂಲಿ. ಅದೇ ಜೀವನ. ಬದುಕಿನಲ್ಲಿ ಕಹಿ ಇಲ್ಲದಿದ್ದರೆ ಸಿಹಿಯ ಅನುಭವ ಆಗುವುದಾದರೂ ಹೇಗೆ? ಹಾಗೆ, ಎಲ್ಲ ದಿನಗಳೂ ಭಾನುವಾರವಾಗಿರುವುದಿಲ್ಲ. ಜೀವನದಲ್ಲಿ ಕೆಲವು ಬಾರಿ, ಕೆಲವು ಘಟನೆಗಳು ದುಃಖವನ್ನು ಹೊತ್ತು ತಂದು ಬಿಡುತ್ತವೆ. ಅದಕ್ಕೆ ಕಾರಣ ಏನೇ ಇರಬಹುದು. ಮನಸ್ಸು ದುಃಖದಲ್ಲಿ ಮುಳುಗಿದಾಗ ಆ ಕ್ಷಣದಲ್ಲಿ  ಉಕ್ಕಿ ಬರುವ ದುಃಖವನನ್ನು ಮನಸ್ಸಿನೊಳಗೆ ಬಚ್ಚಿಡದೇ ಹೊರಹಾಕಿ ಬಿಡುವುದು ಒಳ್ಳೆಯದು. ಏಕೆಂದರೆ, ನಿಮಗೆ ಗೊತ್ತೇ ಅತ್ತರೆ ಆರೋಗ್ಯ ವೃಧ್ಧಿಯಂತೆ..! ಹೌದು, ಮನಸ್ಸಿಗೂ, ಆರೋಗ್ಯಕ್ಕೂ ನೇರ ಸಂಬಂಧವಿದೆ. ಅತಿಯಾದ ದುಃಖವನ್ನು ಮನದಲ್ಲಿಟ್ಟುಕೊಂಡರೆ ಅದು ಒಳಗೊಳಗೆ ಆರೋಗ್ಯವನ್ನು ತಿಂದು ಹಾಕಿಬಿಡುತ್ತದೆ. ಅದೇ ದುಃಖವನ್ನು ಆ ಕ್ಷಣದಲ್ಲಿ ಕಣ್ಣೀರಾಗಿ ಕರಗಿಸಿ ಹೊರಹಾಕಿಬಿಟ್ಟರೆ, ಅಥವಾ ಇತರೊಂದಿಗೆ ಮನದಾಳವನ್ನು ಹಂಚಿಕೊಂಡು ಮನಪೂರ್ತಿಯಾಗಿ ಅತ್ತುಬಿಟ್ಟರೆ ಮನಸ್ಸು ಹಗುರವಾಗುತ್ತದೆ. ಆಗ ಆರೋಗ್ಯದ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ.
ಅಳುವುದರಿಂದ ದೇಹದಲ್ಲಿನ ಒತ್ತಡ ಕಡಿಮೆಯಾಗುತ್ತದೆ ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಅಳುವುದರಿಂದ ಮನಸ್ಸು ಕೂಡ ಹಗುರವಾಗುತ್ತದೆ ಎನ್ನುವುದನ್ನು ಪ್ರತಿಯೊಬ್ಬರು ಮನಗಂಡಿರಬಹುದು. ಕೆಲವೊಂದು ಸಂಶೋಧನೆಗಳಿಂದ ಕೂಡ ಇದು ದೃಢಪಟ್ಟಿದೆ. ದುಃಖದಿಂದ ಅಥವಾ ಆನಂದದಿಂದ ಅಳುವುದರಿಂದ ಮನಸ್ಸಿನಲ್ಲಿರುವ ಭಾವನೆಗಳೆಲ್ಲವೂ ಹೊರಬರುತ್ತವೆ. ಕೇವಲ ಇಷ್ಟು ಮಾತ್ರವಲ್ಲದೆ ಇದರಿಂದ ಆರೋಗ್ಯಕ್ಕೂ ಹಲವಾರು ಲಾಭಗಳಿವೆ. ಕಣ್ಣೀರು ಸುರಿಸುವುದರಿಂದ ಆರೋಗ್ಯಕ್ಕೆ ಹಲವು ರೀತಿಯ ಲಾಭಗಳಿವೆ. 
ನೀವು ತುಂಬಾ ಸಂಕಷ್ಟದ ಸಮಯವನ್ನು ಎದುರಿಸುತ್ತಿದ್ದರೆ ಒಮ್ಮೆ ಅತ್ತುಬಿಡಿ,  ಅಳುವುದರಿಂದ ಆಗ ಸಮಾಧಾನದ ಭಾವನೆ ಮೂಡುತ್ತದೆ. ಕಣ್ಣೀರು ಸುರಿಸಿದ ಬಳಿಕ ನಿಮ್ಮ ಮೆದುಳು, ಹೃದಯ ಮತ್ತು ಅಂಗಾಂಗ ವ್ಯವಸ್ಥೆ ಅತ್ಯುತ್ತಮವಾಗಿ ಕಾರ್ಯಾ ನಿರ್ವಹಿಸಲಾರಂಬಿಸುತ್ತದೆ ಹಾಗೂ ನಿಮಗೆ ಹಿತಕರ ಭಾವನೆಯುಂಟಾಗುತ್ತದೆ. ಇನ್ನೊಮ್ಮೆ ನಿಮ್ಮ ಹೃದಯ ಭಾರವಾಗಿ ಕಣ್ಣೀರು ಬಂದರೆ ಆಗ ನೀವು ಇದೊಂದು ದುರ್ಬಲತೆಯ ಲಕ್ಷಣವೆಂದು ಭಾವಿಸಬೇಡಿ. ಇದರಿಂದ ಹಲವಾರು ಲಾಭಗಳಿರುವ ಕಾರಣ ಕಣ್ಣೀರು ಸುರಿಸುವುದು ಕೆಟ್ಟದೇನಲ್ಲ. 
ಭಾವನಾತ್ಮಕ ಕಾರಣಗಳಿಂದ ಬಿಡುಗಡೆಯಾಗುವ ಕಣ್ಣೀರಿನಲ್ಲಿ ಶೇ. ೨೪ರಷ್ಟು ಆಲ್ಬುಮಿನ್ ಪ್ರೊಟೀನ್‌ನನ್ನು ಒಳಗೊಂಡಿರುತ್ತದೆ. ಇದು ದೇಹದ ಚಯಾಪಚಯ ವ್ಯವಸ್ಥೆ ನಿಯಂತ್ರಿಸಲು ಸಹಾಯ ಮಾಡುತ್ತದೆ. ಅತಿಯಾದ ಒತ್ತಡದಿಂದ ಬರುವಂತಹ ರಕ್ತದೊತ್ತಡ, ಬೊಜ್ಜು ಮತ್ತು ಮಧುಮೇಹ ರೋಗಗಳ ವಿರುದ್ಧ ಹೋರಾಡಲು ಅಳು ನೆರವಾಗುತ್ತದೆ.
ಈರುಳ್ಳಿ ಕತ್ತರಿಸುವಾಗ ಕಣ್ಣಿನಲ್ಲಿ ನೀರು ಯಾಕೆ ಬರುತ್ತದೆಯೆಂದು ನಿಮಗೆ ಯಾವತ್ತಾದರೂ ಅಚ್ಚರಿಯಾಗಿದೆಯೇ? ಯಾಕೆಂದರೆ ಈರುಳ್ಳಿಯಲ್ಲಿನ ಗಂಧಕಾಮ್ಲ ಹೆಚ್ಚಿದಾಗ ಬಿಡುಗದೆಯಾಗುತ್ತದೆ. ಇದು ಕಣ್ಣಿಗೆ ಕಿರಕಿರಿಯುಂಟು ಮಾಡುತ್ತದೆ. ಕಣ್ಣಿಗೆ ಧೂಳು ಬಿದ್ದರೂ ಇದೇ ರೀತಿಯ ನೀರು ಬರುತ್ತದೆ. ಈ ರೀತಿ ಅಳುವುದರಿಂದ ಕಣ್ಣನ್ನು ರಕ್ಷಿಸಬಹುದು ಮತ್ತು ಧೂಳಿನ ಕಣಗಳು ಕಣ್ಣೀರಿನೊಂದಿಗೆ ಹೊರಹೋಗುತ್ತವೆ. ಕಣ್ಣು ಸ್ವಚ್ಚವಾಗುತ್ತವೆ.
ಜೀವಾಣು ವಿಷಗಳನ್ನು ತೊಡೆದುಹಾಕಲು ಸಾಮಾನ್ಯ ಕಣ್ಣೀರಿನಲ್ಲಿ ಶೇ. ೯೮ರಷ್ಟು ನೀರು ಇರುವುದು ಪತ್ತೆಯಾಗಿದೆ. ಭಾವನಾತ್ಮಕ ಕಣ್ಣೀರಿನಿಂದ ಬಿಡುಗಡೆಯಾಗುವ ಹಾರ್ಮೋನುಗಳಿಂದ ದೇಹ ತುಂಬಾ ಆರಾಮಗೊಳ್ಳುತ್ತದೆ. ಏಕೆಂದರೆ, ದೇಹದಲ್ಲಿ ಭಾವನಾತ್ಮಕ ಒತ್ತಡದಿಂದ ಉತ್ಪತ್ತಿಯಾಗುವ ರಸಾಯನಿಕಗಳು ಈ ಕಣ್ಣೀರಿನಲ್ಲಿರುತ್ತದೆ
ದೇಹದ ಇತರ ಭಾಗಗಳಂತೆ ಕಣ್ಣಿನಲ್ಲಿಯೂ ಬ್ಯಾಕ್ಟೀರಿಯಾ ಕಂಡುಬರುತ್ತದೆ. ಕಣ್ಣೀರು ಎನ್ನುವುದು ನೈಸರ್ಗಿಕ ಬ್ಯಾಕ್ಟೀರಿಯ ನಿರೋಧಕ ಗುಣಗಳನ್ನು ಹೊಂದಿರುತ್ತದೆ. ಕಣ್ಣೀರಿನಲ್ಲಿ ’ಲೈಸೊಝೊಮ್’ ಎನ್ನುವ ದ್ರವವಿದ್ದು, ಇದು ಕಣ್ಣಿನಲ್ಲಿರುವ ಶೇ. ೯೦ರಿಂದ ೯೫ರಷ್ಟು ಬ್ಯಾಕ್ಟೀರಿಯಾಗಳನ್ನು ಕೇವಲ ಐದು ನಿಮಿಷದಲ್ಲಿ ಕೊಲ್ಲುತ್ತದೆ.  ಕಣ್ಣೀರು ನಿಮ್ಮ ದೃಷ್ಟಿಯನ್ನು ಸುಧಾರಿಸಲು ನೆರವಾಗುತ್ತದೆ. ಕೆಲವೊಮ್ಮೆ ಕಣ್ಣಿನ ನಿರ್ಜಲೀಕರಣವಾದ ಪೊರೆಗಳಿಂದಾಗಿ ದೃಷ್ಟಿ ಸ್ವಲ್ಪ ಮಂದವಾದಂತಾಗಬಹುದು. ನೀವು ಅತ್ತಾಗ ಕಣ್ಣೀರು ಪೊರೆಗಳಿಗೆ ತೇವವನ್ನು ಒದಗಿಸುತ್ತದೆ ಮತ್ತು ಇದರಿಂದ ಸಂಪೂರ್ಣ ದೃಷ್ಟಿ ಸುಧಾರಿಸಲು ನೆರವಾಗುತ್ತದೆ. ಈಗ ನಿಮಗೆ ಅರ್ಥವಾಗಿರಬೇಕು,  ಅತ್ತರೂ ಲಾಭವಿದೆ ಎಂದು. ದುಖ ಬಂದಾಗ ಬಿಕ್ಕಿ ಬಿಕ್ಕಿ ಅತ್ತುಬಿಡಿ. ಆರೋಗ್ಯಕ್ಕೆ ಅಳುವೂ ಬೇಕು... ಖುಷಿಯೊಂದಿಗಿನ ಕಣ್ಣೀರೂ ಬೇಕು....

ಕದ್ದು ನೋಡುವ ಖಯಾಲಿ...!


ಸಂಬಂಧಗಳು ನಂಬಿಕೆಯ ಆಧಾರದ ಮೇಲೆ ನಿಂತಿರುತ್ತವೆ. ಆ ನಂಬಿಕೆ ಎಂಬ ತಳಪಾಯದಲ್ಲಿ ಸ್ವಲ್ಪ ಏರುಪೇರಾದರೂ ಸಂಬಂಧಗಳ ಗೋಪುರ ಕುಸಿದು ಬೀಳುವುದು ಸತ್ಯ. ನಿಮ್ಮ ಸಂಗಾತಿ ಬಗ್ಗೆ ನಿಮ್ಮಲ್ಲಿ ಅನುಮಾನವೆಂಬ ವಾಸಿಯಾಗದ ಕಾಯಿಲೆ ಹುಟ್ಟಿಕೊಂಡಿತೆಂದರೆ ಅದನ್ನು ಹೊಡೆದೋಡಿಸುವುದು ಸಾಧ್ಯವಿಲ್ಲ. ಅದು ದಿನದಿಂದ ದಿನಕ್ಕೆ ಬೆಳೆಯುತ್ತಲೇ ಹೋಗುತ್ತದೆ. ಸಂಬಂಧಗಳಲ್ಲಿ ಅನುಮಾನದ ಕರಿನೆರಳು ಕಂಡ ಕೂಡಲೇ ಅದನ್ನು ಆ ಕ್ಷಣವೇ ಸರಪಡಿಸಿಕೊಳ್ಳಬೇಕು, ಇಲ್ಲದಿದ್ದರೆ ಆ ಸಂಶಯದ ದಾರಿಯಲ್ಲಿ ನಿಮಗೆ ಗೊತ್ತಿಲ್ಲದೇ ನೀವೇ ನಡೆಯಲಾರಂಭಿಸುತ್ತೀರಿ. ಸಂಶಯವೆಂಬುದು ನಿಮ್ಮಿಂದ ಮಾಡಬಾರದ ಕೆಲಸಗಳನ್ನೆಲ್ಲ ಮಾಡಿಸಲಾರಂಭಿಸುತ್ತದೆ.
 ಮೊದಮೊದಲು ನಿಮ್ಮ ಸಂಗಾತಿಯ ಮೊಬೈಲ್‌ನ ಇನ್‌ಬಾಕ್ಸ್, ಔಟ್‌ಬಾಕ್ಸ್, ಇನ್‌ಕಮಿಂಗ್ ಕಾಲ್, ಔಟ್‌ಗೋಯಿಂಗ್ ಕಾಲ್ ಮತ್ತು ಫೇಸ್‌ಬುಕ್ ಅಪ್‌ಡೇಟ್‌ಗಳನ್ನು ಕದ್ದು ನೋಡುವುದು. ಅವರು ಎಲ್ಲೇ ಹೋದರೂ ಅವರನ್ನು ಹಿಂಬಾಲಿಸುವುದು. ಅವರ ಪ್ರತಿಯೊಂದು ನಡವಳಿಕೆಯ ಮೇಲೆ ನಿಗಾ ಇಡುವುದು ಹೀಗೆ ಅಮೂಲ್ಯವಾದ ಸಮಯವನ್ನು ಅನುಮಾನಗಳ ಹುಡುಕಾಟದಲ್ಲೇ ಕಳೆದುಬಿಡುತ್ತೀರಿ.
ಇತ್ತೀಚೆಗಂತೂ ಮೊಬೈಲ್ ಸಂಬಂಧಗಳನ್ನು ಕತ್ತರಿಸುವ ಒಂದು ಆಯುಧವಾಗಿ ಮಾರ್ಪಟ್ಟಿದೆ. ಹೆಚ್ಚಿನ ಸಂಬಂಧಗಳು ಮೊಬೈಲ್‌ನಲ್ಲಿಯೇ ಶುರುವಾದರೆ ಅದರೆರಡರಷ್ಟು ಸಂಬಂಧಗಳು ಮೊಬೈಲ್‌ನಿಂದಲೇ ಮುರಿದುಬೀಳುತ್ತಿವೆ. ಮತ್ತೊಬ್ಬರ ಮೊಬೈಲ್‌ನ್ನು ಕದ್ದು ನೋಡುವುದು ಅಪರಾಧ ಎನ್ನಲಾಗುತ್ತದೆ. ಅಷ್ಟೇ ಅಲ್ಲ ಕಾಮನ್‌ಸೆನ್ಸ್ ಇರುವವರ‍್ಯಾರೂ ಬೇರೋಬ್ಬರ ಮೊಬೈಲ್‌ನ್ನು ಕದ್ದು ನೋಡುವುದಿಲ್ಲ. ಒಂದು ವೇಳೆ ಅನಿವಾರ್ಯವಾಗಿ ನೋಡಲೇಬೇಕಾಗಿ ಬಂದರೆ. ಎಸ್‌ಎಂಎಸ್ ಹಾಗೂ ಕಾಲ್‌ಲಾಗ್ ಗಳ ವಿಷಯಕ್ಕೆ ಕೈ ಹಾಕಬಾರದು. ಅದು ನಿಮಗೆ ಶೋಭೆ ತರುವುದಿಲ್ಲ.
   ಕದ್ದು  ನೋಡದಿರಿ ನಿಮ್ಮ ಸಂಗಾತಿ ಮೊಬೈಲ್ :
ನಂಬಿಕೆಯ ಕನ್ನಡಿ ಒಡೆದು ಹೋಗುತ್ತೆ. :
ಹೌದು ಅನುಮಾನ ಹುಟ್ಟೋದೇ ಸಣ್ಣ ಸಣ್ಣ ವಿಷಯಗಳಿಂದ, ಸಂಗಾತಿ ಮೇಲೆ ನಿಮ್ಮ ಅಧಿಕಾರ ಚಲಾಯಿಸುವ ಮೊದಲ ಹಂತವಾಗಿ ಅವರ ಮೊಬೈಲ್‌ಗೆ ಬಂದಿರುವ ಕರೆಗಳನ್ನು ಪರಿಶೀಲಿಸುವುದು. ಎಸ್‌ಎಂಎಸ್‌ಗಳ ಬಗ್ಗೆ ತಲೆಕೆಡಿಸಿಕೊಳ್ಳುವುದು. ಇದು ಯಾರ ನಂಬರ್?, ಅವರು ನಿನಗ್ಯಾಕೆ  ಮೇಸೇಜ್ ಮಾಡಿದ್ದಾರೆ? ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ನಿಮ್ಮ ಸಂಗಾತಿಯಲ್ಲಿ ಕೇಳಬೇಕೆನಿಸುತ್ತದೆ. ಹಾಗೆ ಈ ಪ್ರಶ್ನೆಗಳನ್ನು ನೀವು ಕೇಳಿದ್ದೇ ನಿಜವಾದರೆ ನಂಬಿಕೆಯ ಕನ್ನಡಿಯಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ನಿಮಗೇ ಗೊತ್ತಲ್ಲ ಬಿರುಕು ಬಿಟ್ಟಿರುವ ಕನ್ನಡಿಯಲ್ಲಿ ಕಾಣೋದೆಲ್ಲ ವಿಕಾರವಾಗೇ ಇರುತ್ತೆ. ಇಷ್ಟು ಸಾಕಲ್ಲವೇ ಅನುಮಾನಕ್ಕೆ ಹಾಲೆರೆದು ಬೆಳೆಸಲು.
ಸಣ್ಣ ಅನುಮಾನ ದೊಡ್ಡ ಸಮಸ್ಯೆಗಳಿಗೆ ಕಾರಣವಾಗುತ್ತೆ. :
ಪ್ರೀತಿ, ಪ್ರೇಮದಂತಹ ಸಂಬಂಧಗಳಲ್ಲಿ ನಂಬಿಕೆಯೇ ಜೀವಾಳ. ಆಗಾಗ ಹುಟ್ಟಿಕೊಳ್ಳುವ ಸಣ್ಣ ಸಂಶಯ ನಿಮ್ಮ ಮನಸ್ಸಿನ ಒಳಹೊಕ್ಕರೆ ಅದು ಎಡೆಬಿಡದೇ ನಿಮ್ಮನ್ನು ಕೊರೆಯುತ್ತಿರುತ್ತದೆ ಹಾಗೇ ಇನ್ನಷ್ಟು ಸತ್ಯಗಳನ್ನು ಕೆದಕಲು ಪ್ರೇರೇಪಿಸುತ್ತದೆ. ನೆಮ್ಮದಿಯನ್ನು ತಿಂದುಹಾಕುತ್ತದೆ. ಇದಕ್ಕೆ ಬ್ರೇಕ್ ಬೀಳಬೇಕೆಂದರೆ ನಿಮ್ಮವರ , ನೀವು ನಂಬಿದವರ ಮೊಬೈಲ್‌ಗಳನ್ನು ಎಂದೂ ಪರಿಶೀಲಿಸಬೇಡಿ. ಹಾಗೆಮಾಡಿ ನಂಬಿಕೆಯನ್ನು ಕಳೆದುಕೊಳ್ಳಬೇಡಿ.
ನೀವು ನೋಡಿದ್ದೆಲ್ಲ ಸತ್ಯವಾಗಿರದೇ ಇರಬವುದು :
 ಹೌದು, ದೊಡ್ಡವರು ಅದಕ್ಕೆ ಹೇಳೋದು, ’ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು’ ಎಂದು. ತಾಳ್ಮೆಯಿಂದ ಅದೆಷ್ಟೋ ಪ್ರಶ್ನೆಗಳಿಗೆ ಉತ್ತರ ಸಿಗುವುದು. ಮೊಬೈಲ್‌ನಲ್ಲಿ ಯಾವುದೋ ಹೊಸದೊಂದು ನಂಬರ್ ನೋಡಿದಾಕ್ಷಣ ಇದು ಯಾರ ನಂಬರ್? ನಿನಗೆ ಯಾರು ಕಾಲ್ ಮಾಡಿದ್ದರು? ಏನು ಮಾತನಾಡಿದಿ? ಹೀಗೆ ಪ್ರಶ್ನೆಗಳನ್ನು ಕೇಳಿದರೆ  ಎದುರಿಗಿರುವವರಿಗೆ ಮುಜುಗರವಾಗದೇ ಇರಲಾರದು. ನಿಮ್ಮ ಬಗ್ಗೆ ಅವರ ಯೋಚನೆಯ ದಿಕ್ಕು ಆಗ ಬದಲಾಗತೊಡಗುತ್ತದೆ. ಆ ಕ್ಷಣ ಅವರು ಏನೇ ಹೇಳಿದರೂ ಅದನ್ನು ನಿಮ್ಮ ಮನಸ್ಸು ಒಪ್ಪದೇ ಹೋಗಬಹುದು. ಮತ್ತಷ್ಟು ಸಂಶಯದ ವಾಸನೆ ನಿಮ್ಮನ್ನಾವರಿಸಿಕೊಳ್ಳಬಹುದು. ಹೀಗೆ ಮೊಬೈಲ್‌ನ್ನು ಕದ್ದು ನೋಡುವುದರಿಂದ ನಾನಾ ಅನುಮಾನದ ಬೀಜಗಳು ಮೊಳಕೆಯೊಡೆಯತೊಡಗುತ್ತವೆ. ಸಂಬಂಧಗಳ ಮಧ್ಯದ ನಂಬಿಕೆಗೆ ಹೊಡೆತ ಬಿದ್ದರೆ ಅದು ದಾರಿ ತಪ್ಪುವುದು ನಿಶ್ಚಿತ.  ಅದರಲ್ಲೂ ಇತ್ತೀಚೆಗಂತೂ ಫೇಸ್‌ಬುಕ್‌ನಂತಹ ಸಮಾಜಿಕ ತಾಣಗಳನ್ನು ಮೊಬೈಲ್‌ನಲ್ಲೇ ಅಪ್‌ಡೇಟ್ ಮಾಡುವ ಸೌಲಭ್ಯವಿರುವುದರಿಂದ ಮೊಬೈಲ್ ಸಂಬಂಧಗಳಿಗೆ ಮತ್ತಷ್ಟು ಡೇಂಜರಸ್ ಎನಿಸತೊಡಗಿದೆ. ಒಂದು ನೆನಪಿಡಿ,  ಸಂಬಂಧಗಳಿಗೆ ನಂಬಿಕೆಯೇ ಜೀವಾಳ. ಫೇಸ್‌ಬುಕ್‌ನಲ್ಲಿ ಇರುವ ಎಲ್ಲಾ ಮುಖಗಳು  ಸತ್ಯವಾದವು ಎಂದು ನಂಬುವವರು ಮೂರ್ಖರು. ಏಕೆಂದರೆ ’ಫೇಸ್’ಬುಕ್ ಹೆಸ ರೇ ಹೇಳುವ ಹಾಗೆ ಫೇಸ್‌ಗೆ ಅದೆಷ್ಟು ಜನ ಮುಖವಾಡ ಧರಿಸಿಕೊಂಡು ಫೇಸ್‌ಬುಕ್ ಅಪ್‌ಡೇಟ್ ಮಾಡುತ್ತಿದ್ದಾರೋ ಗೊತ್ತಿಲ್ಲ. ಹೀಗೆ ಮಾಯಾ ಮುಖಗಳ ಮೋಹಕ್ಕೆ ಬಲಿಯಾಗಿ ನಿಮ್ಮ ಒಳ ಹೊರ ಗುಟ್ಟುಗಳನ್ನೆಲ್ಲಾ ರಟ್ಟುಮಾಡಿಕೊಳ್ಳುವ ಮುನ್ನ ಎಚ್ಚರದಿಂದಿರಿ. ಮೊಬೈಲ್ ನಿಂದ ಹುಟ್ಟುವ ಸಂಶಯಗಳಿಗೆ ಸಂಬಧಗಳನ್ನು ಬಲಿ ಕೊಡುವ ಮೊದಲು. ಒಮ್ಮೆ ಪ್ರಮಾಣಿಸಿ ನೋಡಿ.

Tuesday 24 September 2013

ದೇಶ ಬದಲಾಯಿಸಲು ಸಮೀಪಿಸುತ್ತಿದೆ ಸದಾವಕಾಶ

ಇನ್ನೇನು ಕೆಲವೇ ತಿಂಗಳಷ್ಟೆ ಬಾಕಿ. ನಿಮ್ಮ ಮನೆ ಬಾಗಿಲಿಗೆ ಮತ್ತೊಮ್ಮೆ ಮತ ಭಿಕ್ಷೆಗಾಗಿ ಮಾಜಿ, ಹಾಲಿ, ಭಾವಿ ರಾಜಕಾರಣಿಗಳು, ಹೆಂಡತಿ, ಮಕ್ಕಳು, ಮೊಮ್ಮಕ್ಕಳ ಸಮೇತ ಧಾವಿಸಲಿದ್ದಾರೆ. ನಾಚಿಕೆ, ಮಾನ, ಮರ್ಯಾದೆ ಎಲ್ಲವನ್ನು ಮನೆಯಲ್ಲಿ ಗಂಟುಮೂಟೆ ಕಟ್ಟಿಟ್ಟು.  ಸಾಮಾನ್ಯರ ಬೆವರು ವಾಸನೆಯನ್ನು ಹೊತ್ತ ನೋಟುಗಳನ್ನು ನೀಡಿ ವೋಟುಗಳನ್ನು ಗಿಟ್ಟಿಸಿಕೊಳ್ಳುವ ಗಿಮಿಕ್‌ಗಳು ಆರಂಭಿಸಲಿದ್ದಾರೆ. ನೀವಂತೂ ಬಿಡಿ ಮಾಮೂಲಿ , ಹೇಳಿದ್ದನ್ನೆಲ್ಲಾ ಕೇಳ್ತಿರಾ, ಮಾಡಿದ್ದನ್ನೆಲ್ಲಾ ನೋಡ್ತಿರಾ, ಓದಿದ್ದನ್ನೆಲ್ಲಾ ಮರೀತೀರಾ ಆಮೇಲೆ ಒಂದಲ್ಲಾ ಒಂದು ಆಸೆಗೆ ಕಣ್ಮುಚ್ಚಿ ಕಳ್ಳನಿಗಾದ್ರೂ ವೋಟ್ ಹಾಕ್ತಿರಾ...!? ಪ್ರಜಾಪ್ರಭುತ್ವ ನಮ್ಮ ದೇಶದ ಅದೃಷ್ಟವೋ ದುರದೃಷ್ಟವೋ ಗೊತ್ತಾಗುತ್ತಿಲ್ಲ.
ಹೌದು, ಮೇರಾ ಭಾರತ್ ಮಹಾನ್, ಯಾವುದರಲ್ಲಿ? ಲಂಚ ತಿನ್ನುವುದರಲ್ಲಾ? ರಾಜಕಾರಣಿಗಳ ಕಿತ್ತಾಟದಲ್ಲಾ? ಭ್ರಷ್ಟ ಅಧಿಕಾರಿಗಳ ಸಂಖ್ಯೆಯಲ್ಲಾ? ಒಟ್ಟಿನಲ್ಲಿ ಈ ದೇಶಕ್ಕೆ ಅದೇನು ಗಂಡಾಂತರ ಕಾದಿದೆಯೋ ಗೊತ್ತಿಲ್ಲ.  ನಮ್ಮ ದೇಶ ಒಂದು ಕಾಲದಲ್ಲಿ ’ಸೂಪರ್ ಪವರ್? ಆಗುವತ್ತ ದಾಪುಗಾಲಿಟ್ಟಿದೆ ಎಂಬ ಮಾತು ಕೇಳಿ ಬರುತ್ತಿತ್ತು. ಹೆಚ್ಚೇನಲ್ಲ ಕೇವಲ ಆರೇಳು ವರ್ಷಗಳ ಹಿಂದಷ್ಟೆ .. ರಾಜಕಾರಣಿಗಳ ಹಣದ ದಾಹ, ಭ್ರಷ್ಟಾಚಾರ ಮುಚ್ಚಿಹಾಕಲು ಏನೆಲ್ಲಾ ಪ್ರಯತ್ನಗಳು, ಒಬ್ಬರ ಮೇಲೊಬ್ಬರ ಕೆಸರೆರೆಚಾಟ. ಭ್ರಷ್ಟರಿಗೆ ಶಿಕ್ಷೆ ನೀಡಬೇಕಾದ ನ್ಯಾಯಾಂಗ ವ್ಯವ್ವಸ್ಥೆಯಲ್ಲೇ ಭ್ರಷ್ಟಾಚಾರದ ವಾಸನೆಯಾಡುತ್ತಿದೆ. ಅಷ್ಟೇ ಅಲ್ಲ ಎಲ್ಲ ರೀತಿಯ ತಪ್ಪು ಮಾಡಿರುವ ಭಯೋತ್ಪಾದಕರನ್ನು ದೇಶದೊಳಗೆ ತೂರಿಸುತ್ತಿರುವ ಪಾಕಿಸ್ತಾನವೇ ಭಾರತವನ್ನು ದೂಷಿಸುವ ಮಟ್ಟಕ್ಕೆ ಬೆಳೆದುಬಿಟ್ಟಿದೆ. ದೇಶದ ಮಾನ ಹರಾಜಾಗುತ್ತಿದೆ. ನಮ್ಮ ರಾಜಕಾರಣಿಗಳು ನಮ್ಮ ಸೈನಿಕರಿಗೇ ಸರಪಳಿ ಕಟ್ಟಿ ಶತ್ರು ರಾಷ್ಟ್ರದವರೊಂದಿಗೆ ಹೋರಾಡುವ ಶಕ್ತಿಯನ್ನೇ ಕಿತ್ತುಕೊಳ್ಳುತ್ತಿದ್ದಾರೆ. ಪ್ರತಿ ಊರಲ್ಲೂ, ಪ್ರತಿ ಬೀದಿಯಲ್ಲಿ, ಆಟಿಕೆಗಳಂತೆ ಮಾರಕಾಸ್ತ್ರಗಳನ್ನು ಹಿಡಿದ ಭಯೋತ್ಪಾದಕರು ಅಮಾಯಕ ಜೀವಗಳ ಜೊತೆ ಚೆಲ್ಲಾಟವಾಡುತ್ತಿದ್ದಾರೆ.
ಪ್ರತಿಯೊಬ್ಬ ರಾಜಕಾರಣಿಗಳು, ಅಧಿಕಾರಿಗಳೂ ಕೂಡ ಈ ದೇಶವನ್ನು ಲೂಟಿ ಮಾಡುತ್ತಿದಾರೆಯೋ ಎಂಬಂತೆ ತೋರುತ್ತಿದೆ. ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕಾದ ನ್ಯಾಯಾಲಯಗಳು, ಕೆಲ ನ್ಯಾಯಾಧೀಶರು ಭ್ರಷ್ಟ ನ್ಯಾಯಾಧೀಶರಾಗಿ ತೀರ್ಪು ನೀಡುತ್ತಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ..  ಸ್ವಿಸ್ ಬ್ಯಾಂಕ್‌ಗಳಲ್ಲಿ ಅಕ್ರಮವಾಗಿ ರಾಶಿ ರಾಶಿ ಹಾಕಿರುವ ಕಪ್ಪು ಹಣವೇ ಇರಲಿ, ಕಾಮನ್‌ವೆಲ್ತ್. ೨ಜಿ, ಕಲ್ಲಿದ್ದಲು ಹಗರಣ ಮತ್ತು ಭೂ ಹಗರಣಗಳು ದಿನಕ್ಕೊಂದರಂತೆ ಸಾಲು ಸಾಲಾಗಿ ಹೊರಬರುತ್ತಿವೆ, ಒಂದೊಂದು ಹಗರಣಗಳೂ ದೇಶವನ್ನು ಪುನರ್ ನಿರ್ಮಿಸುವಷ್ಟು ಹಣವನ್ನು ಕೊಳ್ಳೆಹೊಡೆದಿವೆ.  ಸರ್ಕಾರದಿಂದ ಅಮಾಯಕರಿಂದ ದೋಚಿದ ಹಣದಿಂದ ತಿಮಿಂಗಿಲಗಳಂತೆ ಬೆಳೆದಿರುವ ರಾಜಕಾರಣಿಗಳ ಅಸಲಿ ಮುಖಗಳ ದರ್ಶನವಾಗುತ್ತಿದೆ. ಸಾಲಿನಲ್ಲಿ ನಿಂತವರಂತೆ ದೊಡ್ಡ ದೊಡ್ಡ ರಾಜಕಾರಣಿಗಳು, ಜೈಲುಪಾಲಾಗುತ್ತಿದ್ದಾರೆ. ಅನೇಕ ಜೈಲುಗಳು ಭ್ರಷ್ಟ ರಾಜಕಾರಣಿಗಳಿಂದ ತುಂಬಿ ತುಳುಕುತ್ತಿವೆ. ಮುಖ್ಯಮಂತ್ರಿ, ಸಚಿವರು, ಶಾಸಕರು, ಅಧಿಕಾರಿಗಳು ಎನ್ನದಂತೆ ಪ್ರತಿ ರಾಜಕಾರಣಿಗಳ ಮುಖವಾಡಗಳು ಬಯಲಾಗುತ್ತಿವೆ. ಕೆಲವರು ಹಣದಾಹಿಗಳಾದರೆ ಇನ್ನು ಕೆಲವರು ಕಾಮಪಿಶಾಚಿಗಳಂತೆ ತಮ್ಮದೇ ಆದ ಅಧಿಕಾರ ಮಾಡುತ್ತಿದ್ದಾರೆ. ಇಷ್ಟೆಲ್ಲ ತಪ್ಪು ಮಾಡಿದವರು, ಮಾಡುತ್ತಿರುವವರು, ಮುಂದೆ ಮಾಡಲಿರುವವರನ್ನು ಆಯ್ಕೆ ಮಾಡಿ ಅವರ ಕೈಗೆ ಅಧಿಕಾರ ಕೊಟ್ಟವರು ನಾವೇ,  ಜನಸಾಮಾನ್ಯರೆ, ಈ ದೇಶದ ಆಧಾರ ಸ್ತಂಭಗಳಂತಿರುವ ಯುವಕರೆ, ಇವರೆಲ್ಲ ತಮ್ಮ ಸ್ವಂತಿಕೆ, ದೇಶದ ಜವಾಬ್ದಾರಿ ಮರೆತು, ಚಿಲ್ಲರೆ ನೂರು ಇನ್ನೂರು ಹಣಕ್ಕಾಗಿ, ಮದ್ಯದ ಅಮಲಿನಲ್ಲಿ ಸಿಕ್ಕು ತಮ್ಮ ಅಮೂಲ್ಯವಾದ ಮತಗಳ ಮೂಲಕ ಭ್ರಷ್ಟ ರಾಜಕಾರಣಿಗಳಿಗೆ ಜನ್ಮ ಕೊಡುತ್ತಿದ್ದಾರೆ. ರಾಜಕಾರಣಿಗಳ ಹಣದ ದುರಾಸೆ ಎಂಬುದು ಈ ದೇಶವನ್ನು ಯಾವ ಮಟ್ಟಕ್ಕೆ ತಲುಪಿಸಿದೆ ಎಂದರೆ, ಇನ್ನು ಈ ದೇಶದ ಆಳ್ವಿಕೆಯ ಅರ್ಥವೇ ದುಡ್ಡು ದೋಚುವುದು ಎಂಬಂತಾಗಿದೆ. ಈ ಎಲ್ಲ ರಾಜಕಾರಣಿಗಳು ಅಧಿಕಾರ, ಕುರ್ಚಿ ಆಸೆಗಾಗಿ ಒಬ್ಬರಿಗಿಂತ ಒಬ್ಬರು ಮಿಗಿಲಾಗಿ ಚಾರಿತ್ರ್ಯವಧೆಯಲ್ಲಿ ನಿರತರಾದರೇ ಹೊರತು ಆಡಳಿತದಲ್ಲಿ ಕ್ಷಮತೆ ತರುವಲ್ಲಿ ವಿಫಲರಾಗಿದ್ದಾರೆ. ಇದಕ್ಕೆಲ್ಲ ಕಾರಣ ತಮ್ಮ ಜವಾಬ್ದಾರಿಯನ್ನೇ ಮರೆತು, ಕಣ್ಮುಚ್ಚಿ ಪ್ರತಿದಿನದ ರಾಜಕೀಯ ನಾಟಕಗಳ ಅಪ್‌ಡೇಟ್ಸ್‌ಗಳನ್ನು ಪಡೆದು ಮಜಾ ತೆಗೆದುಕೊಳ್ಳುತ್ತಿರೋ ಯುವ ಜನಾಂಗ.
ಒಂದು ಕಡೆ ಹಗರಣಗಳ ಸರಮಾಲೆ, ಕೋಟಿ ಕೋಟಿ ಹಣ ವಿದೇಶಿ ಬ್ಯಾಂಕ್ ಸೇರುತ್ತಿರುವುದು, ಭಾರತದ ಅರ್ಥವ್ಯವಸ್ಥೆ ಅರ್ಥಕಳೆದುಕೊಳ್ಳುತ್ತಿರುವುದು.  ಇದೆಲ್ಲದರ ಹೊಣೆ ಆಮ್ ಆದ್ಮಿಯ ಮೇಲೆ, ಬೆಲೆ ಏರಿಕೆ ಹಣದುಬ್ಬರ ಮುಂತಾದವು ಜನರ ಜೀವನವನ್ನು ನರಕವನ್ನಾಗಿಸುತ್ತಿವೆ. ಇವೆಲ್ಲವುಗಳ ನಡುವೆ ಪಕ್ಷದೊಳಗೇ ಅಧಿಕಾರಕ್ಕಾಗಿ ಕಿತ್ತಾಟ, ಭಯೋತ್ಪಾದನೆಯನ್ನು ಹತ್ತಿಕ್ಕುವಲ್ಲಿನ ವೈಫಲ್ಯ, ಮತ್ತೊಂದೆಡೆ ಫಲವಿಲ್ಲದ ಹೋರಾಟ, ಸತ್ಯಾಗ್ರಹಗಳು. ಹೋರಾಟ ಹತ್ತಿಕ್ಕುವ ರಾಜಕಾರಣಿಗಳ ಕುತಂತ್ರಗಳು. ಇಂತಹ ಎಲ್ಲ ವಿಷಯದಲ್ಲಿಯೂ ಭಾರತದ ಹೆಸರೇ ಹಾಳಾಗುತ್ತಿದೆ.  ಕೆಲವೇ ವರ್ಷಗಳ ಹಿಂದೆ ಕಣ್ಣು ಹಾಯಿಸಿ ನೋಡಿ  ಭಾರತವು ಈ ಶತಮಾನದ ಬಲಿಷ್ಠ ರಾಷ್ಟ್ರವಾಗಿ  ಮೂಡಿ ಬರಲಿದೆ ಎಂಬ ಅದೆಂತಹ ಆಶಾವಾದ ನಮ್ಮಲ್ಲಿತ್ತು. ಅಣ್ಣಾ ಹಜಾರೆಯಂತಹ ಸತ್ವಯುತ ಹೋರಾಟಕ್ಕೆ ಕಿಂಚಿತ್ತು ಬೆಲೆ ಕೊಡದ ಸರ್ಕಾರ ಸ್ವಾತಂತ್ರ್ಯಕ್ಕೂ ಮುಂಚಿನ ಬ್ರಿಟೀಷರಂತೆ ವರ್ತಿಸುತ್ತಿದೆ. ದೇಶವನ್ನು ಸಧೃಢವಾಗಿ ಕಟ್ಟಬೇಕಾಗಿದ್ದ ಯುವ ಜನಾಂಗ ತಮ್ಮ ಪಾಡಿಗೆ ತಾವು ಮೋಜು, ಮಸ್ತಿ, ಫ್ಯಾಷನ್, ದುಶ್ಚಟ ಗಳಂತಹ ಹಲವಾರು ಕೃತ್ಯಗಳಿಂದ ತಮ್ಮ ದೇಶವನ್ನು ತಾವೇ ಹಾಳುಗೆಡಹುತ್ತಿರುವುದು. ನಮ್ಮ ಸಂಸ್ಕೃತಿಯನ್ನೇ ಹೇಳ ಹೆಸರಿಲ್ಲದಂತೆ ಕಿತ್ತೊಗೆಯುತ್ತಿರುವುದು. ಇನ್ನೊಂದು ಘೋರ ವಿಷಯವೇನೆಂದರೆ, ದೇಶ ಕಾಯಬೇಕಾಗಿದ್ದ ವಿದ್ಯಾವಂತ ಯುವಕರೇ, ಭಯೋತ್ಪಾದಕರೊಂದಿಗೆ ಸೇರಿ ಭಯೋತ್ಪಾದಕರಾಗಿ, ದೇಶಕ್ಕೇ ಮುಳ್ಳಾಗುತ್ತಿದ್ದಾರೆ.
ಈ ಗಂಭೀರ ಸಮಸ್ಯೆಗಳ ಬಗ್ಗೆ ಯೋಚಿಸಲೆಂದೇ ಈ ಲೇಖನ, ಯಾಕೆಂದರೆ ದೇಶವನ್ನು ಬದಲಾಯಿಸುವ ಶಕ್ತಿ ಇರುವುದು ಯುವಕರಲ್ಲಿ ಮಾತ್ರ. ಇಂತಹ ಪವಿತ್ರ ಭಾರತ ದೇಶದಲ್ಲಿ ಹುಟ್ಟಿದ ನಮ್ಮೆಲ್ಲರ ಜನ್ಮ ಸಾರ್ಥಕವಾಗಬೇಕಾದರೆ, ನಮ್ಮ ಮುಂದಿನ ಪೀಳಿಗೆಗೆ ಬದುಕುವ ಅವಕಾಶ ಮಾಡಿಕೊಡಬೇಕಾದರೆ ಈಗ ಬದಲಾವಣೆ ಅಗತ್ಯ. ದಿನನಿತ್ಯದ ಈ ರಾಜಕೀಯ ದೊಂಬರಾಟಗಳಿಗೆ ನೀವು ಮಾತ್ರ ಬ್ರೇಕ್ ಹಾಕಲು ಸಾಧ್ಯ.  ಮತ್ತೆ ಚುನಾವಣೆಗಳು ಸಮೀಪಿಸುತ್ತಿವೆ. ಕೆಲ ರೇಪಿಸ್ಟ್, ಸ್ಯಾಡಿಸ್ಟ್ ರಾಜಕಾರಣಿಗಳು ಹೊಸ ಮುಖವಾಡಗಳನ್ನು ತೊಟ್ಟು ಮತ್ತೆ ನಿಮ್ಮ ಮುಂದೆ ಮತಗಳ ಭಿಕ್ಷೆಗಾಗಿ ಬರುತ್ತಿದ್ದಾರೆ. ಈ ಸಂದರ್ಭದಲ್ಲಿ ನೀವು ಎಚ್ಚರದಿಂದಿರಬೇಕು. ದೇಶ ಕಟ್ಟುವ ರಾಜಕಾರಣಿಗಳನ್ನು ಸೃಷ್ಠಿಸುವ ಸಮಯ ನಿಮ್ಮನ್ನು ಸಮೀಪಿಸುತ್ತಿದೆ. ಏನು ಮಾಡಬೇಕು,       ಹೇಗೆ ಮಾಡಬೇಕು ಎಂಬುದನ್ನು ನಾವು ಹೇಳುವ ಅಗತ್ಯವಿಲ್ಲ. ಯಾಕೆಂದರೆ ನಿಮಗೆ ಎಲ್ಲವೂ ಗೊತ್ತಿದೆ.  ನೀವು ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಬದಲಾಯಿಸುವ ಶಕ್ತಿ ನಿಮ್ಮಲ್ಲಿದೆ, ಹೋರಾಡುವ ಛಲ ನಿಮ್ಮಲ್ಲಿದೆ...ಪ್ರಸ್ತುತ ದೇಶದ ಸ್ಥಿತಿಯನ್ನು ಸಂಕ್ಷಿಪ್ತವಾಗಿ ನಿಮ್ಮೆದುರಿಗಿಟ್ಟಿದ್ದೇನೆ... ಒಮ್ಮೆ ಇದು ನನ್ನ ದೇಶ, ಇದು ಹೀಗೇ ಇರಬೇಕು, ಅದಕ್ಕಾಗಿ ನಾನು ಏನು ಮಾಡಲು ಸಾಧ್ಯ? ಎಂದು ಒಮ್ಮೆ ಯೋಚಿಸಿ ನಿಮ್ಮಿಂದಾದ ಪ್ರಯತ್ನ ಮಾಡಿ. ಒಂದಲ್ಲಾ ಒಂದು ದಿನ ಗಾಂಧಿ ಕಂಡ ’ರಾಮರಾಜ್ಯ?ದ ನಮ್ಮ ಕನಸು ನನಸಾಗದೇ ಇರದು... ನೆನಪಿಡಿ ನಮಗೆ ಬೇಕಾಗಿರುವುದು ಅರಾಜಕತೆ ಸೃಷ್ಟಿಸುವ ರಾಜಕಾರಣಿಗಳಲ್ಲ ದೇಶಕಟ್ಟುವ ನಾಯಕರು.


Saturday 14 September 2013

ಮ್ಯಾರೀಡ್ ಲೈಫ್ 'ಹ್ಯಾಪಿ' ಆಗೋದು ಯಾವಾಗ...?

’ಹ್ಯಾಪಿ ಮ್ಯಾರೀಡ್ ಲೈಫ್?, ಹೌದು, ಹೀಗೆ, ಸಾವಿರಾರು ಜನ ಸೇರಿ, ಹರಸಿ ನೂರು ಕಾಲ ಸಂತೋಷದಿಂದಿರಿ ಎಂದು ಆಶೀರ್ವದಿಸಿ. ಬದುಕಿನ ಹೊಸ ತಿರುವಿಗೆ ಮನಮೆಚ್ಚಿದವರನ್ನು ಜೋಡಿ ಮಾಡಿ. ಬದುಕಿನ ಹಾದಿಯಲ್ಲಿ ಸ್ವತಂತ್ರ್ಯರಾಗಿ ಸಾಗಲು ಅನುವು ಮಾಡಿಕೊಡುವ ಆ ಕ್ಷಣ ಪ್ರತಿಯೊಬ್ಬರ ಜೀವನದಲ್ಲೂ ಮರೆಯಲಾಗದ ಮಧುರ ಕ್ಷಣ. ಈ ಕ್ಷಣದ ವರೆಗೂ ಹೇಗೋ ಬದುಕಿದೆವು, ಇನ್ನು ನಿನಗೆ ನಾನು, ನನಗೆ ನೀನು ಎಂದು ಪಂಚಭೂತಗಳ ಸಾಕ್ಷಿಯಾಗಿ, ಬಂಧು ಬಳಗದವರ ಸಮ್ಮುಖದಲ್ಲಿ ಒಬರನ್ನೊಬ್ಬರು ಅರಿತು, ಬೆರೆತು ಬದುಕಲು, ಒಂಟಿ ಜೀವಕ್ಕೆ ಜಂಟಿಮಾಡಿ ಜೀವನದ ಪಯಣಕ್ಕೆ ಬೇಸರವಾಗದೆ, ಒಬ್ಬರಿಗೊಬ್ಬರು ಆಸರೆಯಾಗಿರಲಿ ಎಂದು ನಡೆಯುತ್ತಿದ್ದ ಮದುವೆಗಳ ಕಾಲ ಇಗೀಲ್ಲ. ಈಗಿನವರು ಈ ಮದುವೆಯನ್ನು  ಇಷ್ಟಪಡುವುದೂ ಇಲ್ಲ. ಕಾಲಕ್ಕೆ ತಕ್ಕಂತೆ ಜನ ಬದಲಾಗುತ್ತಾರೆ ಎನ್ನುತ್ತಾರೆ ಆದರೆ ಇಲ್ಲಿ ಕಾಲ ಬದಲಾಗಿಲ್ಲ ಜನರು ಬದಲಾಗಿದ್ದಾರೆ. ತಾವು ಬದಲಾಗುವುದರೊಂದಿಗೆ ಕಾಲ. ಆಚಾರ. ವಿಚಾರ, ಸಂಸ್ಕೃತಿಯನ್ನೇ ಬದಲಾಯಿಸುತ್ತಿದ್ದಾರೆ.
ಒಂದು ತಿಂಗಳುಗಟ್ಟಲೆ ನಡೆಯುತ್ತಿದ್ದ ಒಂದು ಮದುವೆ ಇಂದು ಒಂದೇ ಒಂದು ಸಹಿಯಲ್ಲಿ ಮುಗಿದುಹೋಗುತ್ತಿದೆ. ಹಾಗೆಯೇ ಬೇಡವಾದಾಗಲೆಲ್ಲ ಅದೇ ಒಂದು ಸಹಿಯಿಂದ ಡಿವೋರ್ಸ್ ಪಡೆದು ಬೇರಾಗುತ್ತಿದ್ದಾರೆ. ಹೀಗಾದರೆ ಮ್ಯಾರೀಡ್ ಲೈಫ್ ’ಹ್ಯಾಪಿ’ ಆಗೋದಾದರೂ ಹೇಗೆ?
 ಕಾರಣ ಇಷ್ಟೇ, ಈ 'ಸಹಿ' ಮದುವೆಗಳಲ್ಲಿ ಜವಾಬ್ದಾರಿಗಳ ಬಗೆಗಿನ ಅರಿವು ಇರುವುದಿಲ್ಲ. ಮನೆಯವರ ವಿರೋಧದ ನಡುವೆಯೂ ಮದುವೆಯಾದರೆ ಯಾವ ರೀತಿಯ ಸಹಕಾರಗಳೂ ಸಿಗುವುದಿಲ್ಲ. ನಿಮ್ಮ ಜೀವನವನ್ನು ನೀವೇ ನಿಭಾಯಿಸಿ ಕೊಳ್ಳಬೇಕಾಗುತ್ತದೆ. ಬದುಕಿನ ಅಸಲಿ ದರ್ಶನ ಆಗೋದೇ ಆಗ. ಸಮಸ್ಯೆಗಳು ಒಂದೊಂದಾಗಿ ಹಿತ ಶತ್ರ್ರುಗಳಂತೆ ಕಾಡಲಾರಂಭಿಸುತ್ತವೆ. ಆಗ ಲವ್ ಮ್ಯಾರೇಜ್‌ಗೂ, ಅರೇಂಜ್ ಮ್ಯಾರೇಜ್‌ಗೂ ಇರುವ ವ್ಯತ್ಯಾಸ ಕಣ್ಣೆದುರು ಕುಣಿದಾಡತೊಡಗುತ್ತೆ. ಎಲ್ಲವೂ ಸರಿಯಾಗಿಯೇ ಇದೇ,  ಮನೆಯವರನ್ನು ಎದುರಿಸಿ ಇಷ್ಟಬಂದವರನ್ನು ಮದುವೆಯಾಗಿ ಬದುಕಬಲ್ಲೇ ಎಂಬ ನಂಬಿಗೆ ನಿಮ್ಮಲ್ಲಿದ್ದು, ಅದೃಷ್ಟ ನಿಮ್ಮ ಕೈ ಹಿಡಿದರೆ ನೀವು ಬಚಾವ್, ಇಲ್ಲದಿದ್ದರೇ ನಿಮ್ಮೊಂದಿಗೆ ನಿಮ್ಮನ್ನು ನಂಬಿದವರೂ ಕೂಡ ಬೀದಿ ಪಾಲಾಗೋದು ಖಚಿತ. ಸಂಸಾರದ ನೌಕೆಯಲ್ಲಿ ಬಿರುಕು ಕಾಣಿಸಿಕೊಂಡು ಒಂದು ದಿನ, ಜೀವನವೇ ಮುಳುಗುವುದು ಸತ್ಯ.. ಇದೇ ಎಷ್ಟೋ ಲವ್ ಮ್ಯಾರೇಜ್‌ಗಳ ದುರಂತ ಅಂತ್ಯ.
ಒಂದು ಮದುವೆಗೆ ಪೂರ್ಣ ಅರ್ಥ ಸಿಗುವುದು. ಹಿರಿಯರ ಆಶೀರ್ವಾದದಿಂದ ಮಾತ್ರ. ಏಕೆಂದರೆ, ಎಲ್ಲರಿಂದಲೂ, ಎಲ್ಲ್ಲಾ ತರಹದ ಸಹಕಾರಗಳೂ ಸಿಗುತ್ತವೆ. ಹೇಗೋ ಬದುಕನ್ನು   ಟ್ರ್ಯಾಕ್‌ಗೆ ತಂದುಕೊಳ್ಳಬಹುದು. ಬದುಕಿನಲ್ಲಿ ಗೊತ್ತಿಲ್ಲದೇ ಇಡುವ ತಪ್ಪು ಹೆಜ್ಜೆಗಳನ್ನು ಸರಿ ದಾರಿಗೆ ತರುವಲ್ಲಿ ನಮ್ಮ ಸುತ್ತಲೂ ಇರುವ ದೊಡ್ಡವರು, ಅನುಭವಸ್ಥರು ನೆರವಾಗುತ್ತಾರೆ. ಜೊತೆಗೆ ಆರ್ಥಿಕ ದೃಷ್ಟಿಯಿಂದ ಯೋಚಿಸಿದರೆ ’ಅರೇಂಜ್ ಮ್ಯಾರೇಜ್ ಬೆಟರ್? ಎಂದೆನಿಸುತ್ತದೆ. ಅದರಲ್ಲೂ ಲವ್ ಕಂ ಅರೇಂಜ್ ಮ್ಯಾರೇಜ್ ಆದರೆ ಸ್ವರ್ಗಕ್ಕೇ ಮೂರೇ ಗೇಣು. ಆದರೆ, ಈ ದುಬಾರಿ ಕಾಲದಲ್ಲಿ ಅರೇಂಜ್ ಮ್ಯಾರೇಜ್ ಆಗೋದು ಸುಲಭದ ಮಾತಲ್ಲ. ಯಾವ ವಯಸ್ಸಿನಲ್ಲಿ? ಹೇಗೆ ಮದುವೆಯಾಗಬೇಕು ಎಂಬುದನ್ನು ಒಮ್ಮೆ ಯೋಚಿಸಲೇಬೇಕು.  ಹಾಗಾದರೆ  

* ಮ್ಯಾರೀಡ್ ಲೈಫ್ ಹ್ಯಾಪಿ ಆಗೋದು ಯಾವಾಗ? ಹೇಗೆ? 
    ಈ ಕಾಲದಲ್ಲಿ ಮದುವೆ ಅಂದರೆ ಸುಮ್ಮನೆ ಅಲ್ಲ. ಮದುವೆಯಾದ ನಂತರದ ಆರ್ಥಿಕ ಬದುಕನ್ನು ಮೊದಲೇ ಯೋಜಿಸಬೇಕು. ಹಿಂದೆ ಅವಿಭಕ್ತ ಕುಟುಂಬಗಳಿರುತ್ತಿದ್ದವು, ಎಲ್ಲರೂ ದುಡಿಯುತ್ತಿದ್ದರು, ಎಲ್ಲರೂ ತಿನ್ನುತ್ತಿದ್ದರು. ಹತ್ತರಲ್ಲಿ ಇನ್ನೊಂದು ಅನ್ನೋ ರೀತಿ ಮದುವೆ ಆದರೂ ಅರ್ಥಿಕತೆಯ ಬಗ್ಗೆ ತಲೆ ಕೆಡಿಸಿಕೊಳ್ಳುವ ಪ್ರಮೇಯವೇ ಇರುತ್ತಿರಲಿಲ್ಲ. ಆದರೆ ಈಗ ಅವಿಭಕ್ತ ಕುಟುಂಬಗಳೆಲ್ಲವೂ ಛಿದ್ರವಾಗಿರುವುದರಿಂದ ಮದುವೆ ಎನ್ನುವುದು ಹೊರೆ, ಜವಾಬ್ದಾರಿ ಎನಿಸಲು ಶುರುವಾಗಿದೆ. ಈ ಕಾರಣಕ್ಕೆ ಮದುವೆ ಮುನ್ನ ಹಾಗೂ ನಂತರದ ಹಣಕಾಸಿನ ನಿರ್ವಹಣೆಯ ಬಗ್ಗೆ ಮೊದಲೇ ಲೆಕ್ಕ ಹಾಕುವುದು ಒಳಿತು. 

  * ಬದುಕಿಗೂ ಒಂದು ವಾಟರ್ ಹಾರ್ವೆಸ್ಟಿಂಗ್ ಸಿಸ್ಟಂ ಇರಲಿ : 
    ಬ್ಯಾಚುಲರ್ ಲೈಫ್ ಈಸ್ ಗೋಲ್ಡನ್ ಲೈಫ್? ಅನ್ನೋ ಮಾತಿದೆ. ಹೌದು. ಇದು ನಿಜ. ಸಂಪಾದನೆ ಮಾಡಿದ್ದನ್ನೆಲ್ಲಾ ಖರ್ಚು ಮಾಡಬಹುದು. ಐಷಾರಾಮಿ ಪಾರ್ಟಿಗಳಲ್ಲಿ ಕುಡಿದು ತೇಗಬಹುದು. ತಿಂಗಳಿಗೆ ಇಷ್ಟೇ ಖರ್ಚು ಮಾಡಬೇಕು ಎಂಬ ಬೇಲಿ ಹಾಕಿ ಕೊಳ್ಳದೇ ಇರಬಹುದು. ಇದು ಒಂದು ರೀತಿ ಫ್ರೀಡಂ ಎಂದೆನಿಸಿದರೂ ಮದುವೆ ಆದಾಗ ಇವುಗಳಲ್ಲಿ ಶೇ. ೮೦ರಷ್ಟು ಫ್ರೀಡಂಗೆ ಬ್ರೇಕ್ ಬೀಳುತ್ತದೆ. ಬ್ಯಾಚುಲರ್ ಆಗಿದ್ದಾಗ ಮದುವೆಯ ನಂತರದ ಖರ್ಚುಗಳ ಬಗ್ಗೆ ಯೋಚನೆಯೇ ಬರುವುದಿಲ್ಲ. ಇದೊಂದು ರೀತಿ ಜಗತ್ತನ್ನೇ ಗೆಲ್ಲುವ ಹುಮ್ಮಸ್ಸು ಕೊಡುವ ಅವಧಿ. ಮದುವೆ ಎನ್ನುವ ಆಕರ್ಷಣೆಯಲ್ಲಿ ಮುಳುಗಿ ಬಹುತೇಕರು ಭವಿಷ್ಯದ ಆರ್ಥಿಕತೆಯ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಹೇಗೋ ನಿಭಾಯಿಸಿದರಾಯಿತು ಅನ್ನೋ  ಉಡಾಫೆಯೇ ಹೆಚ್ಚು. ಭಾವನಾತ್ಮಕ, ದೈಹಿಕ ಹಿತ ಎಷ್ಟು ಮುಖ್ಯವೋ ಆರ್ಥಿಕ ಸಬಲತೆಯೂ ಅಷ್ಟೇ ಮುಖ್ಯ. ಆರ್ಥಿಕ ಸಮಸ್ಯೆ ಉಲ್ಬಣವಾದರೆ ಬದುಕಿನ ಉತ್ಸಾಹವನ್ನೇ ಇಂಗಿಸಿಹಾಕುತ್ತದೆ. ಅದಕ್ಕಾಗಿ ಮದುವೆ ಮೊದಲೇ ಇದಕ್ಕೆ ವಾಟರ್ ಹಾರ್ವೆಸ್ಟಿಂಗ್ ಸಿಸ್ಟಂ ತರಹ ಮಳೆ ಬಂದಾಗಲೇ ನೀರನ್ನು ಶೇಖರಿಸಿಟ್ಟುಕೊಳ್ಳಬೇಕು. ದುಡಿಯುವ ಶಕ್ತಿ ಇದ್ದಾಗಲೇ ಹಣವನ್ನು ಸೇವ್ ಮಾಡಿಟ್ಟುಕೊಳ್ಳಬೇಕು.

* ಏನು ಮಾಡಬೇಕು?
    ಮೊದಲು ನೀವು ಮಾಡಬೇಕಾದದ್ದು ಇಷ್ಟೇ. ಎಲ್ಲಾ ಆದಾಯಗಳ ಮೂಲವನ್ನು ಕಲೆಹಾಕಿ. ತಿಂಗಳಿಗೆ ಎಷ್ಟು ಕೈಗೆ ಬರುತ್ತಿದೆ. ಎಷ್ಟು ಖರ್ಚಾಗುತ್ತಿದೆ ಎನ್ನುವುದನ್ನು ಪಟ್ಟಿ ಮಾಡಿ. ಇಲ್ಲಿ ಒಂದು ವಿಷಯ ಗಮನದಲ್ಲಿಟ್ಟುಕೊಳ್ಳಬೇಕು. ಬ್ಯಾಚುಲರ್ ಬದುಕು ಉಳಿತಾಯಕ್ಕೆ ಸೂಕ್ತ ಸಮಯ.  ಶೇ.೮೦ರಷ್ಟು ಉಳಿತಾಯ ಮಾಡಿ, ಶೇ.೨೦ರಷ್ಟು ಖರ್ಚು ಮಾಡಬಹುದಾದ ಕಾಲ ಇದು. ಮದುವೆ ಆಗುವ ತನಕ ನೀವು ಎಷ್ಟು ಹಣ ಉಳಿಸಿದ್ದೀರಿ ಎನ್ನುವುದರ ಮೇಲೆ ನಿಮ್ಮ ಮದುವೆ ನಂತರದ ಬದುಕು ನೆಮ್ಮದಿಯಿಂದ ಇರುತ್ತದೆ.
ಈ ಕಾರಣಕ್ಕಾಗಿಯೇ ಕೆಲಸಕ್ಕೆ ೨೪ರ ವಯಸ್ಸಿಗೆ ಸೇರಿ, ೨೮ರಿಂದ ೩೦ ವರ್ಷದ ತನಕ ಮದುವೆ ಆಗದೇ ಇದ್ದರೆ- ೫-೬ ವರ್ಷದ ತನಕ ನೀವು ಹಣ ಉಳಿಸಬಹುದು. ಇಂದಿನ ಕಾಲದಲ್ಲಿ ಮದುವೆ ಎಂದರೆ ಸುಮ್ಮನೆ ಅಲ್ಲ. ಪ್ರೆಸ್ಟೀಜ್‌ಗಾಗಿ ದಾಂ, ಧೂಂ ಅಂತ ಮದುವೆ ಮಾಡುವುದು ಮುಖ್ಯ ಅಷ್ಟೇ. ಇದು ಹೆಚ್ಚಾಗಿ ಗ್ರಾಮೀಣ ಪ್ರದೇಶದವರ ಮೆಂಟಾಲಿಟಿ. ಒಂದು ವಿಷಯ ಗೊತ್ತಿರಲಿ- ಮದುವೆಯಲ್ಲಿ ತಿಂದು ಹೋದವರೆಲ್ಲಾ ಕಷ್ಟಕ್ಕೆ ಆಗುವುದಿಲ್ಲ. ಅದಕ್ಕೆ ಮೊದಲು ನಿಮ್ಮ ಆದಾಯ ಪಟ್ಟಿ ಮಾಡಿ. ನಿಮ್ಮೊಂದಿಗೆ ಮದುವೆ ಆಗುವವಳ/ ಆಗುವವರ ಅಭಿರುಚಿಗಳನ್ನು ಲೆಕ್ಕ ಹಾಕಿ. ಅಭಿರುಚಿಗಳ ಮೇಲೆ ಖರ್ಚು ನಿರ್ಧಾರಮಾಡಿ.


* ಉಳಿತಾಯದ ಬಹುದೊಡ್ದ ಮೂಲ ಆರೋಗ್ಯ :
    ದಿನನಿತ್ಯದ ಜೀವನದಲ್ಲಿ ನಮ್ಮ ಆರೋಗ್ಯದ ಮಹತ್ವ ಅತೀ ಮುಖ್ಯ. ಆರೋಗ್ಯಕ್ಕಿಂತ ಬೇರೊಂದು ಭಾಗ್ಯವಿಲ್ಲ.  ಅದಕ್ಕಾಗಿಯೇ  ಆರೋಗ್ಯವೇ ಭಾಗ್ಯ?ವೆನ್ನುವುದು. ಹಣ, ಆಸ್ತಿ ಸಂಪಾದಿಸಿದ ಮಾತ್ರಕ್ಕೆ ಸುಖವಾಗಿ ಬದುಕಬಹುದು ಎಂದು ಭಾವಿಸುವುದು ದಡ್ಡತನ. ಒತ್ತಡದ ಮಧ್ಯೆ ಕೆಲಸ ಮಾಡುವಾಗ ಆರೋಗ್ಯದ ಕಡೆ ಹೆಚ್ಚಿನ ನಿಗಾ ವಹಿಸುವುದು ಒಳ್ಳೆಯದು ಇಲ್ಲದಿದ್ದರೆ ಕಷ್ಟ ಪಟ್ಟು ಸಂಪಾದಿಸಿದ ಸಂಪತ್ತನ್ನು ನಿಮ್ಮ ಆರೋಗ್ಯವೇ ಕಿತ್ತುಕೊಂಡುಬಿಡುತ್ತದೆ. ಜೊತೆಗೆ ಒಂದು ಆರೋಗ್ಯ ವಿಮೆ ಇರಲಿ. ಗಂಡ ಹೆಂಡತಿಯರ ಒಟ್ಟಾರೆ ಸಂಬಳದ ಮೂರು ತಿಂಗಳ ಸಂಬಳವನ್ನು ಪ್ರತ್ಯೇಕ ಅಕೌಂಟ್‌ನಲ್ಲಿ ಎತ್ತಿ ಇಡಿ. ಇದನ್ನು ತುರ್ತು ಅಗತ್ಯಕ್ಕೆ ಮಾತ್ರ ಬಳಸುವ ಶಪಥ ಮಾಡಿ. ತುರ್ತು ಎಂದರೆ ಒಂದು ಪಕ್ಷ ಕೆಲಸ ಕಳೆದು ಕೊಂಡ ಸಂದರ್ಭ ಎದುರಾದರೆ, ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ಸೇರಿದರೆ ಆಗ ಬಳಸಬಹುದು. ಕೆಲವು ವಿಮೆಯಲ್ಲಿ ಪ್ರೆಗ್ನೆನ್ಸಿ ಖರ್ಚುಗಳೆಲ್ಲವೂ ಸೇರುತ್ತವೆ. ಅಂಥದ್ದನ್ನು ಆಯ್ದುಕೊಳ್ಳುವುದೇ ಬುದ್ಧಿವಂತಿಕೆ.  ಇನ್ನೊಂದು ಸಂಗತಿಯೇನೆಂದರೆ ಜೀವ ವಿಮೆ ಈ ಕಾಲದಲ್ಲಿ ಬಹಳ ಮುಖ್ಯ. ನಮ್ಮಲ್ಲಿ ಶೇ. ೪೦ರಷ್ಟು ಜನರ ಬ್ಯಾಂಕ್ ಖಾತೆ ಇಲ್ಲ. ಶೇ. ೬೦ರಷ್ಟು ಜನರು ವಿಮೆ ಮಾಡಿಸಿಯೇ ಇಲ್ಲ ಎಂದರೆ ನೀವು ನಂಬಲೇಬೇಕು.. ಈ ಸಾಲಿಗೆ ಹೊಸದಾಗಿ ಮದುವೆ ಆಗುವವರು ಸೇರಬಾರದು. ಒಂದು ಪಕ್ಷ ಗಂಡ ಹೆಂಡತಿಯರಲ್ಲಿ ಇಬ್ಬರಲ್ಲಿ ಒಬ್ಬರು ಮರಣ ಹೊಂದಿದರೆ- ಉಳಿದವರ ಜೀವನ ನಿರ್ವಹಣೆಗೆ ತೊಂದರೆಯಾದಾಗ ಹಾಗೇ ಪ್ಲಾನ್ ಮಾಡಬೇಕು. ಇದಕ್ಕಾಗಿ ವರ್ಷದ ಒಟ್ಟು ಆದಾಯದ ೧೦ಪಟ್ಟು ದುಡ್ಡು ಬರುವಂತೆ ವಿಮೆ ಪಾಲಿಸಿ ಮಾಡಿಸಿದರೆ ಒಳಿತು.


* ಗೂಡು ಕಟ್ಟುವ ಗುರಿಯಿರಲಿ :
ಒಂದು ಸಾಮಾನ್ಯ ಗುಬ್ಬಚ್ಚಿ ತನ್ನ ಜೀವಿತಾವಧಿಯಲ್ಲಿ ೩-೪ ಗೂಡುಗಳನ್ನು ಕಟ್ಟುತ್ತದೆಯಂತೆ. ಯಾವುದೇ ಪ್ರಾಣಿಯಾಗಲಿ, ಪಕ್ಷಿಯಾಗಲಿ ತನ್ನದೇ ಆದ ಗೂಡು ನಿರ್ಮಿಸಿಕೊಳ್ಳುವುದು ಪ್ರಕೃತಿಯ ನಿಯಮ. ಏಕೆಂದರೆ ಮನೆ ನೆಮ್ಮದಿಯ ಸಂಕೇತ. ಆದರೆ ಯಾವುದೇ ಮನುಷ್ಯ ತನ್ನ  ಜೀವಿತಾವಧಿಯಲ್ಲಿ ಒಂದೇ ಒಂದು ಮನೆಯನ್ನು ನಿರ್ಮಿಸಲು ಜೀವನವಿಡೀ ಕಷ್ಟಪಡಬೇಕಾಗುತ್ತೆ. ಈ ಕಾಲದಲ್ಲಿ ಮನೆ ಕಟ್ಟಿಕೊಳ್ಳುವುದು ಸಾಧಾರಣ ವಿಷಯವಲ್ಲ. ಅದೊಂದು ಸಾಧನೆ. ಸ್ವಂತ ಮನೆ ಕೊಳ್ಳಲು ಮದುವೆಯ ಮೊದಲೇ ಪ್ಲಾನ್ ಮಾಡಬೇಕು. ಮನೆಗಾಗಿಯೇ ಇಷ್ಟು ಅಂಥ ಉಳಿಸಬೇಕು. ಇದಕ್ಕೂ ಮೊದಲು ಉಳಿತಾಯಕ್ಕೆ ಲೆಕ್ಕ ಮಾಡಿ. ಏಕೆಂದರೆ ಈಗ ಪ್ರತಿ ವರ್ಷ ಮನೆ ಮಾರುಕಟ್ಟೆ ಬೆಲೆ ಶೇ.೧೦ ರಿಂದ ೧೫ರಷ್ಟು  ಹೆಚ್ಚಳವಾಗುತ್ತಿದೆ ಎನ್ನುವುದು ನಿಮ್ಮ ನೆನಪಿನಲ್ಲಿರಲಿ.  ಅದಕ್ಕೆ, ಹಿರಿಯರು ಹೇಳಿರೋದು 'ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು' ಎಂದು.

* ದುಡ್ಡು ಉಳಿಸುವ ಭರದಲ್ಲಿ ಸಂತೋಷಕ್ಕೆ ಭಗ್ನ ಬರದಿರಲಿ :
ಬಿಡುವಿಲ್ಲದ ದುಡಿಮೆ, ಬದುಕು ಕಟ್ಟಿಕೊಳ್ಳುವ ತವಕ, ಹೆಜ್ಜೆ ಹೆಜ್ಜೆಗೂ ಲೆಕ್ಕ. ಹೀಗೆ ದುಡ್ಡು ಉಳಿಸುವ ಭರದಲ್ಲಿ ಇರುವ ಸಂತೋಷದ ಕ್ಷಣಗಳನ್ನು ಹಾಳು ಮಾಡಿಕೊಳ್ಳದಿರಿ. ಸಾಮಾನ್ಯವಾಗಿ ಮದುವೆಯ ನಂತರ ಮನಸ್ಸು, ಮತ್ತು ದೇಹ ಸಂತೋಷವನ್ನು ಹೆಚ್ಚು ಇಷ್ಟಪಡುತ್ತವೆ. ಆ ಸಂತೋಷದ ಕ್ಷಣಗಳಿಗೆ ಎಂದೂ ಬ್ರೇಕ್ ಹಾಕಬೇಡಿ. ಏಕೆಂದರೆ, ಆ ಕ್ಷಣಗಳು ಮತ್ತೆ ಜೀವನದಲ್ಲಿ ಮರುಕಳಿಸುವುದಿಲ್ಲ. ಜತೆಗೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಇದು ಸೂಕ್ತ ಸಮಯ. ಆದ್ದರಿಂದ ವಾರಂತ್ಯದ ಔಟಿಂಗ್ ಅಥವಾ ತಿಂಗಳಾಂತ್ಯದ ಔಟಿಂಗ್ ಹೋಗಬೇಕಾ? ಹೋದರೆ ಎಲ್ಲಿಗೆ, ಹೇಗೆ? ಯಾವಾಗ, ಎಷ್ಟು ದುಡ್ಡು ಖರ್ಚಾಗುತ್ತೆ ಎನ್ನುವ ಪ್ಲಾನ್ ಮೊದಲೇ ಮಾಡಿಟ್ಟುಕೊಳ್ಳಿ. ಈ ಸಂತೊಷದ ಕ್ಷಣಗಳಿಗೂ ನಿಮ್ಮ ಲೆಕ್ಕದಲ್ಲಿ ಸ್ವಲ್ಪ ಪಾಲಿರಲಿ. ಮುಖ್ಯವಾಗಿ ಒಂದು ನೆನಪಿಡಿ. ಜೀವನಕ್ಕಾಗಿ ಉಳಿತಾಯ ಅನಿವಾರ್ಯ, ಆದರೆ ಉಳಿತಾಯವೇ ಜೀವನವಲ್ಲ.!  

Saturday 7 September 2013

ಕಾಲಚಕ್ರದಲ್ಲಿ ' ಸೈಕಲ್ '


ಒಂದೆಡೆ ಶಕ್ತಿಹೀನವಾಗಿ ಮುಗ್ಗರಿಸಿ ಮುಗ್ಗರಿಸಿ ಬೀಳುತ್ತಿರೋ ರೂಪಾಯಿ ಮೌಲ್ಯ, ಇನ್ನೊಂದೆಡೆ ಜನರಿಗೆ ಬೆಲೆ ಏರಿಕೆಯ ಚಾಟಿ ಏಟು. ಈ ಮಧ್ಯೆ ಪೆಟ್ರೋಲನ್ನು ಮಿತವಾಗಿ ಬಳಸಿ, ಬಂಗಾರದ ಖರೀದಿಯಿಂದ ಬಲು ದೂರವಿರಿ ಎಂದು ಬೊಂಬಡ ಹೊಡೆಯುತ್ತಿರುವ ಚಿದಂಬರಂ ಹಾಗೂ ಮನಮೊಹನ್ ಸಿಂಗ್. ಇದಾವುದಕ್ಕೂ ಕೇರ್ ಮಾಡದೇ ತನ್ನ ಹಟ ಬಿಡದೇ ಬೆಲೆ ಏರಿಕೆ ಚಾಟಿ ಏಟಿನ ನೋವನ್ನು ಅನುಭವಿಸಿದರೂ ಬದಲಾಗದ ಭಾರತದ ಜನತೆ.  ಹೀಗೆ ಜನತೆ ಸಂಕಷ್ಟಗಳನ್ನು ತಾವೇ ಸೃಷ್ಟಿಸಿಕೊಳ್ಳುತ್ತಿದ್ದಾರೆ. ಅರೇ..! ಭಾರತ ಬಡಪಾಯಿಯೇ? ಎಂದು ಕೇಳುತ್ತಿದ್ದೀರಾ.? ಹೌದು, ಪ್ರಪಂಚದ ಅತೀ ಬಡ ದೇಶಗಳ ಸಾಲಿಗೆ ಭಾರತ ಸೇರುವ ದಿನಗಳು ದೂರವೇನಿಲ್ಲ. ಏಕೆಂದರೆ ದೇಶದ ಆರ್ಥಿಕ ಸ್ಥಿತಿ ದಿವಾಳಿಯತ್ತ ಸಾಗುತ್ತಿದೆ. ನಿಮಗೆ ಗೊತ್ತಿದೆ, ಒಂದು ದೇಶದ ಉನ್ನತಿ ಆ ದೇಶವನ್ನಾಳುವ ಸರ್ಕಾರಕ್ಕಿಂತ ಅಲ್ಲಿ ಬದುಕುವ ಜನರ ಶ್ರಮ, ಜೀವನಶೈಲಿ ಹಾಗೂ ಮನಸ್ಥಿತಿಗಳ ಮೇಲೆ ನೇರವಾಗಿ ಅವಲಂಬಿಸಿರುತ್ತದೆ. ಒಂದು ಸರ್ಕಾರದಿಂದ ದೇಶವನ್ನು ಬದಲಿಸಲು ಸಾಧ್ಯವಿಲ್ಲ. ಏಕೆಂದರೆ ಅದು ಜನರ ಕೈಯಲ್ಲಿಯೇ ಇದೆ. ಮೊದಲು ಜನರು ಬದಲಾಗಬೇಕು, ಆಗ ದೇಶ ತಂತಾನೆಯೇ ಬದಲಾಗಿಬಿಡುತ್ತದೆ.
ಮುಂದೊಂದು ದಿನ ಪೆಟ್ರೋಲ್ ಡೀಸೆಲ್‌ಗಳ ಬೆಲೆ ಬಂಗಾರದ ಬೇಲೆಯನ್ನು ಹಿಂದಿಕ್ಕಿ ಸಾಗುವ ಸೂಚನೆಗಳು ಈಗಾಗಲೇ ಸಿಕ್ಕಾಗಿದೆ. ಏಕೆಂದರೆ ನಮ್ಮ ದೇಶಕ್ಕೆ ಆಮದಾಗುವ  ವಸ್ತುಗಳಲ್ಲಿ ಪೆಟ್ರೋಲಿಯಂಗೆ ಮೊದಲ ಸ್ಥಾನ(ಶೇ. ೬೦ಕ್ಕೂ ಹೆಚ್ಚು) ಎರಡನೆಯ ಸ್ಥಾನ ಮಾಯಾವಿ ಲೋಹ ಬಂಗಾರದ್ದು (ಶೆ.೩೫ ಕ್ಕೂ ಹೆಚ್ಚು.) ಉಳಿದ ಶೇ.೫ ರಲ್ಲಿ ಮೊಬೈಲ್, ಪರ್ಫ್ಯೂಮ್, ಸೌಂದರ್ಯವರ್ಧಕ ವಸ್ತುಗಳು ಸೇರಿದಂತೆ ಇತರೆ ವಸ್ತುಗಳು.  ಇದರಿಂದ ಸ್ಪಷ್ಟವಾಗುವ ಸಂಗತಿಯೇನೆಂದರೆ ಶೇ.೫೦ ರಷ್ಟು ವಿದೇಶಿಗರ ವಸ್ತುಗಳ ಮೇಲೇಯೇ ನಾವು ಅವಲಂಬಿತವಾಗಿದ್ದೇವೆ ಎಂಬುದು.
ಡೀಸೆಲ್ ಪೆಟ್ರೋಲ್‌ನ ಬೆಲೆಗಳು ಗಗನಕ್ಕೇರುವ ಸೂಚನೆ ಈಗಾಗಲೇ ಸಿಕ್ಕಾಗಿದೆ. ಇದಕ್ಕೆ ಅಮೇರಿಕಾದ ಅಧ್ಯಕ್ಷ ಒಬಾಮಾ ಒಕೆ ಎನ್ನುವುದೊಂದೇ ಬಾಕಿ. ಅರೇ..! ಒಬಾಮಾಗೂ, ಪೆಟ್ರೋಲ್ ಬೆಲೆಗೂ ಏನು ಸಂಬಂಧ ಎಂದು ಯೋಚಿಸುತ್ತಿದ್ದೀರಾ? ಹೌದು, ಖಂಡಿತ ಸಂಬಧವಿದೆ.  ಸಿರಿಯಾ ಸೇರಿದಂತೆ ಅನೇಕ ರಾಷ್ಟ್ರಗಳ ಮೇಲೆ ಅಮೇರಿಕ ದಾಳಿಮಾಡಿ ಆ ದೇಶಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಹಾತೊರೆಯುತ್ತಿದೆ.  ಹಾಗೇನಾದರೂ ಆದರೆ ನಮಗೆ ಸಿಗುವ ’ದ್ರವ ರೂಪದ ಬಂಗಾರ’ ಎನ್ನುವ  ಕಚ್ಚಾ ತೈಲವನ್ನು ಅಮೇರಿಕ ಕಸಿದು ಕೊಳ್ಳಲಿದೆ. ಆಗ ಪೆಟ್ರೋಲ್ ಬೆಲೆ ನೂರರ ಗಡಿ ದಾಟುವುದರಲ್ಲಿ ಅನುಮಾನವೇ ಇಲ್ಲ.  ಆಗಲೂ ನಿಮ್ಮ ಬೈಕ್‌ಗೆ ಪೆಟ್ರೋಲ್ ಹಾಕುವ ಶಕ್ತಿ ನಿಮ್ಮಲ್ಲಿರುತ್ತಾ? ದುಡಿದದ್ದನ್ನೆಲ್ಲಾ ಪೆಟ್ರೋಲ್‌ಗೆ ವ್ಯಯಿಸಿದರೆ ಬದುಕಲಿಕ್ಕೇ? ಸಾಧ್ಯವೇ ಇಲ್ಲ. ಅದರಲ್ಲೂ ಮಿಡ್ಲ್‌ಕ್ಲಾಸ್ ಜನರಂತೂ ಅನಿವಾರ್ಯವಾಗಿ ಬದಲಾಗಲೇಬೇಕಾಗುತ್ತದೆ.
ಹೀಗೆ, ಬೈಕ್‌ಗಳನ್ನು ಮೂಲೆಯಲ್ಲಿ ಮುಚ್ಚಿಟ್ಟು ಕಾಲುಗಳಿಗೆ ಕೆಲಸ ಕೊಡಲೇಬೇಕಾಗುತ್ತೆ. ಆದರೆ ಇಂತಹ ಸ್ಥತಿಯಲ್ಲಿ ಸೈಕಲ್ ನಮ್ಮನ್ನು ಕೈ ಹಿಡಿದು ನಡೆಸಲಿದೆ. ಆಗ ಮತ್ತೊಮ್ಮೆ ಕಾಲಚಕ್ರದಲ್ಲಿ ಸೈಕಲ್‌ಗೆ ಅಗ್ರಪಟ್ಟ ದೊರೆಯುವುದರಲ್ಲಿ ಅನುಮಾನವೇ ಇಲ್ಲ. ನಗರ ಪ್ರದೇಶಗಳಲ್ಲಿ ಸಾಮಾನ್ಯ ಜನರ ಆರ್ಥಿಕ ಸ್ಥ್ಥಿತಿಯನ್ನು ಒಂದು ಸೈಕಲ್ ಸುಸ್ಥಿತಿಯಲ್ಲಿಡುತ್ತದೆ ಎನ್ನುವುದು ಅತಿಶಯೋಕ್ತಿ ಎನಿಸಿದರೂ ನಂಬಲೇಬೇಕಾದ ಸಂಗತಿ. ಹಾಗಾದರೆ ಬೈಕ್, ಕಾರ್‌ಗಳನ್ನು ಬಿಟ್ಟು ಸೈಕಲ್ ಬಳಸಿದರೆ ದೇಶ ಬದಲಾಗುತ್ತಾ ? ಖಂಡಿತ, ದೇಶ ಬದಲಾಗದಿದ್ದರೂ ನಿಮ್ಮ ಆರ್ಥಿಕ ಸ್ಥಿತಿ. ನಿಮ್ಮ ಆರೋಗ್ಯ,  ವಾಯುಮಾಲಿನ್ಯ, ಶಬ್ದಮಾಲಿನ್ಯ, ಟ್ರಾಫಿಕ್ ಸಮಸ್ಯೆ, ಅಪಘಾತಗಳ ಸಂಖ್ಯೆ, ಪೋಲಿಸರಿಗೆ ನೀವು ಕಟ್ಟುವ ದಂಡದಲ್ಲಿ ಹೀಗೆ ಅನೇಕ ರೀತಿಯಲ್ಲಿ ಬದಲಾವಣೆಗಳಂತೂ ಆಗೋದು ಸತ್ಯ.  ಜನಸಂಖ್ಯೆ ಬೆಳೆದಂತೆ ನಗರಗಳು, ನಾಗರೀಕತೆಗಳು ಬೆಳೆಯುತ್ತಲೇ ಇವೆ. ನಗರಪ್ರದೇಶಗಳಲ್ಲಂತೂ ಜನಸಂಖ್ಯೆಯಷ್ಟೇ ಸಮಸ್ಯೆಗಳೂ ಬೆಳೆಯುತ್ತಿವೆ. ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ಕೆಲವು ಸಮಸ್ಯೆಗಳಿಗೆ ಉತ್ತರ ಹುಡುಕುವುದು ಸಮಸ್ಯೆಗಳಷ್ಟೇ ಕಷ್ಟದ ಕೆಲಸವಾಗಿದೆ.
ಒಂದೆಡೆ ಟ್ರಾಫಿಕ್ ಸಮಸ್ಯೆಯಾದರೆ ಮತ್ತೊಂದೆಡೆ ವಾಯುಮಾಲಿನ್ಯ, ಶಬ್ದಮಾಲಿನ್ಯ. ನಗರಗಳ ಈ ಸಾಮಾನ್ಯ ಸಮಸ್ಯೆಗಳಿಗೆ ಸರಳವಾದ ಉತ್ತರ ಹುಡುಕುವುದರಲ್ಲಿ ಕೆಲವು ವಿಭಿನ್ನ ಯೋಚನೆಗಳು ಸಹಾಯಕವಾಗಬಲ್ಲವು. ಅದರಲ್ಲಿ ನಗರ ಪ್ರದೇಶದ ಜನರನ್ನು ಹೆಜ್ಜೆ ಹೆಜ್ಜೆಗೂ ಬೆಂಬಿಡದೆ ಕಾಡುವ ಟ್ರಾಫಿಕ್ ಸಮಸ್ಯೆ ಹಾಗೂ ವಾಯುಮಾಲಿನ್ಯದಂತಹ ಸಮಸ್ಯೆಗಳಿಗೆ ಪರಿಹಾರವನ್ನು ಕಂಡು ಕೊಳ್ಳುವ ದಾರಿಯಲ್ಲಿ ನೂರಾರು ಫ್ಲೈ ಓವರ್‌ಗಳು, ಸಬವೇಗಳು ಕಟ್ಟಿದರೂ ಅದ್ಯಾಕೋ ಸಮಸ್ಯೆ ಬಗೆ ಹರಿಯುವಂತಿಲ್ಲ.
ಒಂದು ರೀತಿಯಲ್ಲಿ ಮೇಲೆ ಹೇಳಿದ ಎಲ್ಲ್ಲಾ ಸಮಸ್ಯೆಗಳಿಗೆ  ಸೈಕಲ್ ಸರಳ ಪರಿಹಾರವೇನೋ ಹೌದು,  ಅಂದಮಾತ್ರಕ್ಕೆ ನಾವು ತುಳಿಬೇಕಾ?  ’ನೋ ನೋ ಇಂಪಾಸಿಬಲ್, ನಾನೇನು, ನನ್ ಪ್ರೆಸ್ಟೀಜ್ ಏನು.? ಸೈಕಲ್ ತೊಗೊಂಡು ಕೆಲಸಕ್ಕೆ ಹೋಗ್ಬೇಕಾ? ನೋಡಿದೋರು ಏನ್ ಅಂದ್ಕೋತಾರೆ?  ಎನ್ನುವ ’ಅಹಂ’ ಎಲ್ಲರಲ್ಲೂ ಕಾಡುತ್ತದೆ. ಮನೆಯಿಂದ ಆಫೀಸ್ ೨-೩ ಕಿಲೋಮೀಟರ್ ದೂರವಿದ್ದರೂ, ಅಥವಾ ನಡೆದು ಹೋಗಬಹುದಾದಷ್ಟು ದೂರವಿದ್ದರೂ ನಾವು ಟುವೀಲರ್‌ನ್ನೇ ಅವಲಂಬಿಸಿರುತ್ತೇವೆ. ಏಕೆಂದರೆ ಕೆಲವರಿಗೆ ಸೈಕಲ್ ತುಳಿಯುವುದರಲ್ಲಿ ಪ್ರೆಸ್ಟೀಜ್ ಪ್ರಾಬ್ಲಮ್. ಆದರೆ, ಕೆಲವು ದೇಶಗಳಲ್ಲಿ ಸೈಕಲ್ ತುಳಿದರೆ ಪ್ರೆಸ್ಟೀಜ್ ಹಾಳಾಗುತ್ತೆ ಎನ್ನುವ ಅಳುಕಿಲ್ಲ. ಶೇ.೯೯ ರಷ್ಟು ಜನ ಸೈಕಲ್ ಉಪಯೋಗಿಸೊ ನಗರಗಳೂ ಈ ವಿಶ್ವದಲ್ಲಿವೆ ಎಂದರೆ ನೀವೂ ನಂಬಲೇಬೇಕು. ನಮ್ಮ ಬೆಂಗಳೂರಿನಂತಹ ನಗರಗಳಿಗೆ ಸೈಕಲ್ ಅನಿವಾರ್ಯತೆ ತುಂಬಾ ಇದೆ.
ವಾಹನ ಸಂಖ್ಯೆ ಏರಿದಾಗ ರಸ್ತೆಯಲ್ಲಿ ವಾಹನಗಳು ಕಿಕ್ಕಿರಿಯುತ್ತವೆ. ಅದರಿಂದ ಟ್ರಾಫಿಕ್ ಜಾಮ! ಈ ಟ್ರಾಫಿಕ್ ಜಾಮ ಸಮಸ್ಯೆಗೆ ಪರಿಹಾರದ ರೂಪವಾಗಿ ಕೋಟಿ ಕೋಟಿ ರೂಪಾಯಿ ಖರ್ಚು. ಇಂದು ಫ್ಲೈಓವರ್, ಅಂಡರ್ ಪಾಸ್, ಅಗಲವಾದ ರಸ್ತೆಗಳು - ಹೀಗೆ ಅವೈಜ್ಞಾನಿಕ ಯೋಜನೆಗಳಿಗೆ ವ್ಯಯ ಮಾಡುತ್ತಿರುವ ಹಣದ ಪ್ರಮಾಣ ತುಂಬಾ ದೊಡ್ಡದು. ಈ ಸಮಸ್ಯೆಯಿಂದ ಮುಕ್ತಿ ಪಡೆಯುಲು ಸೈಕಲ ಒಂದು ಉತ್ತಮ ಪರಿಹಾರವಾಗಿದ್ದರೂ ಅದನ್ನು ‘ಕೀಳು’ ಎಂದು ಕೆಲವರು ಪರಿಗಣನೆಗೆ ತೆಗದುಕೊಳ್ಳುವುದಿಲ್ಲ. ಆದರೆ ಆ ಸೈಕಲ್ ಬದುಕನ್ನೇ ಎಷ್ಟು ಸರಳವಾಗಿಸುತ್ತದೆ ಎಂಬುದಕ್ಕೆ ನಿದರ್ಶನಗಳಿಲ್ಲಿವೆ.
  ಒಂದು ಮೊಂಡುವಾದವೆಂದರೆ ಸೈಕಲ ಅತ್ಯಂತ ನಿಧಾನವಾಗಿ ಚಲಿಸುವುದರಿಂದ ಅಧುನಿಕ ‘ವೇಗ’ ಆಧಾರಿತ ಸಮಾಜದಲ್ಲಿ ಸೈಕಲ ಸೂಕ್ತ ವಾಹನವಲ್ಲ. ಅದನ್ನು ವಾಸ್ತವದಲ್ಲಿ ಬಳಸುವುದಕ್ಕೆ ಆಗುವುದಿಲ್ಲ ಎಂಬುದು. ಆದರೆ ಸರ್ಕಾರ ಕೈಗೊಂಡ ಸಮೀಕ್ಷೆಯ ಪ್ರಕಾರ, ನಗರ ಪ್ರದೇಶದಲ್ಲಿ ಕಾರ್‌ನ ವೇಗ ಸೈಕಲ ವೇಗಕ್ಕಿಂತಲೂ ಕಡಿಮೆ.
 ನಗರದ ಒಳಗೆ ಸಂಚರಿಸುವಾಗ ಸೈಕಲ ಅತ್ಯಂತ ಕಡಿಮೆ ಸಮಯವನ್ನು ಮತ್ತು ಜಾಗವನ್ನು ತೆಗೆದುಕೊಳ್ಳುತ್ತದೆ. ಕಾರ್/ಬೈಕ್ ಐದು ವರ್ಷದಲ್ಲಿ ಹಳೆಯದಾಗುತ್ತದೆ. ಅದನ್ನು ನಿರ್ವಹಿಸಲು ತಗಲುವ ಖರ್ಚು ಅಸಲಿಗಿಂತ ಹೆಚ್ಚು. ಆದರೆ ಸೈಕಲ ನಿರ್ವಹಣಾ ವೆಚ್ಚ ಬಹಳ ಕಡಿಮೆ. ಅಲ್ಲದೆ ಸ್ವತಃ ನಾವೇ ಸೈಕಲ ರಿಪೇರಿ ಮಾಡಿಕೊಳ್ಳಲೂಬಹುದು.
  ವಿಶ್ವಬ್ಯಾಂಕ್ ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಹೆಚ್ಚು ಸಾವು ಮತ್ತು ರೋಗಗಳು ಸಂಭವಿಸುವುದು ಹೃದಯಾಘಾತ ಅಥವಾ ಮಧುಮೇಹದಂಥ ಕಾಯಿಲೆಗಳಿಂದ. ಈಗಿನ ಕಾಲದಲ್ಲಿ ಬಹುತೇಕರು ಕುರ್ಚಿ ಮೇಲೆ ಕುಳಿತು ಗಂಟೆಗಟ್ಟಲೆ ಕೆಲಸ ಮಾಡುವುದರಿಂದ ದೇಹಕ್ಕೆ ಯಾವುದೇ ರೀತಿಯ ವ್ಯಾಯಾಮವಿಲ್ಲದೆ ಹೃದಯಾಘಾತ ಅಥವಾ ಮಧುಮೇಹ ದಾಳಿ ಇಡುವ ಸಾಧ್ಯತೆ ಇದ್ದೇ ಇರುತ್ತದೆ. ನಿತ್ಯ ಸೈಕಲ ತುಳಿಯುವುದರಿಂದ ಬೊಜ್ಜು ಬರುವುದಿಲ್ಲ. ಹೃದಯ ನಿತ್ರಾಣವಾಗುವುದಿಲ್ಲ. ಸತತವಾಗಿ ಸೈಕಲ ತುಳಿದರೆ ಶ್ವಾಸಕೋಶದ ಕ್ಷಮತೆ ಕೂಡ ಹೆಚ್ಚುತ್ತದೆ. ನಮ್ಮ ಇಂದ್ರಿಯಗಳು ಸೂಕ್ಷ್ಮ, ಮತ್ತು ಕ್ರೀಯಾಶೀಲವಾಗುತ್ತವೆ.
   ಮತ್ತೊಂದು ದೃಷ್ಟಿಯಿಂದ ನೋಡಿದರೆ ಸೈಕಲ ಅಹಿಂಸೆಯ ವಾಹನ. ಕಾರ್ ಮತ್ತು ಇತರೆ ಮೋಟಾರು ವಾಹನಗಳು ತೆಗೆದುಕೊಂಡ ನರಬಲಿಗಳೆಷ್ಟೋ? ಅದೆಷ್ಟು ಮಂದಿ ಅಂಗವಿಕಲರಾಗಿರುವರೋ? ಅರೆಕ್ಷಣ ಅವಸರದಿಂದ ಚಲಿಸಿ ಅಪಘಾತಕ್ಕೀಡಾಗಿ ಜೀವನ ಪರ್ಯಂತ ನೋವನ್ನು ಅನುಭವಿಸುತ್ತಿರುವವರೆಷ್ಟೋ? ರಸ್ತೆಯಲ್ಲಿ ದೂಳು-ಶಬ್ದದ ಪ್ರವಾಹದಲ್ಲಿ ಚಲಿಸಿದರೆ ಸಾಕು ಕಣ್ಣಿನಲ್ಲಿ ಉರಿ, ಕಿವಿಯಲ್ಲಿ ಕಿರಿಕಿರಿ, ಬಾಯಲ್ಲಿ ಉರಿ ಉರಿ..ರಸ್ತೆಯುದ್ದಕ್ಕೂ ಸಮಸ್ಯೆಗಳ ಮೆರವಣಿಗೆ. ಅದಲ್ಲದೆ ಮೋಟಾರು ವಾಹನಗಳಲ್ಲಿ ಸಂಚರಿಸುವಾಗ ಭಯವು ದಶದಿಕ್ಕುಗಳಲ್ಲಿಯೂ ನಮ್ಮನ್ನು ಕಾಡುತ್ತಿರುತ್ತದೆ. ರಸ್ತೆಯ ಮುಂದೆ ಅಗೆದಿರುವ ಗುಂಡಿಯಿಂದಲೋ, ಮೇಲಿಂದ ಬೀಳುವ ಮರದಿಂದಲೋ ಅಥವಾ ಸುತ್ತಮುತ್ತಲೂ ನಿಯಂತ್ರಣವಿಲ್ಲದೆ ವೇಗವಾಗಿ ಚಲಿಸುವ ವಾಹನಗಳಿಂದಲೋ ಭೀತಿ ಇರುತ್ತದೆ. ಪುಟ್ಟಪುಟ್ಟ ಮಕ್ಕಳಂತೂ ರಸ್ತೆಯಲ್ಲಿ ಹೆಜ್ಜೆ ಇಟ್ಟರೆ ತಂದೆ ತಾಯಿಗಳ ಎದೆ ಢವಢವ! ಹೀಗೆ, ಭಯಭೀತಿಯನ್ನು ಹೆಗಲಿಗೆ ಏರಿಸಿಕೊಂಡು ವೇಗವಾಗಿ ಚಲಿಸುವ ಉಸಾಬರಿ ಕಂಡರೆ ಇದು ಎಲ್ಲಿಗೆ ಹೋಗಿ ಮುಟ್ಟೀತೋ ಹೇಳಲಾಗದು. ಆದರೆ ಸೈಕಲ ತುಳಿಯುವಾಗ ನಾವು ತನ್ಮಯರಾಗಿ ನಮ್ಮ ಪಾಡಿಗೆ ನಾವು ಯಾರಿಗೂ ಭಯವನ್ನು ಉಂಟುಮಾಡದೆ ಚಲಿಸುವ ಸಾಧ್ಯತೆಯಿದೆ
   ಬೆಂಗಳೂರಿನಲ್ಲಿ ಮೆಟ್ರೋ ಕಾಮಗಾರಿ ಮುಗಿದ ಬಳಿಕ ಮೆಟ್ರೋ ಸ್ಟೇಷನ್‌ಗಳಲ್ಲಿ ವಾಹನಗಳನ್ನು ನಿಲ್ಲಿಸಲು ಸ್ಥಳದ ಅಭಾವವಿರುತ್ತದೆ ಎಂಬುದು ತಜ್ಞರ ಅಭಿಪ್ರಾಯ. ಆದರಿಂದ ಮೆಟ್ರೋ ಸ್ಟೇಷನ್ ತಲುಪಲು ಸೈಕಲ ಬಳಸಿದರೆ ಸ್ವಲ್ಪಮಟ್ಟಿನ  ಪರಿಹಾರ ಕಂಡುಕೊಳ್ಳಬಹುದು..

* ಪೆಟ್ರೋಲ್ ಉಳಿತಾಯ ಅನಿವಾರ್ಯ, ಆದರೆ ಹೇಗೇ?
*  ಸಿಗ್ನಲ್‌ಗಳಲ್ಲಿ ನಿಮ್ಮ ವಾಹನವನ್ನು ಆಫ್ ಮಾಡುವುದರಿಂದ ನೀವು ಬಳಸುವ ಶೇ. ೭ ರಷ್ಟು ಪೆಟ್ರೋಲ್ ಸೇವ್ ಮಾಡಬಹುದು.
*  ಅನಿವಾರ್ಯ ಕಾರಣಗಳಲ್ಲಿ ದೂರದ ಪ್ರಯಾಣಕ್ಕೆ ಸಾರ್ವಜನಿಕ ಸಾರಿಗೆಗೆ ಮೊರೆಹೋಗಿ. ಅದು ನಿಮ್ಮ ಬೈಕ್ ಅಥವಾ ಕಾರ್ ಗೆ ತುಂಬಿಸುವ ಇಂಧನದ ದರಕ್ಕಿಂತ ಕಡಿಮೆ ಹಾಗೂ ಸುರಕ್ಷಿತ ಪ್ರಯಾಣ.
*  ಚಿಕ್ಕ ಪುಟ್ಟ ಓಡಾಟಗಳಿಗಾಗಿ ಸೈಕಲ್ ಬಳಸಿ. ನಗರ ಪ್ರದೇಶಗಳಲ್ಲಿ ಸೈಕಲ್ ಬಳಕೆ ನಿಮ್ಮ ಆದಾಯಕ್ಕೆ ಪ್ಲಸ್ ಪಾಯಿಂಟ್ ಆಗಬಲ್ಲದು. ಹಾಗೂ ವಾಯುಮಾವಾಲಿನ್ಯ ಶಬ್ದಮಾಲಿನ್ಯಗಳನ್ನು  ತಡೆಯಬಹುದು.
*  ಸೈಕಲ್ ಓಡಿಸಬೇಕೆ ಎಂಬ ಕೀಳರಿಮೆ ಬೇಡ. ಏಕೆಂದರೆ ಸೈಕಲ್ ತುಳಿಯುವುದಕ್ಕಿಂತ ಉತ್ತಮವಾದ ವ್ಯಾಯಾಮ ಬೇರೊಂದಿಲ್ಲ.

* ಒಮ್ಮೆ ಮನಸ್ಸು ಮಾಡಿ..
ದೊಡ್ಡವರು, ಚಿಕ್ಕವರು, ಯುವಕರು, ಯುವತಿಯರು ಎಂಬ ಬೇಧವಿಲ್ಲದೇ ನಿಮ್ಮೆಲ್ಲಾ ಅಹಂನ್ನು ಬದಿಗಿಟ್ಟು ಒಂದು ಸೈಕಲ್ ಕೊಂಡುಕೊಳ್ಳಿ, ನಿಮ್ಮ ಪ್ರೆಸ್ಟೀಜ್‌ಗೆ ಹಾನಿಯಾಗದಿರುವ ಜಾಗದಲ್ಲಾದರೂ ಸೈಕಲ್ ಓಡಿಸಲು ಪ್ರಯತ್ನಿಸಿ. ಒಂದು ನಗರವನ್ನು ಬದಲಾಯಿಸಬೇಕಾದರೆ ಅದು ಒಬ್ಬರಿಂದ ಮಾತ್ರ ಸಾಧ್ಯವಿಲ್ಲ. ಪ್ರತಿಯೋಬ್ಬರೂ ಅದಕ್ಕೆ ಕೈ ಜೋಡಿಸಲೇಬೇಕು. ನಿಮ್ಮ ಆರೋಗ್ಯ, ಐಶ್ವರ್ಯ ಹೆಚ್ಚಿಸಿಕೊಳ್ಳುವುದರಿಂದ ನಗರದಲ್ಲಿನ ಹಲವಾರು ಸಮಸ್ಯೆಗಳನ್ನು ಕಡಿಮೆ ಮಾಡಬಹುದೆಂದಾದರೆ ನೀವೇಕೆ ಒಂದು ಸೈಕಲ್ ಕೊಳ್ಳಬಾರದು?. ನೆನಪಿಡಿ. ಎರಡು ಕಿ.ಮೀ ದೂರ ಇರುವ ಆಫೀಸ್‌ಗೆ ಹೋಗುವುದಕ್ಕಾಗಿ ಬೈಕ್, ಕಾರ್ ಕೊಳ್ಳಬೇಕು ಎಂದು ಯೋಚಿಸುತ್ತಿದ್ದರೆ ಒಮ್ಮೆ ಸೈಕಲ್ ಕೊಳ್ಳುವ ಧೈರ್ಯಮಾಡಿ. ಎಲ್ಲಾ ಕೆಲಸಕ್ಕೂ ಸೈಕಲ್ ಬಳಸಲು ಸಾಧವಾಗುವುದಿಲ್ಲ. ಆದರೆ ಚಿಕ್ಕ ಪುಟ್ಟ ಓಡಾಟಗಳಿಗಾದರೂ ಸೈಕಲ್ ಸಾವಾರಿ ಸೇಫ್ ಅಲ್ಲವೇ? ಇನ್ನು ಕಾಲೇಜ್‌ಗೆ ಹೋಗುವ ಯುವಕ ಯುವತಿಯರು ಬೈಕ್ ಬದಲು ಸೈಕಲ್ ಬಳಸಿದರೆ ತಪ್ಪೇನು? ನಿಮ್ಮ ಬಗ್ಗೆ ಮತ್ತೊಬ್ಬರು ಏನು ಮಾತನಾಡಿಕೊಳ್ಳುತ್ತಾರೆ ಎನ್ನುವುದು ಮುಖ್ಯವಲ್ಲ. ನಿಮ್ಮ ಆರೋಗ್ಯ, ನಿಮ್ಮ ಜೇಬು ಗಟ್ಟಿಯಾಗಿರುವುದು ಮುಖ್ಯ.

ಹೆಚ್ಚು ಸೈಕಲ್‌ಗಳನ್ನು ಬಳಸುತ್ತಿರುವ ಟಾಪ್ 5 ದೇಶಗಳು :
ನೆದರ್‌ಲ್ಯಾಂಡ್ - ಶೇ.೯೯.೧  ರಷ್ಟು (ಅಸ್ಟ್ರಡಾಮ್ ನಗರ), ಡೆನ್ಮಾರ್ಕ್ ? ಶೇ.೮೦.೧  ಜರ್ಮನಿ - ಶೇ.೭೫.೮,
ಸ್ವೀಡನ್ ? ಶೇ.೬೩.೭ ನಾರ್ವೆ - ಶೇ.೬೦.೭

Monday 2 September 2013

ಬದುಕನ್ನೇ ಬದಲಿಸುವ ಒಂದು ಆಯ್ಕೆ

ವಯಸ್ಸು ಹದಿನಾರು ಕಳೆದು ಹದಿನೇಳಕ್ಕೆ ಕಾಲಿಡುತ್ತಿದ್ದಂತೆ ಮನಸ್ಸು ಇಲ್ಲಸಲ್ಲದ್ದನ್ನೆಲ್ಲಾ ಬೇಡಲು ಶುರುವಿಟ್ಟುಕೊಳ್ಳುತ್ತದೆ. ಕಾಲೇಜ್ ಕ್ಯಾಂಪಸ್‌ನಲ್ಲಿ ಕುಳಿತು ಮನಸ್ಸು ಮಂಗನಂತಾ ಡಲಾರಂಭಿಸುತ್ತೆ. ಬೇಡಿಕೆಗಳು ಬೆಂಬಿಡದೇ ಕಾಡತೊಡಗುತ್ತವೆ. ಆ ಸಾಲಿನಲ್ಲಿ ಮೊಬೈಲ್‌ಗೆ ಮೊದಲ ಸ್ಥಾನ. ಏಕೆಂದರೆ ಇಡೀ ಪ್ರಪಂಚವನ್ನೇ ಬೆರಳ ತುದಿಯಲ್ಲಿ ತಡಕಾಡುವ ತವಕ. ಬದುಕಿನ ಅಂತರಾಳವನ್ನು ಅರಿಯುವ ಆತುರ. ಹರೆಯದ ಬಯಕೆಗಳನ್ನು ತೀರಿಸಿಕೊಳ್ಳುವ ಕಾತುರ.
ಈ ಕಾಲೇಜ್ ಎನ್ನುವ ಏಜಿನಲ್ಲಿ ಸಾಮಾನ್ಯವಾಗಿ ಹದಿಹರೆಯದವರನ್ನು ಇ-ಮೇಲ್, ಫೇಸ್‌ಬುಕ್, ಟ್ವಿಟರ್, ಚಾಟಿಂಗ್ ಅನ್ನುವ ಚಟಗಳು ಸದ್ದಿಲ್ಲದೇ ಅಂಟಿಕೊಂಡು ಬಂಗಾರದಂತೆ ಬೆಲೆ ಬಾಳುವ ಸಮಯವನ್ನು ತಿಂದುಹಾಕುತ್ತವೆ. ಪುಸ್ತಕದ ಜಾಗದಲ್ಲಿ ಮೊಬೈಲ್ ಬಂದು ಪುಸ್ತಕದ ಅಂತರವನ್ನು ಹೆಚ್ಚಿಸುತ್ತಾ ಹೋಗುತ್ತದೆ. ಕಾಲೇಜ್ ಕಾಲದಲ್ಲಿ ಬೇಕಾಗಿರುವುದು ಪುಸ್ತಕ ಎಂಬ ಗುಡ್ ಫ್ರೆಂಡೇ ಹೊರತು. ಮೊಬೈಲ್ ಎಂಬ ಬ್ಯಾಡ್ ಪ್ರೆಂಡ್ ಅಲ್ಲ.
ಬುದ್ಧಿ ಹೆಚ್ಚಲು ಪುಸ್ತಕದ ಓದು ನಮ್ಮದಾಗಬೇಕು. ನಮ್ಮ ಮೊದಲ ಸ್ನೇಹಿ ಅದಾಗಿದ್ದರೆ ಜೀವನವೇ ಗೆದ್ದಂತೆ. ಕೈಯಲ್ಲೊಂದು ಪುಸ್ತಕ ಹಿಡಿದುಕೋ ಆಗ ನಿನಗಾಗುವ ಅರಿವೇ ಬೇರೆ. ನಿನ್ನೆಡೆಗೆ ಒದಗಿ ಬರುವ ಗೌರವವೇ ಬೇರೆ ಎಂದು ಪ್ರಾಧ್ಯಾಪಕರು, ಪೋಷಕರು ಯುವ ಮನಸ್ಸುಗಳಿಗೆ ಹೇಳುತ್ತಲೇ ಇರುತ್ತಾರೆ. ಆದರೆ ಸ್ಮಾರ್ಟ್ ಜಗತ್ತಿನ ಸ್ಮಾರ್ಟ್ ಫೋನ್ ಬಳಕೆಯ ಈ ಯುಗದಲ್ಲಿ ನಮಗ್ಯಾಕೆ ಬೇಕು ಪುಸ್ತಕ? ಕೈಯಲ್ಲಿ ಹೊರಳಾಡಿಸುವ ಸೆಲ್ ನಲ್ಲೇ ಮಾಹಿತಿಯನ್ನೆಲ್ಲ್ಲಾ ತುಂಬಿಕೊಂಡು ಆರಾಮವಾಗಿದ್ದುಬಿಡುತ್ತೇವೆ ಎನ್ನುತ್ತವೆ ಇಂದಿನ ಯುವ ಮನಸ್ಸುಗಳು.
ಹೌದು ಬದಲಾಗುತ್ತಿದೆ ಇಂದಿನ ಟ್ರೆಂಡ್ ಎನ್ನುವ ಮಾತಿನ ಮೊದಲ ಸೂಚ್ಯಂಕವೇ ಎಲ್ಲಾ ಯುವಕ-ಯುವತಿಯರ ಕೈಯಲ್ಲಿ ಕಂಡುಬರುತ್ತಿರುವ ಸೆಲ್ ಫೋನ್. ಕ್ಯಾಂಪಸ್‌ನಲ್ಲಿ ಇದರ ಹಾವಳಿ ಅಷ್ಟಿಷ್ಟಲ್ಲ. ಇದು ಒಬ್ಬರಿಗೊಬ್ಬರು ತಮ್ಮ ಸಾಮರ್ಥ್ಯ ಹೇಳಿಕೊಂಡಂತೆ. ಸೆಲ್ ಫೋನ್‌ನಲ್ಲಿರುವ ಮಟೀರಿಯಲ್‌ಗಳು ಇಲ್ಲಿ ಅಗಾಧ ಚರ್ಚೆಗೆ ಗ್ರಾಸವಾಗಿವೆ. ಇದೊಂದು ಆಧುನಿಕ ಜಗತ್ತಿನ ಮನಸ್ಸುಗಳನ್ನು ಹೆಣೆದುಕೊಂಡಿರುವುದರ ಜತೆಗೆ ಅಷ್ಟೇ ವೇಗವಾಗಿ ಒಬ್ಬರಿಗೊಬ್ಬರನ್ನು ದೂರ ಮಾಡುವ ಸಾಮರ್ಥ್ಯವನ್ನೂ ಹೊಂದಿದೆ.  ಕಾರಿಡಾರ್ ಮುಂದೆ ಬಂದ ದೊಡ್ಡವರನ್ನು ಕಂಡಾಗ ಅವರಿಗೆ ನಾವು ಗೌರವವನ್ನು ಸೂಚಿಸುತ್ತೇವೆ ಎಂದಾದರೆ ಕಿವಿಯಲ್ಲಿ ಇಟ್ಟುಕೊಂಡ ಇಯರ್‌ಫೋನ್ ಆಚೆ ತೆಗೆದಿದ್ದೇವೇ ಎಂದರ್ಥ. ಇದು ಕ್ಯಾಂಪಸ್‌ನ ಮಾಡ್ರನ್ ಸೆಲ್ಯೂಟ್.
ಸೆಲ್ ಎಷ್ಟರ ಮಟ್ಟಿಗೆ ಆವರಿಸಿಕೊಂಡಿದೆ ಎಂದರೆ ಪುಸ್ತಕವನ್ನಿಟ್ಟುಕೊಳ್ಳುವ ಭರಾಟೆ ಇಲ್ಲ. ಅತ್ಯಂತ ದೊಡ್ಡ ಜಗತ್ತನ್ನು ಪುಟ್ಟ ಪ್ರಪಂಚದಲ್ಲಿ ನೋಡಬಹುದಾದರೆ ಅದು ಸೆಲ್ ನಲ್ಲಿ ಮಾತ್ರ. ಹಾಗಾಗಿ ಇ-ಬುಕ್, ಮತ್ತು ಅವರವರ ಮನಸ್ಥಿತಿಗೆ ಇಷ್ಟವಾಗುವ ಅಪ್ಲಿಕೇಷನ್‌ಗಳು ಸುಲಭವಾಗಿ ಸೆಳೆದುಕೊಂಡು ಬಿಡುತ್ತವೆ. ಕಾಲೇಜು ಮೆಟ್ಟಿಲು ಏರಬಯಸುವ ಪ್ರತಿಯೊಂದು ಯುವ ಮನಸ್ಸಿನ ಮೊದಲ ಆಯ್ಕೆ ಇಂದು ಸೆಲ್‌ಫೋನ್ ಆಗಿದೆ. ಅತ್ಯಂತ ಸಹಾಯಕಾರಿ ಯುವ ಬಂಧುವಾದ ಇದು ಅಷ್ಟೇ ನಿಖರವಾಗಿ ಹಾದಿ ತಪ್ಪಿಸುತ್ತಿರುವ ಕೆಟ್ಟ ಚಟವೂ ಹೌದು.
 ಇಂದು ಮೊಬೈಲ್ ಫೋನ್‌ಗಳ ಬಳಕೆ ಅನಿವಾರ್ಯವೂ ಹೌದು. ಆದರೆ ಅದು ಅನಿವಾರ್ಯ ಕಾರ್ಯಗಳಿಗೆ ಬಳಕೆಯಾದಾಗ ಮಾತ್ರ ಅದರ ಸದುಪಯೋಗವಾಗುತ್ತೆ. ಇಲ್ಲದಿದ್ದರೆ ಮೊಬೈಲ್‌ನ ಪುಟ್ಟ ಸ್ಕ್ರೀನ್ ಕೆಟ್ಟ ಚಟಗಳಿಗೆದಾರಿ ಮಾಡಿಕೊಡುತ್ತದೆ. ಮೊಬೈಲೋ, ಪುಸ್ತಕವೂ ಆಯ್ಕೆ ನಿಮಗೆ ಬಿಟ್ಟಿದ್ದು ಏಕೆಂದರೆ ನಿಮ್ಮ ಭವಿಷ್ಯ ನಿಮ್ಮ ಆಯ್ಕೆಯಲ್ಲಿಯೇ ಇದೆ.


ಇಡ್ಲಿ , ಸಾಂಬಾರೇ ಸ್ಟ್ರಾಂಗು ಗುರು ...

ಮೊನ್ನೆ ತಮಿಳುನಾಡಿನ ಜಯಲಲಿತಾ ನೇತೃತ್ವದ ಸರ್ಕಾರ ಚೆನ್ನೈ ಮಹಾನಗರಿಯಲ್ಲಿ ಇಡ್ಲಿ, ಸಾಂಬಾರ್ ಮತ್ತು ಕಾಫಿಯ ಬ್ರೇಕ್‌ಫಾಸ್ಟ್ ಪ್ಯಾಕೇಜ್  ಘೋಷಣೆ ಮಾಡಿದ ಮೇಲೆ ಬಹುಮಂದಿ ಲೇವಡಿ ಮಾಡಿದ್ದರು.
ನಿಮಗೆ ಗೊತ್ತೇ..? ಸದ್ಯ ಭಾರತದ ಮಹಾನಗರಗಳಲ್ಲಿ  ಬೆಳಗಿನ ಪೌಷ್ಠಿಕ ಉಪಹಾರ ಸೇವಿಸುವುದರಲ್ಲಿ ಚೆನ್ನೈ ಬೆಸ್ಟ್ ಅಂತೆ.
ಅಲ್ಲಿನ ಸರ್ಕಾರ ಮೂರು ಇಡ್ಲಿ, ಒಂದು ಬೌಲ್ ಸಾಂಬಾರ್, ಫಿಲ್ಟರ್ ಕಾಫಿಯನ್ನು ಟ್ರೆಡಿಷನಲ್ ಬ್ರೇಕ್‌ಫಾಸ್ಟ್ ರೂಪದಲ್ಲಿ ನೀಡುತ್ತಿದೆ. ಮೆಟ್ರೋ ನಗರಗಳ  ಬ್ರೇಕ್‌ಫಾಸ್ಟ್ ಹ್ಯಾಬಿಟ್ ಬಗ್ಗೆ ಸಮೀಕ್ಷೆಯೊಂದು ನಡೆದಿದೆ. ಮುಂಬೈ, ದೆಹಲಿ, ಕೋಲ್ಕತ್ತಾದಲ್ಲಿರುವ ೮ ರಿಂದ ೪೦ ವರ್ಷದೊಳಗಿನ ೩೬೦೦ ಮಂದಿಯನ್ನು ಗುಂಪುಗಳಾಗಿ ವಿಂಗಡಿಸಿ ಸಮೀಕ್ಷೆ ನಡೆಸಲಾಗಿದೆ.
ಇಲ್ಲಿ ಬಂದ ರಿಸಲ್ಟ್ ಏನು ಗೊತ್ತೇ.? ಈ ನಗರಗಳ ಬೆಳಗಿನ ಉಪಹಾರ ಅಗತ್ಯ ಪೌಷ್ಠಿಕಾಂಶಗಳನ್ನು ಒಳಗೊಂಡಿಲ್ಲವಂತೆ. ಎಷ್ಟಾದರೂ ನಮ್ಮವರು ಈಗೀಗ ಆರೋಗ್ಯದ ಕಡೆ ಎಚ್ಚರಿಕೆ ವಹಿಸುತ್ತಿದ್ದಾರೆ. ಜೀವನಶೈಲಿ ಬದಲಾಗುತ್ತಿದ್ದಂತೆಯೇ ಊಟ ಮತ್ತು ಉಪಹಾರದ ವರ್ತನಾ ವಿಶೇಷಗಳೂ ಹೆಚ್ಚುತ್ತಿವೆ.
ಕಾರ್ಬೋಹೈಡ್ರೇಟ್ ಎನರ್ಜಿ, ಪ್ರೋಟೀನ್ ಫ್ಯಾಟ್ ಮತ್ತು ಕ್ಯಾಲ್ಸಿಯಂಗಳ  ಪೌಷ್ಠಿಕಾಂಶಗಳ ಆಧಾರದಲ್ಲಿ ಉಪಹಾರದ ಸಮೀಕ್ಷೆ ನಡೆಸಲಾಗಿದೆ. ಮುಂಬೈನಲ್ಲಿ ಶೇ.೭೯ ಮಂದಿ ಪೂರಕ ಪೌಷ್ಠಿಕಾಂಶವಿಲ್ಲದ ಉಪಹಾರ ಸೇವಿಸಿದರೆ, ದೆಹಲಿ ಮತ್ತು ಕೋಲ್ಕತ್ತಾದಲ್ಲಿ ಶೇ.೭೬ರಷ್ಟು ಮಂದಿ, ಚೆನ್ನೈನಲ್ಲಿ ಶೇ.೬೦ ರಷ್ಟು ಮಂದಿಯ ಉಪಹಾರ ಪೌಷ್ಠಿಕ ಪೂರಿತವಾಗಿಲ್ಲವಂತೆ. ಕೋಲ್ಕತ್ತಾದ ಪಾರಂಪರಿಕ ಉಪಹಾರದಲ್ಲಿ ಅತಿಯಾದ ಮೈದಾವಿದ್ದು, ಇದು  ಕಾರ್ಬೋಹೈಡ್ರೇಟ್ ಹೆಚ್ಚಿಸಲಿದೆಯಂತೆ. ಇನ್ನು ದೆಹಲಿಯ ಪರೋಟಾದಲ್ಲಿ ಅತಿ ಹೆಚ್ಚು ತೈಲವಿದ್ದರೆ, ಮುಂಬೈನ  ಬ್ರೇಕ್‌ಫಾಸ್ಟ್‌ನಲ್ಲೂ ಇದೇ ಸಮಸ್ಯೆಯಂತೆ.
ಅಂದಹಾಗೆ ಗ್ರಾಮೀಣ ಪ್ರದೇಶದ ಮಂದಿ ಬಳಸುವ ರಾಗಿಯಲ್ಲಿ ವಿಟಮಿನ್-ಬಿ, ಫೈಬ್ರೋಸ್, ಪ್ರೋಟೀನ್ ಕ್ಯಾಲ್ಸಿಯಂ, ಐರನ್ ಮತ್ತು ಫಾಸ್ಪರಸ್ ಹೆಚ್ಚಿದೆಯಂತೆ. ಇಡ್ಲಿ, ಸಾಂಬಾರ್ ಪರಿಪೂರ್ಣ ಊಟ ಎನ್ನುವುದು ಕೆಲವು ತಜ್ಞರ ಅಭಿಪ್ರಾಯ.
ಅದರಲ್ಲೂ ಅಕ್ಕಿ ಮತ್ತು ಉರಾದ್‌ದಾಲ್ (ಉದ್ದಿನಬೇಳೆ) ಬಳಸಿದ  ಇಡ್ಲಿ ಪ್ರೋಟೀನ್‌ಯುಕ್ತ ವಾಗಿದೆಂಯಂತೆ.
ಮತ್ತೊಂದು ವಿಷಯ ಗೊತ್ತೇ? ಭಾರತದ ನಾಲ್ವರಲ್ಲಿ ಒಬ್ಬರು ಬೆಳಗಿನ ಉಪಹಾರವನ್ನು ತಪ್ಪಿಸಿಕೊಳ್ಳುತ್ತಾರಂತೆ. ಊಟ ಅಥವಾ ಉಪಹಾರವನ್ನು ತಪ್ಪಿಸಿಕೊಳ್ಳುವುದು ಮತ್ತು ಮಿತಗೊಳಿಸುವುದೂ ಆರೋಗ್ಯಕ್ಕೆ ಅಪಾಯಕಾರಿ ಎನ್ನುವುದು ಈ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.
ಇಷ್ಟೇ ಅಲ್ಲ ದಕ್ಷಿಣ ಭಾರತದ ಶೇ.೭೦ ರಷ್ಟು ಜನರು ಇಷ್ಟ ಪಡುವ ಉಪಹಾರ ಇದೇ ಇಡ್ಲಿಯಂತೆ. ನೀರಿನ ಹಬೆಯಲ್ಲಿ ಇಡ್ಲಿಯನ್ನು ಬೇಯಿಸುವುದರಿಂದ ಆನಾರೋಗ್ಯ ಕ್ಕೊಳಗಾದವರಿಗೆ ಶೇ.೮೦ರಷ್ಟು ವೈದ್ಯರು ಸೂಚಿಸುವ ಉಪಹಾರ ಇದೇ ಇಡ್ಲಿ. ಇಷ್ಟೊಂದು ಜನಪ್ರೀಯತೆ ಪಡೆದ ದಕ್ಷಿಣ ಭಾರತದ ಈ ಇಡ್ಲಿ ಖಾದ್ಯ ಹುಟ್ಟಿದ್ದು ಎಲ್ಲಿ? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ ಓದಿ...
     ಇಡ್ಲಿ ಹುಟ್ಟಿದ್ದು ಎಲ್ಲಿ..?
ಇಡ್ಲಿ ದಕ್ಷಿಣ ಭಾರತದ ಸಾಂಪ್ರದಾಯಿಕ ತಿನಿಸುಗಳಲ್ಲಿ ಒಂದು. ಪ್ರಧಾನವಾಗಿ ಅಕ್ಕಿ ಮತ್ತು ಉದ್ದಿನಬೇಳೆಯಿಂದ ತಯಾರಿಸಲ್ಪಡುವ ಇಡ್ಲಿ ಸಾಮಾನ್ಯವಾಗಿ ತಿಂಡಿಯಾಗಿ ತಿನ್ನಲ್ಪಡುತ್ತದೆ. ಇಡ್ಲಿಯನ್ನು ಚಟ್ನಿ ಮತ್ತು ಸಾಂಬಾರ್ ಜೊತೆಗೆ ನೀಡಲಾಗುತ್ತದೆ. ಇಡ್ಲಿ, ದಕ್ಷಿಣ ಭಾರತದ ಪ್ರಾಚೀನ ಉಪಹಾರಗಳಲ್ಲಿ ಒಂದು. ಹಳೆಗನ್ನಡ ಲೇಖಕ ಶಿವಕೋಟ್ಯಾಚಾರ್ಯರ (ಕ್ರಿ.ಶ. ೯೨೦) ಬರಹಗಳಲ್ಲಿ ಇಡ್ಲಿಯ ಪ್ರಸ್ತಾಪ ಬಂದಿದೆ. ಆ ಕಾಲದಲ್ಲಿ ಇಡ್ಲಿಯನ್ನು ಮಾಡಲು ಉದ್ದಿನ ಬೇಳೆಯನ್ನು ಮಾತ್ರ ಉಪಯೋಗಿಸುತ್ತಿದ್ದರೆಂದು ಕಂಡುಬರುತ್ತದೆ. ಕ್ರಿ.ಶ. ೧೦೨೫ ರ ಒಂದು ದಾಖಲೆಯಂತೆ ಉದ್ದಿನ ಬೇಳೆಯನ್ನು ಮಜ್ಜಿಗೆಯಲ್ಲಿ ನೆನೆಸಿ, ರುಬ್ಬಿ, ಮೆಣಸು, ಕೊತ್ತಂಬರಿ ಇಂಗು ಮೊದಲಾದವನ್ನು ಸೇರಿಸಿ ಇಡ್ಲಿ ಹಿಟ್ಟನ್ನು ಸಿದ್ಧಪಡಿಸುತ್ತಿದ್ದರು. ಮೂರನೆಯ ಸೋಮೇಶ್ವರ ತನ್ನ ಸಂಸ್ಕೃತ ಗ್ರಂಥವಾದ ಮಾನಸೋಲ್ಲಾಸದಲ್ಲಿ (ಕ್ರಿ.ಶ. ೧೧೩೦) ಇಡ್ಲಿ ತಯಾರಿಸುವ ವಿಧಾನವನ್ನು ವರ್ಣಿಸಿದ್ದಾನೆ. ಮೊದಲ ಬಾರಿಗೆ ಇಡ್ಲಿಯನ್ನು ಕುರಿತ ಉಲ್ಲೇಖವಿರುವುದು ೧೭ನೆಯ ಶತಮಾನದ ತಮಿಳಿನ ಗ್ರಂಥಗಳಲ್ಲಿ, ಆದರೆ ೧೭ನೇ ಶತಮಾಕ್ಕಿಂತ ಮೊದಲೇ ಕನ್ನಡದಲ್ಲಿ ಇಡ್ಲಿಯ ಕುರಿತು  ಕ್ರಿ.ಶ. ೯೨೦ರ ವಡ್ಡಾರಾಧನೆ ಗ್ರಂಥದಲ್ಲಿ ಇಡ್ಲಿಯ ಬಗ್ಗೆ ಬರೆದಿದ್ದಾರೆಂದರೆ, ಅದು ಅದಾಗಲೇ ಕರ್ನಾಟಕದಲ್ಲಿ ಸರ್ವೇಸಾಮಾನ್ಯವಾಗಿದ್ದ ತಿಂಡಿ ಎಂದರ್ಥ. ಆದ್ದರಿಂದ ಇಡ್ಲಿಯ ಕಾಲ ಕ್ರಿ.ಶ. ೯೨೦ ಕ್ಕಿಂತಲೂ ಹಿಂದಿನದು. ಆದ್ದರಿಂದ ನಿಸ್ಸಂಶಯವಾಗಿ ಇಡ್ಲಿ ಹುಟ್ಟಿದ್ದು ಕರ್ನಾಟಕದಲ್ಲಿ, ಇದನ್ನು ಕಂಡುಹಿಡಿದವರು ಹತ್ತನೆಯ ಶತಮಾನಕ್ಕೂ ಹಿಂದಿನ ಕನ್ನಡಿಗರು ಎಂದು ನಂಬಲಾಗಿದೆ. ಇತಿಹಾಸ ಏನೇ ಇರಲಿ ಇಡ್ಲಿ ತನ್ನ ರುಚಿಯಲ್ಲಿ ಯಾವ ಉಪಹಾರಗಳೊಂದಿಗೆ ಎಂದಿಗೂ ರಾಜಿ ಮಾಡಿಕೊಂಡಿಲ್ಲ. ನಿಮಗೆ ಗೊತ್ತಿರಬಹುದು, ಅನಾರೋಗ್ಯ ಸ್ಥಿತಿಯಲ್ಲಿ ರೋಗಿಗೆ ವೈದ್ಯರು ಸೂಚಿಸುವ ಮೊದಲ ತಿನಿಸು ಇಡ್ಲಿ. ಏಕೆಂದರೆ ನೀರಿನ ಹಬೆಯಲ್ಲಿ ಬೆಂದ ಇಡ್ಲಿ ಆರೋಗ್ಯಕ್ಕೆ ಉತ್ತಮ ಎಂಬುದೇ ಕಾರಣ. ಆದ್ದರಿಂದ ಇಡ್ಲಿ ಸರ್ವಕಾಲಕ್ಕೂ ಸರ್ವರೂ ಇಷ್ಟಪಡುವ ಏಕೈಕ ಉಪಹಾರ. ಕಾಲ ಬದಲಾದಂತೆ ಇಡ್ಲಿಯ ಆಕಾರ, ಬಣ್ಣ, ರುಚಿಗಳಲ್ಲಿ ಬದಲಾವಣೆಗಳಾಗಿವೆ. ಇತ್ತೀಚಿನ ದಿನಗಳಲ್ಲಿ  ರವೆ ಇಡ್ಲಿ, ತಟ್ಟೆ ಇಡ್ಲಿ, ಬಟ್ಟಲು ಇಡ್ಲಿ , ಕಾಂಚೀಪುರಮ್ ಇಡ್ಲಿ, ಹೀಗೆ ಇಡ್ಲಿಯಲ್ಲಿ ಅನೇಕ ರೂಪಾಂತರಗಳಾಗಿ ಬದಲಾಗಿವೆ.

   ತುಮಕೂರು ತಟ್ಟೆ ಇಡ್ಲಿ ತವರೂರು
 
ಹಲವು ವರ್ಷಗಳ ಹಿಂದೆ ಪ್ರಯೋಗಾತ್ಮಕವಾಗಿ ದೋಸೆಯಷ್ಟು ಅಗಲದ ಇಡ್ಲಿಗಳನ್ನು ಕರ್ನಾಟಕದ ತುಮಕೂರು ಜಿಲ್ಲೆಯ ಕ್ಯಾತ್ಸಂದ್ರದಲ್ಲಿರುವ ನಟರಾಜ ಹೊಟೆಲ್ ಮಾಲೀಕರು ತಯಾರಿಸಿದ್ದರು. ಅತೀ ಶೀಘ್ರ ದಲ್ಲಿಯೇ ಅದು ಪ್ರಸಿದ್ಧವಾಯಿತು. ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಇರುವ ಆ ಹೊಟೆಲ್‌ಗೆ ಬರುವವರ ಸಂಖ್ಯೆ ಹೆಚ್ಚಾಯಿತು. ಕ್ಯಾತ್ಸಂದ್ರ ಊರನ್ನು ತಟ್ಟೆ ಇಡ್ಲಿಯಿಂದಲೇ ಗುರುತಿಸುವಂತಾಯಿತು. ಇನ್ನು ತಟ್ಟೆ ಇಡ್ಲಿ ಎಂದ ತಕ್ಷಣ ಎಲ್ಲರಿಗೂ ಮೊಟ್ಟ ಮೊದಲಿಗೆ ನೆನಪಾಗುವುದು ನಟರಾಜ ಹೊಟೆಲ್.