Friday, 16 March 2018

ನಾಲಿಗೆಯಲ್ಲಿರಲಿ ನೂರು ಭಾಷೆ , ಮನಸ್ಸಿನಲ್ಲಿರಲಿ ಮಾತೃಭಾಷೆ

ಕನ್ನಡ ನಮ್ಮ ಮಾತೃಭಾಷೆ, ಸಾವಿರಾರು ವರ್ಷಗಳ ಇತಿಹಾಸವಿರುವ ನಮ್ಮ ಭಾಷೆಗೆ ಇಂದು ಭಯ  ಆವರಿಸಿಕೊಳ್ಳುತ್ತಿದೆ. ಕನ್ನಡ ಉಳಿಸಿ, ಕನ್ನಡ ಬೆಳೆಸಿ ಎಂದು ಒತ್ತಿ ಒತ್ತಿ ಹೇಳುವ ಅನಿವಾರ್ಯತೆ ಎದುರಾಗಿದೆ. ಕನ್ನಡಿಗರಾಗಿ ಕನ್ನಡ  ಮಾತನಾಡಲು ಹೆಮ್ಮೆ ಪಡುವವರಿಲ್ಲ. ಅದಕ್ಕೆ ಬದಲಾಗಿ ಕನ್ನಡ ಮಾತನಾಡಿದರೆ ಕೀಳು ಭಾವನೆ ಮೂಡವಂತಹ ಸ್ಥತಿ ನಮ್ಮಲ್ಲಿ ಸೃಷ್ಟಿಯಾಗಿದೆ. ಬೆಂಗಳೂರಿನಂತಹ ನಗರದಲ್ಲಿ ಎಲ್ಲಿ ನೋಡಿದರೂ ಇಂಗ್ಲೀಷ್, ತಮಿಳು, ತೆಲುಗು ಭಾಷೆಗಳ ಅಬ್ಬರದಲ್ಲಿ ಕನ್ನಡ ಕಳೆದು ಹೋಗುತ್ತಿದೆ.
ಕನ್ನಡವನ್ನು ಉಳಿಸಿ ಪ್ಲೀಸ್....! ಎಂದು ಬೇಡುವ ಬೀದಿಗೊಂದು ಕನ್ನಡ ಸಂಘಗಳು. ದಿನಕ್ಕೊಂದು ಪ್ರತಿಭಟನೆಗಳು. ಬಹುಶಃ ಕನ್ನಡಕ್ಕಾಗಿ ಕನ್ನಡ ನೆಲದಲ್ಲೇ ಕನ್ನಡ ಸಂಘ ಸಂಸ್ಥೆ, ಕನ್ನಡ ವೇದಿಕೆಗಳನ್ನು ಕಟ್ಟಿಕೊಳ್ಳುವಂತಹ ದುರ್ವಿಧಿ ಕನ್ನಡಿಗರದ್ದಾಗಿರುವುದು ನೋವಿನ ವಿಷಯ. ಆದರೆ, ಪ್ರಸ್ತುತ ಪರಿಸ್ಥಿತಿಯನ್ನು ನೋಡಿದಾಗ, ಇದು ಅನಿವಾರ್ಯವೇ ಅಥವಾ ಅನಾವಶ್ಯಕವೇ ಎಂದು ಚರ್ಚಿಸಹೊರಟರೆ, ಚರ್ಚೆ ಒಂದು ಕೊನೆ ಕಾಣಬಹುದು ಎಂದು ನನಗನ್ನಿಸುವುದಿಲ್ಲ. ವಿಷಯ ನೂರಾರು ದಿಕ್ಕಿಗೆ ವಿಸ್ತರಿಸಿಕೊಂಡು, ಅನಗತ್ಯ ಮನಸ್ತಾಪಕ್ಕೆ ಎಡೆಮಾಡಿಕೊಟ್ಟರೂ ಆಶ್ಚರ್ಯವಿಲ್ಲ. ಆ ಕಾರಣಗಳಿಂದಲೇ ಇರಬೇಕು, ಇಂತಹ ಸೂಕ್ಷ್ಮ ವಿಷಯವೊಂದನ್ನು, ಗಂಭೀರವಾಗಿ ಪರಿಗಣಿಸಿ, ಕನ್ನಡ ವಿರೋಧಿ ಸರ್ಕಾರಗಳಿಗೂ, ಕನ್ನಡತನವನ್ನೇ ಕಳೆದುಕೊಂಡು ಬದುಕುತ್ತಿರುವ ಜನಗಳಿಗೂ ಛೀಮಾರಿ ಹಾಕುವಂತಹ ಧೈರ್ಯ ಮಾಡದೇ, ಕರ್ನಾಟಕದಲ್ಲಿ ಅಲ್ಪ ಸಂಖ್ಯಾತರಂತೆ ಬದುಕುತ್ತಿದ್ದೇವೆ.
"ಕರ್ನಾಟಕದಲ್ಲಿ ಕನ್ನಡ ಸಂಘಗಳನ್ನು ಕಟ್ಟುವುದರಿಂದ ನಾವು ಅಲ್ಪಸಂಖ್ಯಾತರೆಂದೂ, ಅಮೋಘ ವೈಭವದಿಂದ ಮೆರೆಯಬೇಕಾಗಿದ್ದ, ಶ್ರೀಮಂತ ಭಾರತೀಯ ಭಾಷೆಗಳಲ್ಲೊಂದಾದ "ಕನ್ನಡ" ವಿನಾಶದ ಅಂಚಿನಲ್ಲಿದೆಯೆಂದೂ ನಾವೇ ತೋರಿಸಿಕೊಡುತ್ತಿದ್ದೇವೆ.. ಇಂತಹ ಸೂಕ್ಷ್ಮಾತೀಸೂಕ್ಷ್ಮವಾದ ಸತ್ಯವನ್ನು ಕನ್ನಡಿಗರಿಗೆಲ್ಲಾ ತಲುಪಿಸಿ, ಅವರಲ್ಲಿ ಭಾಷಾಭಿಮಾನವನ್ನು ಬಿತ್ತಿ, ನಮ್ಮ ಶೌರ್ಯವನ್ನೇನಿದ್ದರೂ ಕರ್ನಾಟಕದಿಂದಾಚೆ ತೋರಿಸಬೇಕೆ ವಿನಃ, ನಮ್ಮೂರಲ್ಲಿ ನಮ್ಮವರೊಂದಿಗೆ ಹೊಡೆದಾಡುವುದರಿಂದಲ್ಲ. ಜೊತೆಗೆ ಕನ್ನಡ ಭಾಷಾಭಿವೃದ್ಧಿಗೆ ಪಣತೊಟ್ಟು, ಸರ್ಕಾರವನ್ನು ಮುಲಾಜಿಲ್ಲದೆ ತರಾಟೆಗೆ ತೆಗೆದುಕೊಳ್ಳಬೇಕಾದ ಅಗತ್ಯತೆಯ ಅನಿವಾರ್ಯತೆ ಇದೆ. ಅದರರ್ಥ ಅನ್ಯ ಭಾಷಿಕರನ್ನು ಹಿಂಸಿಸುವುದೆಂದಾಗಲೀ ಅಥವಾ ಅನ್ಯ ಭಾಷಾಕಲಿಕೆಯನ್ನು ತಿರಸ್ಕರಿಸಬೇಕೆಂದಾಗಲೀ ಅಲ್ಲ. ಜಾಗತೀಕರಣದ ದಾಳಿಯಿಂದ ಸ್ಥಳೀಯ ಸಂಸ್ಕೃತಿಗಳು ನಾಶವಾಗುತ್ತಿರುವುದು ಭಾರತದಲ್ಲಷ್ಟೇ ಅಲ್ಲ. ವಿಶ್ವದ ಇತರ ದೇಶಗಳಲ್ಲೂ ಇದೆ.
ಕೆಲವು ರಾಜ್ಯಗಳಲ್ಲಂತೂ, ಅಲ್ಲಿನ ಜನರೇ ಪರಕೀಯರೆನ್ನುವಂತಾಗಿದೆ. ಇವುಗಳ ಮಧ್ಯೆ, ಚೀನೀಯರು ಮಾತ್ರ ಬದಲಾವಣೆಯ ನಡುನಡುವೆಯೂ, ತಮ್ಮ ಸಾಂಸ್ಕೃತಿಕ ಸಾರ್ವಭೌಮತ್ವವನ್ನು ಇತರ ದೇಶಗಳಲ್ಲಿ ಸಾಧಿಸತೊಡಗಿದ್ದಾರೆ. ಇಂತಹ ಕೆಲಸ ನಮ್ಮಿಂದ ಆಗಬೇಕಾಗಿದೆ.
ಕನ್ನಡಿಗರು ಬದಲಾವಣೆಯನ್ನು ಸ್ವಾಗತಿಸುವುದರ ಜೊತೆಗೆ, ಸಾಧಿಸಿರುವುದನ್ನು ಜಗತ್ತಿಗೆ ತೋರಿಸಿಕೊಡಬೇಕಾಗಿದೆ. ಕನ್ನಡದ ಬುಡವನ್ನು ಭದ್ರಗೊಳಿಸಿಕೊಳ್ಳಬೇಕಾಗಿದೆ. ನಮ್ಮ ಸಂಸ್ಕೃತಿಯ ಉಳಿವಿಗಾಗಿ, ಮುಂದಿನ ಪೀಳಿಗೆಯನ್ನು ಹುರಿಗೊಳಿಸಬೇಕಾಗಿದೆ. ಹುಟ್ಟುವ ಮಗುವಿಗೆ ’ಮಮ್ಮಿ. ಬದಲು ’ಅಮ್ಮ? ಎನ್ನುವ ಅಮೃತ ನುಡಿಯನ್ನು ಕಲಿಸಿ ಹೊರ ಭಾಷಿಕರಲ್ಲಿ ಕನ್ನಡದ ಬಗೆಗಿನ ಗೌರವವನ್ನು ವೃದ್ಧಿಗೊಳಿಸಿ, ಸಾಧ್ಯವಾದರೆ, ಭಾಷೆಯ ಕಲಿಕೆಗೆ ಪ್ರೋತ್ಸಾಹಿಸಬೇಕಾಗಿದೆ. ದರ್ಪದಿಂದಾಗದ ಕೆಲಸವನ್ನು ಧೈರ್ಯದಿಂದಲೂ, ನಿಷ್ಠೆಯಿಂದಲೂ, ಪ್ರೀತಿಯಿಂದಲೂ ಮಾಡಬೇಕಾಗಿದೆ. ನಮ್ಮವರನ್ನು ನಮ್ಮಲ್ಲೇ ಉಳಿಸಿಕೊಳ್ಳುವ ಬಗ್ಗೆ ಚಿಂತನೆ ಮಾಡಬೇಕಾಗಿದೆ.
ಆದರೆ, ನಮ್ಮಲ್ಲಿ ಮಾಡುವವರಿಗಿಂತ ಮಾತನಾಡುವವರೇ ಜಾಸ್ತಿಯಾದಂತಿದೆ. ಪ್ರತಿಯೊಬ್ಬ ಕನ್ನಡಿಗನೂ, ತನ್ನಷ್ಟಕ್ಕೆ ತಾನು ಕನ್ನಡಿಗನಾಗಿದ್ದರೆ, ಅಷ್ಟೇ ಸಾಕು. ಆತ ಕತ್ತಿಹಿಡಿದು ಕಿತ್ತಾಡಬೇಕಾಗಿಲ್ಲ. ಕನ್ನಡಕ್ಕೊಂದು ಸಂಘಕಟ್ಟಿಕೊಂಡು, ಅದರ ಹೆಸರು ಹೇಳಿಕೊಂಡು, ಅನ್ಯಮಾರ್ಗಗಳಲ್ಲಿ ಸಿಗಬಹುದಾದ ಎಲ್ಲಾ ಪ್ರಯೋಜನಗಳಿಗಾಗಿ ಹಾತೊರೆಯುತ್ತಾ ದುರಾಸೆಯ ದುರಾಭಿಮಾನಿಗಳಾಗಿ ಬದುಕುವವರು ಮಾತ್ರ ಇದ್ದರೂ ಸತ್ತಂತೆ. ಅಂತಹವರ ಅವಶ್ಯಕತೆ ಕನ್ನಡಕ್ಕಿಲ್ಲ ಎಂಬುದನ್ನು ಎಲ್ಲರೂ ಅರಿಯಬೇಕಾಗಿದೆ.
 ಇಂದು ಕನ್ನಡಿಗರು ವಿಶ್ವದೆಲ್ಲೆಡೆ ಇದ್ದಾರೆ. ಅವರಿಗೆಲ್ಲಾ ಕನ್ನಡದ ಬಗ್ಗೆ ತಿಳಿಯಲೂ, ಕನ್ನಡದಲ್ಲಿ ಓದಲೂ, ಕನ್ನಡದಲ್ಲಿ ನೋಡಲೂ ಇರುವ ಅತೀ ಸುಲಭ ಹಾಗೂ ಏಕೈಕ ಮಾರ್ಗವೆಂದರೆ ಇಂಟರ್‌ನೆಟ್. ಅದರಲ್ಲಿ ಕನ್ನಡದ ಭಂಡಾರವನ್ನೆ ಸೃಷ್ಟಿಮಾಡಬಹುದಾದಂತಹ ಅವಕಾಶಗಳಿರುವಾಗ, ವೃಥಾ ಸಮಾರಂಭಗಳಲ್ಲಿ ಖರ್ಚುಮಾಡುತ್ತಾ, ಕಾಲಕಳೆಯುವುದರಿಂದಾಗುವ ಉಪಯೋಗವೇನು?. ಕನ್ನಡದಲ್ಲಿ, ಕನ್ನಡಕ್ಕಾಗಿ ಏನನ್ನು ಹುಡುಕಿದರೂ ಸಿಗಬಹುದು ಎಂಬಂತೆ ಕನ್ನಡದ ಅಂತರ್ಜಾಲ ತಾಣಗಳನ್ನು ಅಭಿವೃದ್ಧಿ ಪಡಿಸುವುದರಿಂದ ಕನ್ನಡಿಗರಿಗೆ ಕನ್ನಡದಲ್ಲಿ ಯಾವುದೇ ಒಂದು ವಿಷಯದ ಬಗ್ಗೆ ತಿಳಿಯಲು ಅನುಕೂಲವಾಗುತ್ತದೆ ಜೊತೆಗೆ ಕನ್ನಡವನ್ನು ಜೀವಂತವಾಗಿಟ್ಟಂತಾಗುತ್ತದೆ. ಕನ್ನಡದ "ವಿಕಿಪೀಡಿಯಾ" ನೋಡಿದರೆ, ಅನಾಥ ಭಾವನೆ ಮೂಡುತ್ತದೆ. ನಮ್ಮ ಭಾಷೆ ಅನಾಥವಲ್ಲ. ಅನಾಥವಾಗಲೂ ಬಿಡುವುದಿಲ್ಲ ಎಂದು ಮೈ ಕೊಡವಿಕೊಂಡು ಏಳಬೇಕು. ನಾಲಿಗೆ ಮೇಲೆ ನಾನಾ ಭಾಷೆಗಳಿರಲಿ. ಮನಸ್ಸಿನಲ್ಲಿ ಮಾತ್ರ ಮಾತೃಭಾಷೆ ಇರಲಿ. 


Monday, 30 June 2014

ಪಿತೃದೇವೋಭವ.....

‘ಪಿತೃದೇವೋಭವ’, ಹೌದು, ಈ ಒಂದು ಶಬ್ದ ವಿಶ್ವದಲ್ಲಿ ಎಲ್ಲೇ ಕೇಳಿದರೂ, ಯಾರೇ ಹೇಳಿದರೂ ಭಾರತೀಯರು ಹೆಮ್ಮೆ ಪಟ್ಟು ಬೆನ್ನುತಟ್ಟಿಕೊಳ್ಳಲೇಬೇಕು. ತಲೆ ಎತ್ತಿ ಹೇಳಬೇಕು, ಇದು ನಮ್ಮ ದೇಶದಲ್ಲಿ ಜನಿಸಿದ ಶಬ್ದ ಎಂದು.
ತಂದೆಯನ್ನು ದೇವರಂತೆ ಪೂಜಿಸಿದ ದೇಶ ನಮ್ಮದು, ತಾಯಿಗಿರುವಷ್ಟೇ ಗೌರವ ತಂದೆಗೂ ಇದೆ.  ಹುಟ್ಟಿದ ಪ್ರತಿಯೊಬ್ಬರೂ ಸಾಯುವ ಕೊನೆಯ ಕ್ಷಣದವರೆಗೂ ಋಣಿಯಾಗಿರಬೇಕಾದ ಸಂಬಂಧ ಅದು. ಎಷ್ಟು ಹೊಗಳಿದರೂ, ಎಷ್ಟೇ ಪೂಜಿಸಿದರೂ ‘ತಂದೆ’ ಎಂಬ ಸಂಬಂಧದಿಂದ ಮುಕ್ತರಾಗಲು ಸಾಧ್ಯವಿಲ್ಲ.
ನಾಳೆ ‘ಅಪ್ಪಂದಿರ ದಿನ’. ನಿಜಕ್ಕೂ ಹೇಳಿ, ನಿಮ್ಮಲ್ಲಿ ಎಷ್ಟು ಜನ ಈ ಅಪ್ಪಂದಿರ ದಿನವನ್ನು ಆಚರಿಸುತ್ತೀರಿ..?, ಅಷ್ಟಕ್ಕೂ ಅಪ್ಪನ್ನ ನೆನೆಯುವುದಕ್ಕೆ ಒಂದು ದಿನ ಅಂತ ಬೇಕಾ? ಅಷ್ಟು ದೂರದ ಸಂಬಂಧವೇ ಅದು ಮರೆತುಬಿಡಲು?,
ಸುಮ್ಮನೇ ಕೂತು ಅಪ್ಪ ಅಂತ ಯೋಚನೆ ಮಾಡಿದ್ರೆ ಕಣ್ಣಾಲಿಗಳು ಒದ್ದೆಯಾಗದೆ ಇರದು. ತಂದೆ ಮಾಡಿದ ತ್ಯಾಗದ ಅರಿವಾಗದೇ ಇರದು ಅಲ್ಲವೇ? ‘ಅಪ್ಪ’ ಅಂದರೆ ನಮ್ಮೆಲ್ಲ ಧೈರ್ಯ. ಶಕ್ತಿ, ಸಂತೋಷ, ಸುಖ ಎಂದು ಹೇಳಬಹುದೇನೋ.. ಅಪ್ಪ ಎಂದರೆ,  ಬಿಸಿಲಿಗೆ ತಂಪು ಮರದ ನೆರಳಿನ ಹಾಗೆ, ನಮ್ಮೆಲ್ಲಾ ಸಮಸ್ಯೆಗಳಿಗೆ ಅವನ ನಗುವೇ ಉತ್ತರ, ಇಂಥ ಅಪ್ಪನ್ನ ಒಂದೇ ದಿನ ಅಂತ ನೆನೆಯೋದು ಹೇಗೆ?
ಮಕ್ಕಳ ಹುಟ್ಟಿನಿಂದ ಹಿಡಿದು ಬೆಳೆದು ದೊಡ್ಡವರಾಗುವವರೆಗೂ ತಂದೆ ತನ್ನ ಎಲ್ಲಾ ಜವಾಬ್ದಾರಿಗಳನ್ನು ಪ್ರೀತಿಯಿಂದ ನಿಭಾಯಿಸುತ್ತಾನೆ. ಸಮಾಜದಲ್ಲಿ ನಮ್ಮ ಮಕ್ಕಳಿಗೊಂದು ಸ್ಥಾನ ಸಿಗಬೇಕು. ನಮ್ಮ ಮಕ್ಕಳೂ ಎಲ್ಲರಂತೆ ಸ್ವತಂತ್ರ್ಯವಾಗಿ ಬದುಕಬೇಕು, ನಾಲ್ಕು ಜನರ ಮಧ್ಯೆ ಗುರುತಿಸಿಕೊಳ್ಳಬೇಕು ಎಂದು ಮಕ್ಕಳು ಹುಟ್ಟಿದ ಕ್ಷಣದಿಂದ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡು ಕಷ್ಟಪಟ್ಟು ಪೈಸೆಗೆ ಪೈಸೆ ಲೆಕ್ಕ ಹಾಕಿ. ನಮ್ಮ ಭವಿಷ್ಯವನ್ನು ರೂಪಿಸಲು ಪರಿತಪಿಸುತ್ತಿರುತ್ತಾರೆ.
ಮಕ್ಕಳ ಸಂತೋಷದಲ್ಲೇ ತಮ್ಮ ಸಂತೋಷವಿದೆ ಎಂದುಕೊಂಡು ಪ್ರಸ್ತುತ ತಮ್ಮೆಲ್ಲ ಸಂತೋಷವನ್ನು ಬದಿಗೊತ್ತಿ ಮಕ್ಕಳ ಸಂತೋಷದಲ್ಲಿ ಸಂತೋಷವನ್ನು ಹುಡುಕುತ್ತ ಜೀವನವನ್ನೇ ಗಂಧದಂತೆ ತೇದು ಮಕ್ಕಳ ಭವಿಷ್ಯ ರೂಪಿಸುತ್ತಾರೆ.
ಯಾವುದೇ ಸ್ವಾಥರ್À ಮನೋಭಾವನೆಯಿಲ್ಲದೇ ಮಕ್ಕಳ ಭವಿಷ್ಯವನ್ನು ರೂಪಿಸಿ ಅವರು ನಮ್ಮಂತೆ ಎಂದೂ ಕಷ್ಟಪಡಬಾರದು, ಇರುವ ಎಲ್ಲ ಕಷ್ಟಗಳೂ ನಮ್ಮೊಟ್ಟಿಗೇ ಅಂತ್ಯಕಾಣಬೇಕು. ಅವರ ಬಾಳಿಗೆ ಸಂತೋಷದ ದಿನಗಳನ್ನು ಕೂಡಿಡÀಬೇಕೆಂದು ಜೀವನದ ಸಂತೋಷಗಳನ್ನೆಲ್ಲಾ ತ್ಯಾಗ ಮಾಡುವ ತಂದೆ ಮಕ್ಕಳ ಪಾಲಿಗೆ ದೇವರೇ ಅಲ್ಲವೇ..?
ಹೌದು, ಇಂದು ಜಗತ್ತು ಆಧುನಿಕತೆಯತ್ತ ಓಡುತ್ತಿದೆ. ಮಾತೃದೇವೋಭವ, ಪಿತೃದೇವೋಭವ ಎಂದು ಉದ್ಗರಿಸಿದ ನಮ್ಮ ನೆಲದಲ್ಲೇ ಸಂಬಂಧಗಳು ತಮ್ಮ ಬೆಲೆ ಕಳೆದುಕೊಳ್ಳುತ್ತಿವೆ. ಮಕ್ಕಳಿಗಾಗಿ ತಂದೆ ಮಾಡಿದ ತ್ಯಾಗವನ್ನು ಮಕ್ಕಳು ಅರಿತು ಅವರ ಮುಪ್ಪಿನ ಕಾಲದಲ್ಲಿ ತಂದೆ ಮಾಡಿದ ತ್ಯಾಗದ ಋಣ ತಿರಿಸಿಕೊಳ್ಳುವ ಜವಾಬ್ದಾರಿಯನ್ನರಿಯದೇ, ಮಕ್ಕಳನ್ನು ಬೆಳೆಸುವುದು ತಂದೆ ಕರ್ತವ್ಯ ಅದನ್ನು ಅವರು ಮಾಡಿದ್ದಾರೆ. ಅವರ ಮೇಲೇಕೆ ನಾವು ಕರುಣೆ ತೋರಬೇಕೆಂದು ಒಬ್ಬ ಮಹಾನುಭಾವ ಕೇಳಿದ ಪ್ರಶ್ನೆ ನನ್ನ ಮನವನ್ನು ಒಂದು ಕ್ಷಣ ನೋವಿನ ಆಳಕ್ಕೆ ತಳ್ಳಿಬಿಟ್ಟಿತ್ತು.
ತನ್ನ ರಕ್ತವನ್ನೆ ಬಸಿದು ಬೆಳೆಸಿದ ಮಕ್ಕಳು ತಂದೆ ತಾಯಿಗಳ ಮುಪ್ಪಿನ ಕಾಲದಲ್ಲಾಗದಿದ್ದರೆ ಮಾನವಿಯತೆಗೆ ಅರ್ಥವೇ ಇಲ್ಲದಂತಾಗುತ್ತದೆ ಯಲ್ಲವೇ? ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗುತ್ತದಲ್ಲವೇ?
 ಓಡುತ್ತಿರುವ ಈ ಆಧುನಿಕತೆಯಲ್ಲಿ ಬೆಳೆದು ನಿಂತ ಮಕ್ಕಳು  ತಂದೆ-ತಾಯಿಯರೊಟ್ಟಿಗೆ ಬದುಕಲಿಚ್ಛಿಸುವುದಿಲ್ಲ.  ಅವರಿಗೆ ಸ್ವತಂತ್ರ ಬೇಕಾಗಿರುತ್ತದೆ.    ಏಷ್ಟೋ ಮಕ್ಕಳು ತಮ್ಮ ಹೆಂಡತಿಯೊಂದಿಗೆ  ಪ್ರೈವೆಸಿ ಬಯಸಿ ತಂದೆ-ತಾಯಿಗಳನ್ನು ಬೇರೊಂದು ಮನೆಯಲ್ಲೋ ಅಥವಾ ತಂದೆ-ತಾಯಿಗಳನ್ನು ಬಿಟ್ಟು ಅವರೇ ಬೇರೆ ಮನೆಯಲ್ಲೋ ಬದುಕುತ್ತಿರುವ ಉದಾಹರಣೆಗಳನ್ನು ಹುಡುಕಬೇಕಿಲ್ಲ.  ಏಕೆಂದರೆ ಇಂದಿನವರಲ್ಲಿ ಇದು ಮಾಮೂಲಿ.
ಇಂದಿನವರು ಸಂಬಂಧಗಳಿಗೆ ಬೆಲೆ ಕೊಡದಿರುವುದೇ ಈ ರೀತಿಯ  ಬೆಳವಣಿಗೆಗೆ ಕಾರಣ,  ಸಂಬಂಧಗಳನ್ನು ಅರ್ಥಮಾಡಿಕೊಳ್ಳದೇ,  ಸಂಬಂಧಗಳ ಬೆಲೆಯನ್ನು ಅರಿಯದೇ  ಯಾವುದೋ ಒಂದು ಮೋಹಕ್ಕೊಳಗಾಗಿಯೋ ಅಥವಾ  ಸ್ವಾರ್ಥದ ಬದುಕು ಬದುಕಲೋ  ಹೆತ್ತು ಹೊತ್ತು ಬೆಳಸಿದ ತಂದೆತಾಯಿಗಳನ್ನೇ ದೂರ ತಳ್ಳಿ ಬದುಕಲಿಚ್ಚಿಸುವ ಇಂದಿನವರು ಪ್ರೀತಿ, ವಾತ್ಸಲ್ಯದಂತಹ  ಉನ್ನತ ಭಾವನೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ಆದ್ದರಿಂದಲೇ ತಂದೆಗೊಂದು ದಿನ, ತಾಯಿಗೊಂದು ದಿನ, ಅಕ್ಕ-ತಂಗಿಯರಿಗೊಂದು ದಿನ,  ಎಂದು  ನಿನಿಗದಿಪಡಿಸಿಕೊಂಡು ಆ ದಿನ ಮಾತ್ರವೇ ಸಂಬಂಧಗಳನ್ನು   ನೆನೆಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.
ಮದರ್ ಡೇ, ಫಾದರ್ ಡೇ, ಗಳು  ಒಂದು ದಿನ ಆಚರಿಸಿ ಸಂಭ್ರಮಿಸಿ ಬಿಟ್ಟು ಬಿಡುವ ಸಂಬಂಧಗಳಲ್ಲ.  ಜೀವ ಇರುವವರೆಗೂ ಜೊತೆಗಿದ್ದು ಸೇವೆ ಮಾಡಿದರೂ ತೀರಿಸಲಾಗದ ಋಣ ತಂದೆ-ತಾಯಿಯರದು. ಅಂತ್ಯವೇ ಇಲ್ಲದ ಸಂಬಂಧಗಳವು. 
ಈ ಸಂಬಂಧಗಳನ್ನು ಒಂದು ದಿನಕ್ಕೆ ಮಾತ್ರ ಮೀಸಲಿರಿಸದೇ ಮಕ್ಕಳು ತಮ್ಮ ತಂದೆ-ತಾಯಿಯನ್ನು ಪೂಜಿಸಿ, ಪ್ರೀತಿಸುವ ಭಾವನೆಯನ್ನು  ಬೇಳೆಸಿಕೊಳ್ಳಬೇಕು. ಆ ಮನೋಭಾವ ಬೆಳಯಲು ಈ ದಿನ ಒಂದು ನೆಪ ಮಾತ್ರವೇ ಆಗಿರಬೇಕು.

ವಿಶ್ವ ಅಪ್ಪಂದಿರ ದಿನ
ಜಗತ್ತಿನ 52 ರಾಷ್ಟ್ರಗಳಲ್ಲಿ, ಪ್ರತಿ ವರ್ಷದ ಜೂನ್ ತಿಂಗಳ ಮೂರನೆ ಭಾನುವಾರದಂದು ಮತ್ತು ಇತರ ಕಡೆಗಳಲ್ಲಿ ಇನ್ನಿತರ ದಿನಗಳಂದು ತಂದೆಯ ದಿನಾಚರಣೆ ಎಂದು ಆಚರಿಸಲಾಗುತ್ತದೆ. ತಂದೆಗೆ ಗೌರವ ಸಲ್ಲಿಸಲು ಈ ದಿನ ಮೀಸಲು. ತಾಯಿಯನ್ನು ಗೌರವಿಸಲು ಆಚರಿಸುವ ಮಾತೃ ದಿನಕ್ಕೆ ಇದು ಪೂರಕವಾಗಿದೆ.
ಪಿತೃತ್ವ ದಿನಾಚರಣೆಯನ್ನು,ಪುರುಷ ಪೆÇೀಷಕರನ್ನು ಮತ್ತು ತಂದೆ ತಾತಂದಿರನ್ನು ಗೌರವಿಸುವ ಸಲುವಾಗಿ ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ‘ಅಪ್ಪಂದಿರ ದಿನಾಚರಣೆ’ಯು ಆರಂಭವಾಯಿತು. ಪ್ರಪಂಚದಾದ್ಯಂತ ವಿವಿಧ ದಿನಗಳಲ್ಲಿ ‘ಅಪ್ಪಂದಿರ ದಿನಾಚರಣೆ’ ಆಚರಿಸಲ್ಪಡುತ್ತದೆ.
ಸ್ಪೋಕೇನ್‍ನ ಸೊನೋರಾ ದೋಡ್ಸ್ ಅವರ ಶ್ರಮದಿಂದ 1910, ಜೂನ್ 19ರಂದು ‘ಅಪ್ಪಂದಿರ ದಿನಾಚರಣೆ’ಯನ್ನು ಮೊದಲ ಬಾರಿಗೆ ಆಚರಿಸಿರುವುದಾಗಿ ಭಾವಿಸಲಾಗಿದೆ. 1909ರಲ್ಲಿ ಸ್ಪೋಕೇನ್‍ನ ಸೆಂಟ್ರಲï ಮೆತೊಡಿಸ್ಟ್ ಎಪಿಸ್ಕೊಪಲï ಚರ್ಚ್‍ನ ಒಂದು ಭಾನುವಾರ ಮಾತೃ ದಿನದಾಚರಣೆಯ ಧರ್ಮೋಪದೇಶವನ್ನು ಆಲಿಸುತ್ತಾ ವಾಷಿಂಗ್ಟನ್‍ನ ಸೊನೋರಾ ಸ್ಮಾರ್ಟ್ ದೋಡ್ ತಂದೆಯನ್ನು ಗೌರವಿಸಲು ತಾನೇ ತಾನಾಗಿ ಯೋಚಿಸಿದಳು ಮತ್ತು 1910ರ ಜೂನ್ 19ರಂದು ತಂದೆಗೆ ಗೌರವವನ್ನು ಅರ್ಪಿಸಿದಳು. ಪಿತೃ ಸಮಾನರೆಲ್ಲರನ್ನೂ ಗೌರವಿಸುವ ಆಚರಣೆಗೆ ಅಧಿಕೃತವಾಗಿ ಚಾಲನೆ ಕೊಟ್ಟ ಮೊದಲಿಗಳಾದಳು ಈಕೆ.

ಏಕ ವಚನವೋ ಬಹು ವಚನವೋ..?
ಏಕ ವಚನವೋ ಬಹು ವಚನವೋ..'Father’s Day'  ಮತ್ತು Fathers’ Day'- -ಸೂಕ್ಷ್ಮವಾಗಿ ಗಮನಿಸಿ, ಎರಡು ಬಗೆಯ ಬರಹದಲ್ಲೂ ಪದಗಳ ಸ್ವಾಮ್ಯತೆ ಸಂಬಂಧವನ್ನು ಸೂಚಿಸುತ್ತವೆ. ವಾಕ್ಯರಚನೆಯಲ್ಲಿ ಬಳಸಬಹುದಾದ ಚಿಹ್ನೆ ಇಲ್ಲಿ ಗಮನಿಸಬಹುದಾದ ಮತ್ತೊಂದು ಅಂಶ (Fathers’ Day” ಮತ್ತು Father’s Day”). ಮೊದಲನೆಯದು ಬಹುವಚನವಾದರೆ ಎರಡನೆ ರೀತಿಯಲ್ಲಿ ಬರೆಯುವುದು ಏಕವಚನ. ಇಂಗ್ಲಿಷ್ ಭಾಷೆಯಲ್ಲಿರುವ Father’s Day” ಎಂಬುದನ್ನು ಉಚ್ಚರಿಸಿದಾಗ ಸಾಮಾನ್ಯವಾಗಿ ಬಹುವಚನದಲ್ಲಿ ಅರ್ಥ ಮಾಡಿಕೊಳ್ಳಲಾಗುತ್ತದೆ; ಅಪ್ಪಂದಿರ ದಿನ ಎಂಬ ಅರ್ಥ ಒದಗಿ ಬಂದು ಅದು ಅಪ್ಪಂದಿರ ಸಮೂಹಕ್ಕೇ ಅನ್ವಯವಾಗುತ್ತದೆ. ‘Fathers’Day’- ಹೀಗೆ ಬರೆದಾಗ ಅಪ್ಪನ ದಿನ ಎಂಬ ಏಕವಚನವಾಗುತ್ತದೆ. ಅರ್ಥೈಸಿಕೊಳ್ಳುವುದು ಬಹುವಚನದಲ್ಲಾದರೆ ಏಕವಚನದ ರೂಪದಲ್ಲೇ ಬರೆಯುವುದು ಸರ್ವೇಸಾಮಾನ್ಯವಾಗಿದೆ. ಡ್ಯಾಡ್ Father’s Day”-  ಎಂದೇ ತಮ್ಮ ಮೂಲ ಲಿಖಿತ ಮನವಿಯಲ್ಲಿ ರಜೆಗಾಗಿ ಬಳಸಿದರು, ಆದರದು Fathers’ Day”  ಎಂದೇ 1913ರಲ್ಲಿ  US ಕಾಂಗ್ರೆಸ್‍ನಲ್ಲಿ ರಜೆಗಾಗಿ ಮೊದಲ ಬಾರಿಗೆ ಮಂಡಿಸಲಾದ ಮಸೂದೆಯಲ್ಲಿ ಬಳಸಿಯಾಗಿತ್ತು ಮತ್ತು ಅದರ ಕರ್ತೃವನ್ನು 2008ರಲ್ಲಿ ಶ್ಲಾಘಿಸಿದಾಗಲೂ  U.S ಕಾಂಗ್ರೆಸ್ ಕೂಡ ಅದೇ ರೀತಿ ಬಳಕೆಮಾಡಿತ್ತು.


ನಾನು ಭೂಮಿಗೆ ಬಂದಾಗ   ಆಕಾಶದೆತ್ತರದಷ್ಟು ಖುಷಿ ಪಟ್ಟವನು ನೀನು,
ತೊದಲ ನುಡಿಯಲ್ಲಿ ನಾ ನಿನ್ನ ಕೂಗಿದಾಗ   ಓಡಿ ಬಂದು ಅಪ್ಪಿ ಮುದ್ದಾಡಿದವನು ನೀನು,
ನಾ ಮೊದಲ ಹೆಜ್ಜೆಯಿಟ್ಟಾಗ   ಆಸರೆಯಾಗಿದ್ದವನು ನೀನು,
ನಾ ನಡೆದಾಡಲಾರಂಭಿಸಿದರೂ ನನ್ನನು ಹೆಗಲ ಮೇಲೆ ಹೊತ್ತು  ನಡೆದಾಡಿದವನು ನೀನು,
ಬೇಡದೆ ನನ್ನೆಲ್ಲ ಬಯಕೆಗಳನ್ನೆಲ್ಲ     ಪೂರೈಸಿದವನು ನೀನು,
ಧೃತಿಗೆಟ್ಟಾಗ  ನನ್ನೊಳಗೆ ಧೈರ್ಯತುಂಬಿ ಜೊತೆಗಿದ್ದವನು ನೀನು.
ನನಗಾಗಿ, ನನ್ನ ಭವಿಷ್ಯಕ್ಕಾಗಿ       ಬದುಕಿದವನು ನೀನು.
ಬಳಲಿ, ಬೆವರಿಳಿಸಿ ನನಗೆ  ಬೇಕಾದುದನ್ನೆಲ್ಲ ತಂದು ಕೊಟ್ಟವನು ನೀನು,
ನಿನ್ನ ಅಷ್ಟೆಲ್ಲ ಋಣವನ್ನು ‘ಅಪ್ಪಾ’ ಎಂದೊಮ್ಮೆ ಕೂಗುವ ಮೂಲಕ ತೀರಿಸಲಾದೀತೇ?                      

Monday, 19 May 2014

ಕಪ್ಪು ಕಪ್ಪೆಂದು ಜರಿಯದಿರಿ : ಬಣ್ಣದಲ್ಲಿಲ್ಲ ಬದುಕು

 ಇತ್ತೀಚೆಗೆ ಯಾವುದೋ ಒಂದು ಹಳೆಯ ಮ್ಯಾಗಜಿನ್ ಕೈಗೆ ಸಿಕ್ಕಿತೆಂದು ಒದಲು ಶುರುವಿಟ್ಟುಕೊಂಡೆ. ಪುಟಗಳನ್ನು ತಿರುಗಿಸುತ್ತಿರುವಾಗ ಒಬ್ಬ ಕಪ್ಪು ಸುಂದರಿಯ ಫೋಟೋ ಕಣ್ಣಿಗೆ ಬಿತ್ತು ಆ ಫೋಟೋದ ಅಡಿಬರಹವನ್ನು ಓದಿದಾಗ ಗೊತ್ತಾಯಿತು ಅವಳು ಭವನಸುಂದರಿಯಾಗಿ ಆಯ್ಕೆಯಾದವಳು ಎಂದು..! ಇವಳನ್ನು ಭವನಸುಂದರಿಯಾಗಿ ಆಯ್ಕೆ ಮಾಡಿದ ಆ ಮಹಾನುಭಾವರಾರೋ ಎಂದು  ಒಂದು ಕ್ಷಣ ನಗು ಬಂತಾದರೂ ಅವಳ ಕಪ್ಪು ಬಣ್ಣದ ಹಿಂದಿನ ನಾನಾ ಸತ್ಯಗಳು ಅರಿವಿಗೆ ಬಂದವು. ಭುವನ ಸುಂದರಿ ಎಂದ ಮಾತ್ರಕ್ಕೆ ಸೌಂದರ್ಯವತಿಯರಾಗಿರಬೇಕೆಂದೇನಿಲ್ಲ. ಏಕೆಂದರೆ ಇಲ್ಲಿ ಭವನಸುಂದರಿಯರನ್ನು ಆಯ್ಕೆ ಮಾಡುವವರಿಗೆ ಬಾಹ್ಯ ಸೌದರ್ಯವೊಂದೇ ಮಾನದಂಡವಾಗಿರುವುದಿಲ್ಲ. ಅವರ ದೃಷ್ಟಿಯಲ್ಲಿ ಬಾಹ್ಯ ಸೌದರ್ಯಕ್ಕಿಂತ ಮನಸ್ಸಿನ ಸೌಂದರ್ಯ ಕೂಡ ಬಹಳ ಮುಖ್ಯ. ಆ ಕಪ್ಪು ಸುಂದರಿಯನ್ನು ಭವನಸುಂದರಿ  ಆಯ್ಕೆಯಾಗಲು ಸಹಾಯ ಮಾಡಿದ್ದು ಅವಳ ಬಾಹ್ಯ ಸೌದರ್ಯವಷ್ಟೇ ಅಲ್ಲ ಎಂಬುದು ಅರಿವಿಗೆ ಬಂತು. 
 ಹೌದು, ನಾವು ಸಾಮಾನ್ಯವಾಗಿ ಕಪ್ಪಗಿರುವವರನ್ನು ಜರಿಯುತ್ತೇವೆ. ಅದರಲ್ಲೂ ನಾವು ಅಂದರೆ ಭಾರತೀಯರು ಕಪ್ಪಗಿರುವವರನ್ನು ಕಂಡರೆ ಕುಟುಕಲು ಮುಂದಾಗುತ್ತೇವೆ. ಬಣ್ಣಕ್ಕೆ ಹೆಚ್ಚಿನ ಮಹತ್ವ ಕೊಡುತ್ತೇವೆ. ಬರಿ ಬಣ್ಣ ಮಾತ್ರವೇ ಸೌದರ್ಯವನ್ನು ನಿರ್ಧರಿಸಿಬಿಡುತ್ತದೆಯೇ ಎಂಬುದೇ ಪ್ರಶ್ನೆ?
ಭಾರತದಲ್ಲಿ ಕಪ್ಪು ಬಣ್ಣದವರನ್ನೇ ಗುರಿಯಾಗಿಟ್ಟುಕೊಂಡು ಉತ್ಪನ್ನಗಳನ್ನು ತಯಾರು ಮಾಡುತ್ತಿರುವ ಕಂಪನಿಗಳಿವೆ. ಕೆಲವೇ ದಿನ/ವಾರಗಳಲ್ಲಿ ಗೌರವರ್ಣ ಪಡೆಯಿರಿ ಎಂದೆಲ್ಲ ಜಾಹಿರಾತು ನೀಡುತ್ತಾ ಕೋಟ್ಯಾಂತರ ರುಪಾಯಿ ಹಣ ಗಳಿಸಲಾಗುತ್ತಿದೆ. ಇದಕ್ಕೆಲ್ಲ ಕಾರಣ ಕಪ್ಪು ವರ್ಣದ ಬಗ್ಗೆ ಇರುವ ಕೀಳಿರಿಮೆ ಮನೋಭಾವ. ಭಾರತೀಯರ ಈ ಮನೋಧರ್ಮ ಬಹುರಾಷ್ಟ್ರೀಯ ಕಂಪನಿಗಳ ಹೇರಳ ಸಂಪಾದನೆಗೂ ಅವಕಾಶ ಕೊಟ್ಟಿದೆ. ಇದಕ್ಕೆಲ್ಲ ಮೂಲ ಕಾರಣವಾದ ಕಪ್ಪು ಬಣ್ಣದ ಬಗ್ಗೆ ಕೀಳರಿಮೆ ಸರಿಯೆ..?
  ಕಪ್ಪಾಗಿದ್ದರೆ ಕೊರಗುವ ಮನೋಭಾವ ಪ್ರವೃತ್ತಿಯಿಂದ ತಾವ್ಯಾಕೆ ಹೀಗೆ ಹುಟ್ಟಿದೆವೋ ಎಂಬಷ್ಟು ಕೀಳರಿಮೆ ಕಪ್ಪಗಿರುವ ಹೆಣ್ಣುಮಕ್ಕಳಲ್ಲಿ ಮನೆಮಾಡಿರುತ್ತದೆ. ಇವರಿಗೆ ಹೋಲಿಸಿದರೆ ಕಪ್ಪನೆ ಗಂಡುಗಳಲ್ಲಿ ಇಂಥ ಕೀಳಿರಿಮೆ ಕಡಿಮೆ. ಇದು ಹೆಣ್ಣು-ಗಂಡಿನ ಕುರಿತ ಭಾರತೀಯ ಸಮಾಜದ ಪೂರ್ವಾಗ್ರಹ ಪೀಡಿತ ಭಾವನೆಗೂ ನಿದರ್ಶನ. ಸಾಮಾನ್ಯವಾಗಿ ಹೆಣ್ಣೆತ್ತವರು ಅಂತಿಮವಾಗಿ ಯೋಚಿಸುವುದು, ಆಕೆ ಮದುವೆ ಕುರಿತೆ. ಕಪ್ಪಗಿರುವವಳನ್ನು ಮದುವೆ ಮಾಡಿಕಳುಹಿಸುವುದು ಕಷ್ಟ, ವರದಕ್ಷಿಣೆ ಹೆಚ್ಚು ತೆರಬೇಕು ಎಂಬೆಲ್ಲ ಚಿಂತೆ. ಕಪ್ಪಾಗಿರುವವರು ಚೆನ್ನಾಗಿರುವುದಿಲ್ಲ ಎಂಬಷ್ಟು ಮಟ್ಟಿಗೆ ಪೂರ್ವಾಗ್ರಹಪೀಡಿತ ಮನೋಭಾವ.
ಕಪ್ಪು ಮೈ ಬಣ್ಣ ಎಂದು ಅವಮಾನಕ್ಕೀಡಾಗುವುದು ಹುಡುಗಿಯರೇ..ಹುಡುಗರಿಗೆ ಯಾವ ಮೈ ಬಣ್ಣವಾದರೇನು ಯಾರೂ ಏನೂ ಹೇಳುವುದಿಲ್ಲ. ಸಿನಿಮಾದಲ್ಲಿ ನಾಯಕ ಕಪ್ಪಗಿದ್ರೂ, ನಾಯಕಿ ಬೆಳ್ಳಗಿನ ಸುರ ಸುಂದರಿ. ಜಾಹೀರಾತಿನಲ್ಲೂ ಬಿಳಿ ತೊಗಲಿನದ್ದೇ ಕಾರುಬಾರು. ಮೈ ಬಣ್ಣ ಕಪ್ಪಾಗಿದ್ದರೆ ಯಾರೂ ಮೂಸುವುದಿಲ್ಲ. ಆವಾಗ ಬರುತ್ತದೆ ಕೈಯಲ್ಲಿ ಮಂತ್ರ ದಂಡದಂತೆ ಫೇರ್ ಆ್ಯಂಡ್ ಲವ್ಲೀ ಕ್ರೀಮï. ಹೀಗೆ ಕಪ್ಪು ಬಣ್ಣವನ್ನು ಗೌರವರ್ಣವಾಗಿಸಲು ಎಷ್ಟೊಂದು ಕ್ರೀಮುಗಳು, ಲೋಷನ್‍ಗಳು! ಅಂತೂ ಬೆಳ್ಳಗಿದ್ದರೆ ಮಾತ್ರ ಸುಂದರಿ ಎಂಬ ಭಾವನೆ ಎಲ್ಲೆಡೆಯೂ ಹಾಸುಹೊಕ್ಕಾಗಿದೆ. ಜಾಹೀರಾತುಗಳಲ್ಲಿ ಬಿಳಿ ಮೈಗೆ ಹೆಚ್ಚು ಪ್ರಾಶಸ್ತ್ಯ ಕೊಡುವಂತೆ ಸಿನಿಮಾದಲ್ಲಿಯೂ ಬಿಳಿಯರದ್ದೇ ಸಾಮ್ರಾಜ್ಯ. ಅಂದ ಮಾತ್ರಕ್ಕೆ ಬಿಪಾಶಾ, ಕಾಜೋಲï, ನಂದಿತಾ ದಾಸ್, ರಾಣಿ ಮುಖರ್ಜಿ ಮೊದಲಾದವರನ್ನು ಕೃಷ್ಣ ಸುಂದರಿಯರು ಎಂದು ಹೇಳಲಾಗುತ್ತಿದ್ದರೂ ಸಿನಿಮಾದಲ್ಲಿ ನೋಡಿದರೆ ಅವರು ಬೆಳ್ಳಕ್ಕಿಗಳಂತೆ ಕಾಣುತ್ತಾರೆ. ಎಲ್ಲವೂ ಮೇಕಪ್ ಮಹಿಮೆ ಅಷ್ಟೆ.

ಆದರೆ ಒಂದು ಮಾತು. ಹಸು ಕಪ್ಪಾದರೆ ಹಾಲೂ ಕಪ್ಪಾ? ಎಂದು ಕೇಳುವಂತೆ ಹೆಣ್ಣು ಕಪ್ಪಾಗಿದ್ರೆ ಅವಳ ಪ್ರೀತಿಯೂ ಕಪ್ಪಾ? ಕಪ್ಪು ಹುಡುಗಿಗೂ ಎಲ್ಲರಂತೆ ಕನಸುಗಳಿವೆ, ಪ್ರೀತಿಸುವ ಹೃದಯವಿದೆ, ತಾಳ್ಮೆಯ ಮನಸ್ಸು ಇದೆ ಎಂಬುದನ್ನು ಗಂಡಸರು ತಿಳಿದುಕೊಳ್ಳುವುದಿಲ್ಲ ಯಾಕೆ? ಆದಾಗ್ಯೂ, ದಕ್ಷಿಣ ಭಾರತದ ಜನರೆಲ್ಲರೂ ಕಪ್ಪಗಿರುವವರೇ.. ವಿದೇಶಿಗಳ ದೃಷ್ಟಿಯಲ್ಲಿ ಎಲ್ಲಾ ಭಾರತೀಯರೂ ಕರಿಯರೇ.. ಇಂತಿರುವಾಗ ನಮ್ಮೂರಿನ ಗಂಡಸರಿಗೆ ಬೆಳ್ಳಗಿನ ಹುಡುಗಿಯೇ ಬೇಕು. ಹುಡುಗಿ ಸ್ವಭಾವ ಹೇಗಿದ್ದರೂ ಪರ್ವಾಗಿಲ್ಲ, ಕಾಣಲು ಬೆಳ್ಳಗೆ ಸುಂದರಿಯಾಗಿದ್ದರೆ ಸಾಕು!. ಎಲ್ಲರ ಮುಂದೆ ಎದೆ ಸೆಟೆದು ನಿಂತು ನೋಡಿದಿರಾ.. ನನ್ನ ಹುಡ್ಗಿ ಎಷ್ಟು ಚಂದ ಇದ್ದಾಳೆ! ಎಂಬ ಗರ್ವದಲ್ಲಿ ಬೀಗಬೇಕು. ಎಲ್ಲಾ ಗಂಡಸರು ಒಂದೇ ತರಾ ಎನ್ನುವ ಅಭಿಪ್ರಾಯ ನನಗಿಲ್ಲ. ಕೆಲವೊಬ್ಬರು ಹೆಣ್ಣಿನ ಆಂತರಿಕ ಸೌಂದರ್ಯಕ್ಕೆ ಬೆಲೆಕೊಟ್ಟು ವರಿಸಿಕೊಂಡ ನಿದರ್ಶನಗಳು ಎಷ್ಟೋ ಇವೆ. ಆದ್ದರಿಂದ ಒಂದು ಹೆಣ್ಣಿನ ಸೌಂದರ್ಯವನ್ನು ಬರಿ ಬಣ್ಣದಿಂದ ಮಾತ್ರ ಅಳೆಯದೇ ಅವಳ ಮನಸಿನ ಸೌದರ್ಯವನ್ನೂ ಅಳೆದು ನೋಡಿ. ಬೆಳಕಿಗೆ ರೂಪ ಕೊಟ್ಟಿದ್ದೆ ಕತ್ತಲು ಎಂಬ ಸಂಗತಿ ನಿಮಗೇ ಅರಿವಾಗುತ್ತದೆ.

ನಮ್ಮ ಸುತ್ತಲಿನ ಸಮಾಜ ಕಪ್ಪು ಬಣ್ಣವನ್ನು ಇಷ್ಟಪಡುವುದಿಲ್ಲ ಎನ್ನುವುದಕ್ಕೆ ಕೆಲವು ನಿದರ್ಶನಗಳಿಲ್ಲಿವೆ.  ಹೆಣ್ಣು ನೋಡಲು ಬಂದರೆ ‘ಹುಡುಗಿ ಕಪ್ಪು’ ಎಂದು ನಿರಾಕರಿಸುವ ವರ. ಗರ್ಭಿಣಿಯಿರುವಾಗ ಹಾಲಲ್ಲಿ ಕೇಸರಿ ಹಾಕಿ ಕುಡಿದರೆ ಹುಟ್ಟುವ ಮಗು ಬೆಳ್ಳಗಿರುತ್ತದೆ ಎಂದು ಮಗಳಿಗೆ ಕೇಸರಿ ಬೆರೆಸಿದ ಹಾಲು ಕುಡಿಸುವ ಅಮ್ಮ. ಗರ್ಭಿಣಿ ಮುದ್ದು ಮುದ್ದಾಗಿರುವ ಬೆಳ್ಳಗಿನ ಮಗುವಿನ ಫೆÇೀಟೋವನ್ನು ನೋಡುತ್ತಾ ನಿದ್ದೆ ಹೋದರೆ ಅಷ್ಟೇ ಚೆಂದದ ಮಗು ಹುಟ್ಟುತ್ತದೆ ಎಂಬ ವಿಶ್ವಾಸದಲ್ಲಿ ಬೆಡ್‍ರೂಂನಲ್ಲಿ ಮುದ್ದಾದ ಬಾಲೆಯ ಫೆÇೀಟೋ ತೂಗು ಹಾಕುತ್ತಾರೆ. ಮಗು ಜನಿಸಿದಾಗ ನೋಡಲು ಬಂದ ನೆಂಟರಲ್ಲಿ ಇತರರರು ಕೇಳುವ ಮೊದಲ ಪ್ರಶ್ನೆ ಮಗು ಹೇಗಿದೆ? ಬೆಳ್ಳಗಿದೆಯೋ, ಕಪ್ಪೋ..? ಮಗು ಆರೋಗ್ಯವಾಗಿದೆಯಾ ಅಂತಾ ಕೇಳುವುದಿಲ್ಲ ಯಾಕೆ?.

ಕಪ್ಪಾಗಿರುವುದು ಕಪ್ಪಾಗಿರುವವರಿಗೆ ಹೆಚ್ಚು ಲಾಭ ಎನ್ನಲಾಗುತ್ತೆ. ಏಕೆಂದರೆ ಅದಕ್ಕೆ ಕಾರಣವೂ ಉಂಟು. ವೈಜ್ಞಾನಿಕವಾಗಿ ಕಪ್ಪು ವರ್ಣದವರಿಗೆ ‘ಸನ್ ಬರ್ನ್’ಸಾಧ್ಯತೆ  ಕಡಿಮೆಯಂತೆ. ಅದೇ ರೀತಿ ಚರ್ಮದ ಕಾಯಿಲೆಗಳು ತಗುಲುವ ಸಾಧ್ಯತೆ ಕೂಡ ಕಡಿಮೆ. ಹವಾಮಾನದ ವ್ಯೆಪರಿತ್ಯಗಳನ್ನು ಕಪ್ಪು ಚರ್ಮ ಸುಲಭವಾಗಿ ತಡೆದುಕೊಳ್ಳಬಲ್ಲುದು. ಇಷ್ಟೆಲ್ಲಾ ಹಿನ್ನೆಲೆಯಿರುವ ಕಪ್ಪುವರ್ಣದ ಬಗ್ಗೆ ಭಾರತೀಯರು ತಾತ್ಸಾರ ಮನೋಭಾವನೆ ತಳೆದಿರುವುದು ವಿಷಾದನೀಯ.

ಶಾಕ್ ನೀಡುತ್ತಿರುವ ಮೊಬೈಲ್ ಬಿಲ್

 ಇಂದು ಮೊಬೈಲ್ ಯುಗ ನಡೆಯುತ್ತಿದೆ. ಪ್ರತಿಯೊಬ್ಬರ ಜೇಬಲ್ಲೂ, ಕೈಯಲ್ಲೂ, ಕತ್ತಲ್ಲೂ ಮೊಬೈಲ್ ಪೋನ್‍ಗಳೇ ರಾರಾಜಿಸುತ್ತಿರುತ್ತವೆ. ಸೆಲ್‍ಫೋನ್‍ಗಳಿಲ್ಲದೆ ಯಾವ ಕಾರ್ಯವನ್ನೂ ಪೂರ್ಣಗೊಳಿಸಲಾಗದಷ್ಟು ನಾವು ಮೊಬೈಲ್‍ಪೋನ್‍ಗಳಿಗೆ ಅಡಿಕ್ಟ್ ಆಗಿದ್ದೇವೆ.
ಸಾಮಾನ್ಯರಿಂದ ಹಿಡಿದು ಸಿರಿವಂತರವರೆಗೂ ಮೊಬೈಲ್ ಫೋನ್‍ಗಳ ಬಳಕೆ ಮಾಮೂಲಿಯಾಗಿದೆ. ಈ ಮಧ್ಯೆ ಮೊಬೈಲ್ ಫೋನ್ ಬಳಸುವವರ ಜೇಬು ತಮಗರಿವಲ್ಲದೆಯೇ ತೂತಾಗುತ್ತಿವುದು ಒಂದು ಅಚ್ಚರಿ ಮೂಡಿಸುವ ಸಂಗತಿ. ಒಂದು ಸಮೀಕ್ಷೆ ಪ್ರಕಾರ ಮೊಬೈಲ್ ಫೋನ್ ಬಳಸುವ ಪ್ರತಿಯೊಬ್ಬರೂ ತಿಂಗಳಿಗೆ ಸರಾಸರಿ ಕನಿಷ್ಠ 300 ರೂ.ಗಳಿಂದ ಸಾವಿರ ರೂಪಾಯಿಗಳವರೆಗೆ ಬಿಲ್ ಪಾವತಿ ಮಾಡುತ್ತಿದ್ದಾರೆ. ಅದರಲ್ಲೂ ಸ್ಮಾರ್ಟ್ ಫೋನ್‍ಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಮೇಲಂತೂ ಮೊಬೈಲ್‍ಗಾಗಿ ಪಾವತಿಸುತ್ತಿದ್ದ ಹಣ ದುಪ್ಪಟ್ಟಾಗಿದೆ. ಕಾರಣ ಮಾತನಾಡಲಿಕ್ಕೆ ಬಳಸುವ ಹಣಕ್ಕಿಂತ ಇಂಟರ್‍ನೆಟ್‍ಗೆಂದು ವ್ಯಯಿಸುವ ಹಣವೇ ಹೆಚ್ಚು.  ಫೇಸ್‍ಬುಕ್, ಟ್ವಿಟರ್, ವಾಟ್ಸಪ್, ವೀಚಾಟ್, ಲೈನ್‍ನಂತಹ ಚಾಟಿಂಗ್ ಅಪ್ಲಿಕೇಷನ್‍ಗಳ ಬಳಕೆ ಇಂದಿನವರಿಗೆ ಅನಿವಾರ್ಯವಾದುದರಿಂದ ಇಂಟರ್‍ನೆಟ್ ಇಲ್ಲದೇ ಮೊಬೈಲ್‍ಫೋನ್ ಬಳಕೆ ಮಾಡಲು ಸಾಧ್ಯವಿಲ್ಲದಂತಹ ಸ್ಥಿತಿ ಎದುರಾಗಿದೆ.
ಮೊಬೈಲ್‍ಫೋನ್‍ಗಳಲ್ಲಿ ಇಂಟರ್‍ನೆಟ್ ಸೌಲಭ್ಯ ಬಂದಮೇಲೆ ಸ್ಮಾರ್ಟ್ ಫೋನ್ ಬಳಸುವವರೆಲ್ಲರೂ ತಿಂಗಳಿಗೆ ಇಂಟರ್‍ನೆಟ್‍ಗೆಂದೇ 300 ರೂ. ನಿಂದ 400 ರೂಗಳ ವರೆಗೆ ವ್ಯಯಿಸುತ್ತಿದ್ದಾರೆ. 2ಜಿ ಹಾಗೂ 3ಜಿ ಸೌಲಭ್ಯವಿರುವ ಮೊಬೈಲ್ ಬಳಕೆದಾರರು ಇಷ್ಟು ಹಣ ಪಾವತಿಸುವುದು ಸಾಮನ್ಯವಾಗಿದೆ. ಏಕೆಂದರೆ ಪ್ರತಿ ದಿನ, ಪ್ರತಿ ಕ್ಷಣದ ಅಪ್‍ಡೇಟ್‍ಗಳಿಗೆ ಡಾಟಾ ಅನಿವಾರ್ಯವಾಗಿದೆ. ಇಂಟರ್‍ನೆಟ್ ಇಲ್ಲದ ಸ್ಮಾರ್ಟ್‍ಫೋನ್ ಖಾಲಿ ಡಬ್ಬಾಗೆ ಸಮ ಎಂದೆನಿಸತೊಡಗುತ್ತದೆ.
 ಈ ಮಧ್ಯೆ ಮೊಬೈಲ್ ಕಂಪನಿಗಳು ಹಾಗೂ ಟೆಲಿಕಾಂ ಸಂಸ್ಥೆಗಳು ಆಕರ್ಷಕ ಮಾಡೆಲ್ ಹಾಗೂ ಆಫರ್‍ಗಳನ್ನು ನೀಡಿ ಮೊಬೈಲ್‍ಗಳ ಮೇಲೆ ಸಾಮಾನ್ಯರ ಪ್ರೀತಿ ಹೆಚ್ಚಿಸುವುದರ ಮೂಲಕ ತಮ್ಮ ಆದಾಯವನ್ನೂ ದುಪ್ಪಟ್ಟಾಗಿಸಿಕೊಳ್ಳುತ್ತಿವೆ.  ಪ್ರತಿದಿನ ಅಪ್‍ಡೇಟ್ ಆಗುವ ಹೊಸಹೊಸ ಅಪ್ಲಿಕೇಷನ್ಸ್‍ಗಳು ಸಹಜವಾಗಿ ಇಂಟರ್‍ನೆಟ್ ಬಳಸಲು ಪ್ರೇರೇಪಿಸುತ್ತಿವೆ.
ನಿಮಗೆ ತಿಳಿದಿರುವಂತೆ ಇತ್ತೀಚೆಗೆ ವೋಡಫೋನ್ ಹಾಗೂ ಏರ್‍ಟೆಲ್ ಟೆಲಿಕಾಂ ಸಂಸ್ಥೆಗಳು ತಮ್ಮ ಕರೆ ದರಗಳನ್ನು ಶೇ.20 ರಿಂಧ 25 ರಷ್ಟು ಹೆಚ್ಚಿಸಿವೆ, ಜೊತೆಗೆ ಇಂಟರ್‍ನೆಟ್ ದರಗಳನ್ನು ಹೆಚ್ಚಿಸಿವೆ. ಸಾಮಾನ್ಯವಾಗಿ 1 ತಿಂಗಳು ವ್ಯಾಲಿಡಿಟಿಯುಳ್ಳ 1 ಜಿಬಿ 2ಜಿ ಡಾಟಾದ ದರ 98 ರಿಂದ 150 ರ ಆಸುಪಾಸಿನಲ್ಲಿತ್ತು. ಈಗ ಒಂದು ತಿಂಗಳ ವ್ಯಾಲಿಡಿಟಿಯನ್ನು 21 ದಿನಕ್ಕೆ ನಿಗದಿಗೊಳಿಸುವುದರ ಮೂಲಕ ಗ್ರಾಹಕರ ಜೇಬಿಗೆ ಮತ್ತಷ್ಟು ಕತ್ತರಿ ಹಾಕುತ್ತಿವೆ. ನಿಮಗೆ 1 ಜಿಬಿ 2ಜಿ ಡಾಟಾಗೆ ಬೇಕೆಂದರೆ 170 ರೂ. ಪಾವತಿಸುವುದು ಅನಿವಾರ್ಯ. ಅದರಲ್ಲೂ 3ಜಿ ಮೊಬೈಲ್ ಬಳಸುತ್ತಿದ್ದರೆ ದುಪ್ಪಟ್ಟು ಹಣ ಪಾವತಿಸಲೇಬೇಕಾದ ಸಂದರ್ಭ ಅನಿವಾರ್ಯವಾಗುತ್ತದೆ.
ಯಾವ ಪ್ಲಾನ್ ಆಯ್ದುಕೊಳ್ಳಬೇಕು, ಯಾವ ಪ್ಲಾನ್ ಸೂಕ್ತವಾದುದು ಎಂಬುದು ಗ್ರಾಹಕರ ತಲೆ ಬಿಸಿ ಮಾಡಿದೆ. ಏಕೆಂದರೆ ಯಾವ ಪ್ಲಾನ್ ಆಯ್ದುಕೊಂಡರೂ ಒಂದಲ್ಲಾ ಒಂದು ರೀತಿಯಲ್ಲಿ ಟೆಲಿಕಾಂ ಸಂಸ್ಥೆಗಳು  ಜೇಬನ್ನು ಕತ್ತರಿಸುತ್ತಲೇ ಇರುತ್ತದೆ.
ಅಗ್ರ ಟೆಲಿಕಾಂ ಸಂಸ್ಥೆಗಳಾದ ಭಾರ್ತಿ ಸಂಸ್ಥೆಯ ಏರ್‍ಟೆಲ್ ಹಾಗೂ ವೊಡಫೆÇೀನ್, ಸರಕಾರಿ ಹರಾಜಿನಲ್ಲಿ ಮೊಬೈಲ್ ತರಂಗಾಂತರÀ ಅಧಿಪತ್ಯಕ್ಕೆ ಪೈಪೆÇೀಟಿಯಿಂದ ಬಿಡ್ ಮಾಡುತ್ತಿರುವುದರಿಂದ ಬಹಳ ಬೇಗ ನಿಮ್ಮ ಮೊಬೈಲ್ ಇನ್ನೂ ದುಬಾರಿಯಾಗಲಿದೆ.
ಮಾರುಕಟ್ಟೆಯ ಶೇ 22 ರಷ್ಟು(20 ಕೋಟಿ ಚಂದಾದಾರರು) ಚಂದಾದಾರರನ್ನು ಹೊಂದಿರುವ ಭಾರ್ತಿ ಏರ್‍ಟೆಲ್ ಹಾಗೂ ವೋಡಫೋನ್ ಸಂಸ್ಥೆಗಳು ಕರೆಯ ದರದಲ್ಲೂ ಹೆಚ್ಚಿನ ಬದಲಾವಣೆಗಳನ್ನು ಮಾಡಿದ್ದು ಪ್ರತಿ ಲೋಕಲ್ ಕರೆಗೆ 50 ರಿಂದ 70 ಪೈಸೆ ಸಾಮಾನ್ಯವಾಗಿದೆ. ಇದರೊಂದಿಗೆ ಕರೆಯದ ದರೆಗಳನ್ನು ಕಡಿಮೆಮಾಡಿಕೊಳ್ಳಲು ರಿಚಾರ್ಜ್ ಮಾಡಿಸಿಕೊಂಡರೂ ಮೊದಲಿನ ಎರಡು ಕರೆಗಳಿಗೆ ಹೆಚ್ಚಿನ ಹಣ ಪಾವತಿಸುವುದು ಅನಿವಾರ್ಯವಾಗಿದೆ.
ಇದ್ದುದರಲ್ಲೇ ಬಿಎಸ್‍ಎನ್‍ಎಲ್ ಇನ್‍ಟರ್‍ನೆಟ್ ಪ್ಯಾಕ್‍ನ್ನು ಕಡಿಮೆ ದರ (2ಜಿ/3ಜಿ 1ಜಿಬಿ ಡಾಟಾಗೆ 139 ರೂ.)ದ ಸೇವೆ ಒದಗಿಸುತ್ತಿದೆ.

* ಪಾಪಾ ಪ್ರೀತ್ಸೋರ್ ಪ್ರಾಬ್ಲಮ್ ಯಾಕ್ ಕೇಳ್ತಿರಾ..!
ಹೌದು, ಇತ್ತೀಚೆಗೆ ಟೆಲಿಕಾಂ ಸಂಸ್ಥೆಗಳು ಕರೆಯ ದರಗಳು ಹಾಗೂ ಇಂಟರ್‍ನೆಟ್ ಪ್ಯಾಕ್‍ನ ದರಗಳನ್ನು ಹೆಚ್ಚಿಸಿರುವುದರಿಂದ ಗಂಟೆಗಟ್ಟಲೆ ಫೋನ್‍ನಲ್ಲೇ ರೋಮ್ಯಾನ್ಸ್ ಮಾಡುತ್ತಿದ್ದ ಪ್ರೇಮಿಗಳಿಗೆ ತಳಮಳ ಆರಂಭವಾಗಿದೆ. ಇತ್ತ ಮಾತನಾಡದೆಯೂ ಇರದೆ, ಅತ್ತ ಏರುತ್ತಲೇ ಇರುವ ಮೊಬೈಲ್ ಬಿಲ್‍ನ ಟಾರ್ಚರ್‍ನ ನಡುವೆ ಸಿಲುಕಿ ಕೈಕೈಹಿಸುಕಿಕೊಳ್ಳುತ್ತಿದ್ದಾರೆ. ಯಾವುದೇ ನೆಟ್‍ವರ್ಕ್‍ಗೆ ಬದಲಾಯಿಸಿಕೊಂಡರೂ ಕಾಲ್ ರೇಟ್‍ಗಳು ಕಡಿಮೆಯಾಗುವುದಿಲ್ಲ. ಯಾವುದೇ ಆಫರ್‍ಗಳ ಮೊರೆಹೋದರೂ ಒಂದಲ್ಲಾ ಒಂದು ರೀತಿಯಲ್ಲಿ ಹೆಚ್ಚಿನ ಹಣ ಪಾವತಿಸುವುದು ಅನಿವಾರ್ಯವಾದುದರಿಂದ ತಮ್ಮ ಮಾತಿಗೆ ಬ್ರೇಕ್ ಹಾಕುವುದು ಅನಿವಾರ್ಯವಾಗಿದೆ. ಮೊಬೈಲ್‍ನ ಬಿಲ್ ಪ್ರೇಮಿಗಳ ವಿರಹ ವೇದನೆಯನ್ನು ಹೆಚ್ಚಿಸುತ್ತಿವೆ. ಗಂಟೆಗಟ್ಟಲೇ ಮಾತನಾಡಿ ರೂಢಿಯಾಗಿರುವವರಿಗಂತೂ ಒಮ್ಮೆಲೇ ಮಾತಿಗೆ ಬ್ರೇಕ್ ಹಾಕುವುದು ಎಷ್ಟು ಕಷ್ಟ ಎಂದು ಪ್ರೀತಿಸುತ್ತಿರುವವರಿಗಷ್ಟೇ ಗೊತ್ತು.

* ಇಂಟರ್‍ನೆಟ್ ಡಾಟಾ ಮಿತವಾಗಿ ಬಳಸೋದು ಹೇಗೆ?
  • ಅನಿವಾರ್ಯವಿದ್ದಾಗ ಮಾತ್ರ ನಿಮ್ಮ ಸ್ಮಾರ್ಟ್‍ಪೋನ್‍ನಲ್ಲಿ ಇಂಟರ್‍ನೆಟ್ ಆನ್ ಮಾಡಿಕೊಂಡು ಬಳಸಿ.
  • ವಿಡಿಯೋ ಡೌನ್‍ಲೋಡ್ ಮಾಡುವುದನ್ನು ಕಡಿಮೆಮಾಡಿ.
  • ಯೂಟೂಬ್‍ನ್ನು ಮಿತವಾಗಿ ಬಳಸಿ.
  • ನಿಮ್ಮ ಮೊಬೈಲ್‍ನ ಜಿಪಿಎಸ್‍ನ್ನು ಆಪ್ ಮಾಡಿಟ್ಟುಕೊಳ್ಳಿ.
  • ನಿಮ್ಮ ಮೊಬೈಲ್‍ನಲ್ಲಿನ ಗೂಗಲ್ ಪ್ಲಸ್ ಇದ್ದಲ್ಲಿ ಅದರ ಬ್ಯಾಕಪ್ ಸೌಲಭ್ಯವನ್ನು ಆಫ್ ಮಾಡಿಟ್ಟುಕೊಳ್ಳಿ. ಇದರಿಂದ ಹೆಚ್ಚಿನ ಡಾಟಾವನ್ನು ಸೇವ್ ಮಾಡಬಹುದು.
  • ಪ್ರಯಾಣದ ವೇಳೆ ಗೂಗಲ್ ಮ್ಯಾಪ್ ಬಳಸದಿದ್ದರೆ ಹೆಚ್ಚಿನ ಡಾಟಾವನ್ನು ಸೇವ್ ಮಾಡಿಕೊಳ್ಳಬಹುದು.
  • ಹಾಗೆ, ನೀವು ನಿಮ್ಮ ಮೊಬೈಲ್‍ನಲ್ಲಿ ತೆಗೆದ ಎಲ್ಲಾ ಪೋಟೋಗಳನ್ನು ಶೇರ್ ಮಾಡುವ ಬದಲು ಆಯ್ಡ ಪೋಟೋಗಳನ್ನು ಮಾತ್ರ ಶೇರ್ ಮಾಡಿ.
  • ಫೇಸ್‍ಬುಕ್, ವಾಟ್ಸ್‍ಅಪ್, ಲೈನ್, ವೀಚಾಟ್‍ಗಳಂತಹ ಅಪ್ಲಿಕೇಷನ್‍ಗಳು ಸದಾ ಚಾಲ್ತಿತಿಯಲ್ಲಿದ್ದರೆ ಹೆಚ್ಚಿನ ಡಾಟಾವನ್ನು ಬಳಸಿಕೊಳ್ಳುತ್ತವೆ ಆದ್ದರಿಂದ, ಅನಿವಾರ್ಯತೆಯಿದ್ದಾಗ ಚಾಟ್‍ಮಾಡಿ ಮಿಕ್ಕ ಸಮಯದಲ್ಲಿ ಇಂಟರ್‍ನೆಟ್ ಆಫ್ ಮಾಡಿಬಿಡಿ.
  • ವೈಫೈ ಲಭ್ಯವಿದ್ದಲ್ಲಿ ನಿಮ್ಮ ನೆಟ್ ಕನೆಕ್ಷನ್‍ನ್ನು ಆಫ್ ಮಾಡಿ ವೈಫೈ ಲಾಭ ಪಡೆದುಕೊಳ್ಳಿ.

* ಮೊಬೈಲ್ ಬಿಲ್ ಕಡಿಮೆ ಮಾಡೋದು ಹೇಗೆ?
  • ಕೈಯಲ್ಲಿ ಮೊಬೈಲ್ ಇದೇ ಎಂದು ಪ್ರತಿ ಸಣ್ಣಪುಟ್ಟ ಕೆಲಸಗಳಿಗೂ ಕಾಲ್ ಮಾಡುವ ಬದಲು ಎಸ್‍ಎಮ್‍ಎಸ್ ಮಾಡುವುದು ಉತ್ತಮ.
  • ಎಸ್‍ಟಿಡಿ, ಐಎಸ್‍ಡಿ ಕರೆಗಳನ್ನು ನೀವು ಮಾಡುತ್ತಿದ್ದರೆ ಈ ಕರೆಗಳಿಗಾಗಿಯೇ ಇರುವ ಆಫರ್ ಟಾರಿಫ್‍ಗಳನ್ನು ಆಯ್ದುಕೊಳ್ಳಿ.
  • ಕರೆದರಗಳನ್ನು ಕಡಿಮೆಮಾಡಿಕೊಳ್ಳಲು ಕುಟುಂಬದವರೆಲ್ಲ ಒಂದೇ ನೆಟ್‍ವರ್ಕ್ ಸಿಮ್‍ಗಳನ್ನು ಉಪಯೋಗಿಸುವುದು ಲೇಸು.
  • ನಿಮ್ಮ ಅವಶ್ಯಕತೆಗೆ ಹೊಂದಿಕೊಳ್ಳುವಂತಹ ಸರಿಯಾದ ಪ್ಲಾನ್ ಆಯ್ಕೆ ಮಾಡಿಕೊಳ್ಳಿ.

ಬದುಕಲು ಸ್ಫೂರ್ತಿ ತುಂಬಿದ ಆ ಫೇಸ್ ಬುಕ್ ಸ್ಟೇಟಸ್

ಫೇಸ್‍ಬುಕ್ ಎಂಬ ಸಾಮಾಜಿಕ ಸಂಪರ್ಕ ಮಾಧ್ಯಮ ಜನರ ಮೊಬೈಲ್‍ಗೆ ಬಂದದ್ದೆ ತಡ. ಊಹಿಸಲಾಗದಷ್ಟು ವೇಗವಾಗಿ ಇಂದು ಪ್ರತಿಯೊಬ್ಬರೂ ಅದಕ್ಕೆ ಅಡಿಕ್ಟ್ ಆಗಿಬಿಟ್ಟಿದ್ದಾರೆ. ಫೇಸ್‍ಬುಕ್ ಬಗ್ಗೆ ಹಲವರು ನಾನಾ ರೀತಿ ಮಾತಾಡ್ತಾರೆ. ಅದು ಜನರ ಸಂಸ್ಕøತಿಯನ್ನೇ ಹಾಳುಮಾಡುತ್ತ್ತಿದೆ. ಸಮಾಜದ ಸ್ವಾಸ್ಥ್ಯತೆಯನ್ನೇ ಸಂಹಾರಮಾಡುತ್ತಿದೆ. ಸಂಬಂಧಗಳನ್ನು ಕೊಂದುಹಾಕುತ್ತಿದೆ. ಹೀಗೆ ನಾನಾ ಬಗೆಯ ಕಮೆಂಟ್‍ಗಳ ಫೇಸ್‍ಬುಕ್ ಬಗ್ಗೇನೇ ಅದೇ ಫೇಸ್‍ಬುಕ್‍ನಲ್ಲಿ ಆಗಾಗ ಕೇಳುತ್ತಲೇ ಕೇಳಿಬರುತ್ತಿರುತ್ತವೆ. ಅದಕ್ಕೆ ಉತ್ತರ ನೀವೇ ಹುಡುಕಿ.
ಆದರೆ ನನ್ನ ಪ್ರಕಾರ ಫೇಸ್‍ಬುಕ್ ಎಂಬುದು ಒಂದು ಕ್ರಾಂತಿ ಎಂದರೆ ತಪ್ಪಾಗಲಾರದು. ಒಂದು ಕ್ಷಣÀ ಅದರ ಬಗ್ಗೆ ನಾನು ಹೆಮ್ಮೆ ಪಟ್ಟಿದ್ದೂ ಇದೆ. ಫೇಸ್‍ಬುಕ್‍ನ್ನು ಹೀಗೂ ಬಳಸಿಕೊಳ್ಳಬಹುದಾ ಎಂದು. ಒಂದು ಒಳ್ಳೆಯ ಸಂದೇಶವನ್ನು ಲಕ್ಷಾಂತರ ಜನರಿಗೆ ಅತೀ ಸರಳವಾಗಿ ರವಾನಿಸುವಲ್ಲಿ ಫೇಸ್‍ಬುಕ್ ನನಗೆ ಗ್ರೇಟ್ ಅನಿಸಿತ್ತು. ಅದು ಮನುಷ್ಯನ ಮನಸ್ಸನೂ ಬದಲಾಯಿಸುತ್ತದೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಫೇಸ್‍ಬುಕ್‍ನಿಂದ ಯಾರು ಬದಲಾಗಿದ್ದಾರೋ ಇಲ್ಲವೋ ಗೊತ್ತಿಲ್ಲ. ನಾನು ಮಾತ್ರ ಫೇಸ್‍ಬುಕ್‍ನಿಂದ ಬದಲಾಗಿದ್ದೇನೆ ಹೇಗೆ ಅಂತೀರಾ?
 ನೀವೆ ಹೇಳಿ ನಾವು ಚಾಕುವನ್ನು ತರಕಾರಿ ಕತ್ತರಿಸಲೂ ಬಳಸುತ್ತೇವೆ, ಕೊಲೆ ಮಾಡಲೂ ಬಳಸುತ್ತೇವೆ ಇಲ್ಲಿ ತಪ್ಪು ಚಾಕೂವಿನದ್ದೋ ಅಥವಾ ಅದನ್ನು ಬಳಸುವ ಮನುಷ್ಯರದ್ದೋ?
ಯಾವುದಾದರೂ ಅಷ್ಟೇ ಪ್ರತಿಯೊಂದಕ್ಕೂ ಎರಡು ಮುಖಗಳಿರುತ್ತವೆ. ಒಂದು ಕೆಟ್ಟದ್ದು ಇನ್ನೊಂದು ಒಳ್ಳೆಯದು. ಅದನ್ನು ನಾವು ಹೇಗೆ ಬಳಿಸಿಕೊಳ್ಳುತ್ತೇವೆ ಎನ್ನುವುದು ಮುಖ್ಯ 
ಎಲ್ಲರಂತೆ ನನ್ನದೂ ಒಂದು ಫೇಸ್‍ಬುಕ್ ಅಕೌಂಟ್ ಇದೆ. ಮೊನ್ನೆ ನನ್ನ ಫೇಸ್‍ಬುಕ್ ಅಕೌಂಟ್‍ನ ಗೋಡೆಯ ಮೇಲೆ ಯಾರೋ ಅಪ್‍ಡೇಟ್ ಮಾಡಿದ ಸ್ಟೇಟಸ್ ಒಂದನ್ನು ನೋಡಿದೆ. ಆ ಸ್ಟೇಟಸ್ ನೋಡಿ ನನಗೂ ತಕ್ಷಣ ಮನಸ್ಸಿಗೆ ಒಂದು ತರಹದ ಕುತೂಹಲ ಉಂಟಾಯಿತು. ಮತ್ತೆ ಬೇರೆ ಯಾವುದೇ ಸ್ಟೇಟಸ್ ಸಹ ಅಷ್ಟೊಂದು ಮನಸ್ಸಿಗೆ ಹಿಡಿಸಿದ್ದಿಲ್ಲ. ಮತ್ತು ಆ ಸ್ಟೇಟಸ್ ನೋಡಿದಾಗಿನಿಂದ ನಾನು ಅದನ್ನು ಅನುಸರಿಸಬೇಕು ಎಂದು ಅನಿಸತೊಡಗಿತು ಆ ಸ್ಟೇಟಸ್ ಹೀಗಿದೆ ನೋಡಿ.
"ಹುಟ್ಟು ದರಿದ್ರವಾಗಿದ್ದರೆ ಏನು? ಸಾವು ಚರಿತ್ರೆ ಆಗಿರಬೇಕು"
ಇದರಲ್ಲಿ ಬಹಳಷ್ಟು ಸತ್ಯ ಇದೆ ಎಂದೆನಿಸತೊಡಗಿತು . ಹುಟ್ಟು ನಮ್ಮ ಅರಿವಿಗೆ ಇಲ್ಲದೆ ,ಮತ್ತು ನಾವು ಶ್ರೀಮಂತರೋ, ದರಿದ್ರರೋ ತಿಳಿಯದೆ ಆಗುವಂತದು, ಅದು ನಮ್ಮ ತಪ್ಪಲ್ಲ ಆದರೆ ಸಾವು ಸಹ ಅದೇ ದರಿದ್ರದಲ್ಲಿ ಆದರೆ ಅದಕ್ಕೆ ಪೂರ್ತಿ ಹೊಣೆ ಆ ಮನುಷ್ಯನೇ ಎಂದೆನಿಸಿತು. ಯಾಕೆಂದರೆ ಹುಟ್ಟಿದ ಕೆಲವು ನಂತರದ ದಿನಗಳ ಬಳಿಕ ಅವರ ಜೀವನಕ್ಕೆ ಅವರೇ ಜವಾಬ್ದಾರಿ ಎನ್ನುವುದು ನನ್ನ ವಾದ, ಕಾರಣ ನಮಗೆ ಬುದ್ದಿ ಬಂದಾದ ನಂತರ ನಮ್ಮ ನಮ್ಮ ಜೀವನದ ಗುರಿ ಹೊತ್ತು ನಮ್ಮ ಬಾಳಿನ ದಾರಿಯನ್ನು ಕೊನೆಯತನಕ ಹೇಗೆ ಒಯ್ಯಬೇಕು ಎಂದು ನಿರ್ಧಾರ ಮಾಡುವವರು ನಾವೇ, ಹಾಗಿರುವಾಗ ನಮ್ಮ ಜೀವನದ ಕೊನೆಯ ಹಂತವಾದ  ಸಾವು ಹೇಗಿರಬೇಕು ಎಂದೂ ಸಹ ನಾವೇ ನಿರ್ಧಾರ ಮಾಡಬೇಕಲ್ಲವೇ ?
ಆದೆಷ್ಟೋ ಮಹಾನುಭಾವರು ಹುಟ್ಟುವಾಗ ಬಹಳಷ್ಟು ಬಡವರು, ಅದೇ ಅವರು ಸಾಯುವ ವೇಳೆಗೆ ತಮ್ಮ ತಮ್ಮ ಸಾದನೆಗಳನ್ನು ಚರಿತ್ರೆಯ ಪುಟದಲ್ಲಿ ಎಂದು ಮರೆಯಲಾಗದ ಪುಟಗಳನ್ನಾಗಿ ಮಾಡಿಟ್ಟು ಹೋಗಿದ್ದಾರೆ. ಹಾಗಾದರೆ ಅವರೆಲ್ಲಾ ಏನು ದೈವ ಮಾನವರೇ? ಇಲ್ಲ. ಅವರಲ್ಲಿ ಏನಾದರು ಸಾದಿಸಬೇಕೆಂಬ ಛಲವಿತ್ತು .ಅದೆಷ್ಟೇ ಕಷ್ಟ ಬಂದರೂ ಅದನ್ನೆಲ್ಲಾ ಮೀರಿ ತಮ್ಮ ಆತ್ಮ ಸ್ಥೆರ್ಯದಿಂದ ಸಾಧಿಸಿ ಇಂದು ಚರಿತ್ರೆಯ ಪುಟಗಳಲ್ಲಿ ರಾರಾಜಿಸುತ್ತಿದ್ದಾರೆ. ಅದೆಕ್ಕೆಲ್ಲ ಅವರ ದೃಡ ಮನಸ್ಸು, ಆತ್ಮ ವಿಶ್ವಾಸ ಕಾರಣ.
ನಮ್ಮ ಜೀವನದ ದಿನಗಳನ್ನು ನಿಮಿಷಗಳಲ್ಲಿ ಎಣಿಸಬಹುದು, ಹೀಗಿರುವಾಗ ಈ ಸ್ವಲ್ಪ ಅವದಿಯಲ್ಲಿ ಆ ದೇವರು ಕೊಟ್ಟಿರುವ ಈ ಜೀವನಕ್ಕೆ ಒಂದು ಒಳ್ಳೆ ರೂಪ ಕೊಟ್ಟು ಏನಾದರು ಸಾಧಿಸಿ ಹೋಗಬೇಕಾಗಿರುವುದು ನಮ್ಮ ಕರ್ತವ್ಯ. ಅನವಶ್ಯಕವಾದ ಬೇರೆ ಬೇರೆ ವಿಷಯಗಳಿಗೆ ಪ್ರಾಮುಖ್ಯತೆ ಕೊಡದೆ ಏನಾದರು ಒಂದು ಛಲ ಇಟ್ಟುಕೊಂಡು ಅದನ್ನು ಸಾಧಿಸಿ ತೋರಿಸಲು ಪ್ರಯತ್ನ ಪಡೋಣ. ಒಂದು ವೇಳೆ ಗುರಿ ತಲುಪಲು ಸಾಧ್ಯವಾಗದೆ ಹೋದರೆ ಮತ್ತೊಮ್ಮೆ ಪ್ರಯತ್ನಿಸೋಣ, ಕಾರಣ ಎಲ್ಲರೂ ತಮ್ಮ ಮೊದಲ ಪ್ರಯತ್ನದಲ್ಲೇ ಗೆದ್ದು ಚರಿತ್ರೆಯ ಪುಟಕ್ಕೆ ಹೋದವರಲ್ಲ. ಕೆಲ ಗುರಿಗಳು ಅಷ್ಟು ಬೇಗ ಸಿಗುವಂತದ್ದಲ್ಲ ಅವುಗಳನ್ನು ಸೇರಲು ಬಹಳಷ್ಟು ಶ್ರಮಿಸಬೇಕಾಗುತ್ತದೆ ಅದಕ್ಕೆ ಕಾರಣ ಆ ಗುರಿ ಅಥವಾ ಕ್ಷೇತ್ರಕ್ಕೆ ಇರುವ ಮಹತ್ವ. ಅದು ಎಂತದೆ ಇರಲಿ ಮನಸ್ಸಿದ್ದರೆ ಮಾರ್ಗ ಉಂಟು ಎನ್ನುವಂತೆ ಅದನ್ನು ಬೆಂಬಿಡದೆ ಸಾಧಿಸಬೇಕು. 
ಈ ರೀತಿಯಲ್ಲಿ ನನ್ನ ಬದುಕಿಗೆ ಸ್ಪೂರ್ತಿ ತುಂಬಿದ ಫೇಸ್‍ಬುಕ್‍ಗೂ, ಹಾಗೂ ಅದ್ಭುತವಾದ ಸಂದೇಶವನ್ನು ಅಪ್‍ಡೇಟ್ ಮಾಡಿದ ಆ ಪುಣ್ಯಾತ್ಮನಿಗೂ ಹ್ಯಾಟ್ಸ್‍ಅಪ್.
       - ಸುರೇಶ್ (ಬೆಂಗಳೂರು)

ಕಣ್ಣುಗಳಿಗಿರಲೊಂದು ಕನ್ನಡಕ

“ಕಣ್ಣು ಹೇಗೇ ಇರಲಿ...ಅದಕ್ಕೊಂದು ಕೂಲಿಂಗ್ ಗ್ಲಾಸ್ ಇರಲಿ”. ಇದು ಸದ್ಯದ ಯುವ ಜನಾಂಗದಲ್ಲಿ ಎಲ್ಲರೂ ಒಪ್ಪಿಕೊಳ್ಳುವ ಒಂದು ಟ್ಯಾಗ್ ಲೈನ್.  ಸಿಟಿಗಳಲ್ಲಂತೂ ಕಣ್ಣಿಗೆ ಕನ್ನಡಕ ಇಲ್ಲದವರನ್ನು ಕನ್ನಡಕ ಹಾಕಿಯೇ ಹುಡುಕಬೇಕು. ಏಕೆಂದರೆ ಕನ್ನಡಕ ಈಗ ಸ್ಪೆಕ್ಟ್, ಗಾಗಲ್ಸ್ ಆಗಿ ಬದಲಾಗಿ ಫ್ಯಾಷನ್ ರೂಪ ತಾಳಿದೆ. ಅದರಲ್ಲೂ ಯುವಜನತೆಗೆ ಈ ಕನ್ನಡಕಗಳು ಅಚ್ಚು ಮೆಚ್ಚು.
ಬಣ್ಣ ಬಣ್ಣ, ಬಗೆಬಗೆಯ ಕನ್ನಡಕಗಳನ್ನು ಧರಿಸುವಲ್ಲಿ ಯುವಕರಿಗೆ ಅದೇನೋ ಖುಷಿ. ಫ್ಯಾಷನ್ ನೆಪದಲ್ಲಿ ಧರಿಸುವ ಕನ್ನಡಕ ಕಣ್ಣಿನ ದೃಷ್ಟಿಯನ್ನು ಕಿತ್ತುಕೊಳ್ಳಬಹುದು ಎಂಬ ಕಿಂಚಿತ್ತೂ ಭಯವಿಲ್ಲದೇ ನಾನಾತರಹದ ಕನ್ನಡಕಗಳನ್ನು ಧರಿಸುವ ಇಂದಿನವರು ಈ ಕನ್ನಡಕಗಳ ಕ್ರೇಜ್‍ಗೆ ಮನಸೋತಿದ್ದಾರೆ.  ಕೆಲವರಂತೂ ಕನ್ನಡಕ ಹಾಕಿಕೊಳ್ಳೊ ಉದ್ದೇಶವೇ ಬೇರೆಯಾಗಿರುತ್ತೆ.   ಏಕೆಂದರೆ ಕೆಲವರ ಸನ್‍ಗ್ಲಾಸ್‍ನಲ್ಲೇ ಒಂದು ಹನಿ ಕಣ್ಣೀರು ಹಾಕಿದ್ರೆ, ಸಿಟ್ಟು ಮಾಡಿಕೊಂಡ್ರೆ, ಮುಜುಗರಕ್ಕೆ ಒಳಗಾದರೂ ಅಥವಾ ಇನ್ನೇನೇ ಮಾಡಿದರೂ ಎದುರಿಗೆ ಇರುವವರಿಗೆ ಗೊತ್ತಾಗುವುದಿಲ್ಲ. ಒಟ್ಟಿನಲ್ಲಿ ಸಾನಿಯಾಳಿಂದ ಹಿಡಿದು ಸೊನಿಯಾ ವರೆಗೂ ಸನ್ ಗ್ಲಾಸ್ ಕಣ್ಣುಗಳನ್ನು ಹಾಗೂ ಅವುಗಳಲ್ಲಿನ ಭಾವನೆಗಳನ್ನು  ಮರೆಮಾಡುತ್ತಲೇ ಬಂದಿವೆ.
ಈ ಸನ್ ಗ್ಲಾಸ್‍ಗಳು. ಬಿಸಿಲಿಗೆ ಅನಿವಾರ್ಯ ಅಂದಾದರೆ, ಸಂಜೆಯ ಝಗಮಗಿಸುವ ಬೆಳಕಿನ ಪಾರ್ಟಿಗೆ ಸನ್‍ಗ್ಲಾಸ್ ಯಾಕೆ? ಕೆಲವರು ಸದಾ ಸನ್‍ಗ್ಲಾಸ್‍ನಲ್ಲಿ ತಮ್ಮ ಕಂಗಳನ್ನು ಅಡಗಿಸಿಕೊಂಡಿರುತ್ತಾರೆ. ಭಾವನೆಗಳನ್ನು ಮುಚ್ಚಿಡುವ ತಂತ್ರವಿರಬಹುದು.  ಏನೇಹೇಳಿ ಸನ್‍ಗ್ಲಾಸ್ ಹಾಕೋರು ಮಾಡಿದ್ದೆಲ್ಲ ಫ್ಯಾಷನ್ ಸಾಮಾನ್ಯ ಜನ ಕೂಡ ಸೂರ್ಯನಿಂದ ರಕ್ಷಣೆ ಸಿಗಲಿ ಅಂತಷ್ಟೆ ಅಲ್ಲ, ಸ್ಟೈಲï, ಸೆಲೆಬ್ರಿಟಿ ಲುಕ್‍ಗೋಸ್ಕರ ಸನ್‍ಗ್ಲಾಸ್ ಧರಿಸುವವರು ಇದ್ದಾರೆ. ಟಿವಿ ಕಲಾವಿದರು, ಸಿನಿಮಾ ಮಂದಿ, ಮಾಡೆಲï ಜಗತ್ತಿನವರನ್ನು ನೋಡಿಯೇ ಅದೆಷ್ಟೊ ಮಂದಿ ಸನ್‍ಗ್ಲಾಸ್ ಮೊರೆ ಹೋಗುತ್ತಾರೆ. ಸ್ಟೈಲಿಶ್ ಮತ್ತು ಗ್ಲಾಮರಸ್ ಲುಕ್ ನೀಡುವ ಕನ್ನಡಕ ಧರಿಸಲು ಯಾರು ತಾನೇ ಇಷ್ಟಪಡಲ್ಲ ಹೇಳಿ? ಅಷ್ಟೆ ಅಲ್ಲ, ನಿಮ್ಮ ವ್ಯಕ್ತಿತ್ವಕ್ಕೆ ಸರಿಹೊಂದುವಂಥ ಸನ್‍ಗ್ಲಾಸನ್ನು ಮಾತ್ರ ಬಳಸಿ.
ಹಳೆ ಕಾಲದ ಸಿನಿಮಾಗಳಲ್ಲಿ ನಾಯಕರ ಕಣ್ಣನ್ನು ಅಲಂಕರಿಸಿದ್ದ ದೊಡ್ಡ ಗಾತ್ರದ ಕನ್ನಡಕಗಳು ಇದೀಗ ಹರೆಯದ ಹುಡುಗರಿಗೆ ಅಚ್ಚುಮೆಚ್ಚು. ಫ್ರೇಮ್‍ಗಳ ಮೇಲೆ ಅಲ್ಲಲ್ಲಿ ಹೊಳೆಯುವ ವಜ್ರದ ಹರಳುಗಳಿರುವ ಕನ್ನಡಕದಲ್ಲಿ ಹುಡುಗಿಯರು ಮತ್ತಷ್ಟು ಸುಂದರವಾಗಿ ಕಾಣಲು ಹಾತೊರೆಯುತ್ತಾರೆ. ಈಗಂತೂ ಹಲವಾರು ಬಗೆಯ ಸನ್‍ಗ್ಲಾಸ್‍ಗಳು ಕಪ್ಪು, ಬೂದು, ಕಂದು ಬಣ್ಣಗಳಲ್ಲಿ ಡಿಫರೆಂಟ್ ಲುಕ್ ನೀಡುತ್ತವೆ. ಸೆಲೆಬ್ರಿಟಿಗಳನ್ನು ನೋಡಿ ಅಂಥದ್ದೇ ಕನ್ನಡಕ ಧರಿಸುವ ಆಸೆ ಆದರೆ ತಪ್ಪೇನೂ ಅಲ್ಲ. ಆದರೆ ನಿಮ್ಮ ಮುಖಕ್ಕೆ ಹೊಂದಿಕೊಳ್ಳುವ ಹಾಗೂ ಕಂಫರ್ಟ್ ಅಂದೆನಿಸುವಂಥ ಕನ್ನಡಕಗಳನ್ನು ಮಾತ್ರ ಖರೀದಿಸಿ. ಚಂದ ಕಂಡಿದ್ದೆಲ್ಲ ನಿಮಗೆ ಹೊಂದಿಕೆ ಆಗಲ್ಲ ಅನ್ನುವುದು ನೆನಪಿರಲಿ.  ಆದರೆ ಯಾವಾಗ, ಯಾವ ಕನ್ನಡಕಗಳನ್ನು ಏಕೆ ಧರಿಸಬೇಕು ಎಂಬ ಅರಿವಿಲ್ಲದೆ, ಬಣ್ಣಬಣ್ಣದಲ್ಲಿ ಬೀದಿಬೀದಿಗಳಲ್ಲಿ ಸಿಗುವ ಗಾಗಲ್ಸ್‍ಗಳನ್ನು ಧರಿಸುವುದು ಎಷ್ಟು ಸರಿ.? ಎಂದು ಯೋಚಿಸುವುದು ಒಳಿತು.
* ಜೇಬನ್ನು ಕಿತ್ತು ತಿನ್ನೋ ಮಾಲ್‍ಗಳಿಂದ ಹಿಡಿದು ರಸ್ತೆ ಬದಿಯಲ್ಲೂ ಇದೀಗ ಸನ್‍ಗ್ಲಾಸ್‍ಗಳು ಬಿಕರಿಯಾಗುತ್ತಿವೆ. ಬಿಸಿಲಿನಿಂದ ಕಣ್ಣನ್ನು ರಕ್ಷಿಸಿಕೊಳ್ಳಲಿಕ್ಕೆ ಅನ್ನೋದು ಕೆಲವರಿಗಂತೂ ನೆಪ. ಸ್ಟೈಲಿಶ್ ಅದ್ರಲ್ಲೂ ಸೆಲೆಬ್ರಿಟಿ ಲುಕ್ ನೀಡುವ ಕನ್ನಡಕಗಳಲ್ಲೇ ಮಿಂಚಲು ಅದೆಷ್ಟು ಮಂದಿ ಕನ್ನಡಕಗಳ ಅಂಗಡಿಗಳಿಗೆ ಮುಗಿ ಬಿಳುತ್ತಾರೋ? ಒಟ್ಟಾರೆ ಸನ್‍ಗ್ಲಾಸ್‍ಗಳ ಮಾರುಕಟ್ಟೆÀಯಲ್ಲಂತೂ ಕಲರ್‍ಫುಲï ಕನ್ನಡಕಗಳು ಯಾರ್‍ಯಾರದ್ದೋ ಕಣ್ಣುಗಳನ್ನು ಅಲಂಕರಿಸಿಕೊಳ್ಳಲು ಕಾದು ಕುಳಿತಿವೆ. ನೂರಾರು ರೂ.ಗಳಿಂದ ಸಾವಿರಾರು ರೂ.ಗಳ ತನಕ ಕನ್ನಡಕಗಳು ಸಿಗುತ್ತವೆ. ಕಡಿಮೆ ಬೆಲೆಗೂ ಸೆಲೆಬ್ರಿಟಿಗಳು ಧರಿಸುವಂಥ ಸ್ಟೈಲಿಶ್ ಕನ್ನಡಕಗಳನ್ನೇ ಖರೀದಿಸಬಹುದು. ಆದರೆ ಎಲ್ಲವೂ ಅಸಲಿಯಲ್ಲ.
* ಬಹುತೇಕ ಸೆಲೆಬ್ರಿಟಿಗಳು ಧರಿಸುವುದು ದುಬಾರಿ ಬೆಲೆಯ ಹಾಗೂ ಗುಣಮಟ್ಟದ ಸನ್‍ಗ್ಲಾಸ್‍ಗಳು. ಅವುಗಳನ್ನೇ ಹೋಲುವ ತೀರ ಕಡಿಮೆ ಬೆಲೆಯ ನಕಲಿ ಕನ್ನಡಕಗಳು ಮಾರುಕಟ್ಟೆಯಲ್ಲಿವೆ. ಅವುಗಳನ್ನು ಖರೀದಿಸಬೇಡಿ ಅಂತಲ್ಲ. ಆದರೆ ಗುಣಮಟ್ಟವಲ್ಲದ ಕನ್ನಡಕಗಳನ್ನು ತುಂಬ ಹೊತ್ತು ಧರಿಸುವುದು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದಲ್ಲ. ಕೆಲ ನಿಮಿಷ ಅಥವಾ ನಿಗದಿತ ಸಂದರ್ಭಕ್ಕೆ ಮಾತ್ರ ಅಂತಾದರೆ ಚಿಂತಿಸಬೇಕಿಲ್ಲ.
* ಕನ್ನಡಕ ಧರಿಸುವುದು ಫ್ಯಾಷನ್. ಸನ್ ಗ್ಲಾಸ್ ಆಗಿರಲಿ ಅಥವಾ ದೃಷ್ಟಿ ದೋಷಕ್ಕೆ ಬಳಸುವ ಕನ್ನಡಕ ಆಗಿರಲಿ ಧರಿಸಿದಾಗ ಅದು ಫ್ಯಾಷನೇಬಲï ಆಗಿ ಕಾಣಬೇಕು, ಮುಖಕ್ಕೆ ವಿಶೇಷ ಕಳೆ ನೀಡುವಂತೆ ಇರಬೇಕೆಂದು ಬಯಸುತ್ತಾರೆ. ಆದರೆ ಕನ್ನಡಕ ಧರಿಸುವುದರಿಂದ ನಮ್ಮ ಮೇಕಪ್, ಕಣ್ಣಿನ ಸುತ್ತಲು ಬ್ಲ್ಯಾಕ್‍ಹೆಡ್ಸ್ ಕಾಣಿಸಿಕೊಳ್ಳುವುದು ಎಂಬುದು ಕೆಲವರ ಅಸಮಾಧಾನ.  ಆದ್ದರಿಂದ ಇಲ್ಲಿ ಕೆಲ ಸಲಹೆಗಳನ್ನು ನೀಡುತ್ತಿದ್ದೇವೆ, ಅವುಗಳನ್ನು ಪಾಲಿಸಿದರೆ ಕನ್ನಡಕ ಧರಿಸಿದಾಗ ಮೇಕಪ್ ಹಾಳಾಗುವುದಿಲ್ಲ, ಮುಖ ಆಕರ್ಷಕವಾಗಿ ಕಾಣುವುದು. ಜೊತೆಗೆ ಕಾಸ್ಟ್ಲಿ ಎನಿಸಿದರೂ ಕ್ವಾಲಿಟಿ ಕಡೆ ಗಮನ ಕೊಡಿ.

* ಫ್ರೇಂ ಆಯ್ಕೆ ಮಾಡುವಾಗ ಗಮನಿಸಬೇಕಾದ ಅಂಶವೆಂದರೆ ಅದು ನಿಮ್ಮ ಮುಖದ ಆಕಾರಕ್ಕೆ ಒಪ್ಪುತ್ತದೆಯೇ ಎಂದು ಪರೀಕ್ಷಿಸಿ ತೆಗೆದುಕೊಳ್ಳಬೇಕು. ಪ್ರತಿಫಲನವಲ್ಲದ ಕೋಟಿಂಕ್ ಇರುವ ಫ್ರೇಂ ಬಳಸುವುದು ತ್ವಚೆಗೆ ಒಳ್ಳೆಯದು. ಮಂದ ಬಣ್ಣ ಇರುವ ಸನ್ ಗ್ಲಾಸ್ ಕಪ್ಪು ಬಣ್ಣದ ತ್ಚಚೆಯವರಿಗೆ ಮತ್ತು ಬಿಳಿ ಬಣ್ಣದ ಅಥವಾ ಸ್ವಲ್ಪ ಹೊಳೆಯುವ ಬಣ್ಣದ ಫ್ರೇಂ ಬಿಳಿ ತ್ವಚೆಯವರಿಗೆ ಚೆನ್ನಾಗಿ ಕಾಣಿಸುವುದು.
* ನಿಮಗೆ ಹಳದಿ ಬಣ್ಣದ ಫ್ರೇಂ ಇರುವ ಕನ್ನಡಕ ತುಂಬಾ ಇಷ್ಟವಾಗಿದೆ ಅಂತ ಕೊಳ್ಳುವ ಮೊದಲು ಅದನ್ನು ಧರಿಸಿದರೆ ನಿಮ್ಮ ಮುಖಕ್ಕೆ ಚೆಂದ ಕಾಣುತ್ತದೆಯೇ ಎಂದು ನೋಡಿ ತೆಗೆದುಕೊಳ್ಳಬೇಕು. ಆದ್ದರಿಂದ ಕನ್ನಡಕ ಧರಿಸಿದಾಗ ಮುಖದ ಅಂದ ಹೆಚ್ಚಿಸುವಂತಹ ಕನ್ನಡಕದ ಆಯ್ಕೆ ಒಳ್ಳೆಯದು.   ಸನ್ ಗ್ಲಾಸ್ ಧರಿಸುವುದಾದರೆ ಕಣ್ಣು ರೆಪ್ಪೆಗಳಿಗೆ ಅಲಂಕಾರ ಬೇಕಾಗಿಲ್ಲ. ಆದರೆ ದೃಷ್ಟಿ ದೋಷಕ್ಕೆ ಅಥವಾ ತಲೆನೋವಿಗೆ ಬಳಸುವ ಕನ್ನಡಕವಾದರೆ ಕಣ್ಣಿನ ಅಲಂಕಾರ ಮಾಡಿದರೆ ಮುಖ ಆಕರ್ಷಕವಾಗಿ ಕಾಣುವುದು.


Friday, 20 December 2013

ಮನಗೆದ್ದ ಮೆಸ್ಸೇಜಿಂಗ್ ಅಪ್ಲಿಕೇಶನ್ ಗಳು ...

ವಯಸ್ಸು ಇನ್ನೂ ಹರಿನಾರರ ಗಡಿಯನ್ನೂ ಡಾಟಿರುವುದಿಲ್ಲ. ಆದರೂ ಅವರು ಂiವನಿಗರು ಎಂಬುದನ್ನು ಕೈಯಲ್ಲಿರುವ ಮೊಲ್‌ನಿಂದಲೇ ತಿಳಿದು ಕೊಳ್ಳಬೇಕು. ಇಂದಿನ ಯುವ ಪೀಳಿಗೆ  ಮೊಬೈಲ್ ಬಳಸದೇ ಯೌವನ ಶುರುವಾಗೊದೇ ಇಲ್ಲ. ಯೌವನಕ್ಕೂ ಮೊದಲೇ ಮೊಬೈಲ್ ತನ್ನ ಕಾರ್ಯ ಶುರುವಿಟ್ಟುಕೊಂಡಿರುತ್ತೆ. ಎಸ್‌ಎಮ್‌ಎಸ್‌ಗಳ ಹರಿದಾಟ ಆರಂಭವಾಗಿರುತ್ತೆ. ಮೊಬೈಲ್ ಇಲ್ಲದೇ ಎಸ್‌ಎಮ್‌ಎಸ್ ಮಾಡದೇ ಇಂದಿನ ಯುವ ಪೀಳಿಗೆ ಬದುಕಲಾಗದಷ್ಟು ಮೊಬೈಲ್‌ಗಳಿಗೆ ಅಡಿಕ್ಟ್ ಆಗಿದ್ದಾರೆ.. ಇದನ್ನೇ ಬಂಡವಾಳವನ್ನಾಗಿಸಿಕೊಂಡ ಮೊಬೈಲ್ ಕಂಪನಿಗಳು, ಬೇರೆಬೇರೆ ನೆಟ್‌ವರ್ಕ್ ಸರ್ವಿಸ್‌ಗಳು ಲಾಭ ಮಾಡಿಕೊಳ್ಳುತ್ತಿವೆ. ಹಸಿದ ಇಂದಿನ ಯುವ ಪೀಳಿಗೆಗೆ ಬಗೆಬಗೆಯ ಆಕರ್ಷಕ ಅಪ್ಲಿಕೇಷನ್ಸ್‌ಗಳನ್ನು ಸೃಷ್ಟಿಸಿ ಮತ್ತಷ್ಟು ಮೊಬೈಲ್‌ಗಳಲ್ಲೇ ಮುಳುಗುವಂತೆ ಮಾಡುತ್ತಿವೆ. ಅದರಲ್ಲೂ ಎಸ್‌ಎಮ್‌ಎಸ್‌ಗಳಿಲ್ಲದೇ ಇಂದಿನವರು ಯಾವ ಕೆಲಸವನ್ನೂ ಮಾಡಲಾಗದ ಹಂತಕ್ಕೆ ತಲುಪಿದ್ದಾರೆ. ಮೊಬೈಲ್ ಸೇವಾ ಕಂಪನಿಗಳು ಕೂಡ ಸಾಕಷ್ಟು ಅಗ್ಗದ ದರದಲ್ಲಿ, ವಿಶೇಷ ಎಸ್‌ಎಂಎಸ್ ಪ್ಯಾಕೇಜ್‌ಗಳನ್ನೂ ಒದಗಿಸಿವೆ, ಯುವಜನರು ತಮ್ಮಿಂದ ದೂರವಾಗದಂತೆ ನೋಡಿಕೊಳ್ಳಲು ಹೆಣಗಾಡುತ್ತಿವೆ.
ಇಂಟರ್ನೆಟ್ ವ್ಯವಸ್ಥೆ ಈ ಪುಟ್ಟ ಸಾಧನಗಳಿಗೆ ಯಾವಾಗ ಅಳವಡಿಕೆಯಾಯಿತೋ, ಎಸ್‌ಎಂಎಸ್ ವ್ಯವಸ್ಥೆಗೇ ಸಂಚಕಾರ ಬಂತು. ಇದಕ್ಕೆ ಕಾರಣವೆಂದರೆ, ಇಂಟರ್ನೆಟ್ ಇದ್ದರೆ ಉಚಿತವಾಗಿ ಸಂದೇಶ, ಚಾಟಿಂಗ್ ಜತೆಗೆ, ಚಿತ್ರ, ವೀಡಿಯೋ, ಆಡಿಯೋ ಫೈಲ್‌ಗಳನ್ನು ಕೂಡ ಕಳುಹಿಸಬಹುದು. ಮಾತ್ರವಲ್ಲದೆ, ಉಚಿತ ಕರೆಗಳನ್ನೂ ಮಾಡಬಹುದು. ಹೌದು, ಇಂತಹಾ ಅಪ್ಲಿಕೇಶನ್‌ಗಳಿವೆ ಎಂಬುದು ಬಹುತೇಕರಿಗೆ ಅರಿವಿಲ್ಲ.
ಇಂಥವುಗಳಲ್ಲಿ ಹೆಚ್ಚಾಗಿ ಕೇಳಿಬರುತ್ತಿರುವುದುWhatsApp, We-Chat, Viber, Skype
ಮುಂತಾದ ಅಪ್ಲಿಕೇಶನ್‌ಗಳು. ಇದಕ್ಕೆ ಹೊಸದಾಗಿ Line    ಸೇರ್ಪಡೆಯಾಗಿದೆ.  ಎಲ್ಲ ರೀತಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಕಾರ್ಯಾಚರಿಸುವಂತೆ ಈ ಅಪ್ಲಿಕೇಶನ್‌ಗಳನ್ನು ರೂಪಿಸಲಾಗಿದೆ. ಹೀಗಾಗಿ, ನಿಮ್ಮ ಸ್ನೇಹಿತರ ಬಳಿಯೂ ಈ ಆಪ್ ಇದ್ದರೆ ಉಚಿತವಾಗಿ ಚಾಟಿಂಗ್ ಮಾಡಬಹುದು, ಧ್ವನಿ ಅಥವಾ ವೀಡಿಯೋ ರೆಕಾರ್ಡ್ ಮಾಡಿ ಆಡಿಯೋ/ವೀಡಿಯೋ/ಚಿತ್ರ ಸಂದೇಶಗಳನ್ನೂ ಉಚಿತವಾಗಿ ಕಳುಹಿಸಬಹುದು. ಉಚಿತವಾಗಿಯೇ ಆಡಿಯೋ ಸಂದೇಶ, ಚಿತ್ರ ಅಥವಾ ಟೆಕ್ಸ್ಟ್ ಮೇಸೇಜ್ ಹೀಗೆ ಕಳುಹಿಸಬಹುದು.
ನೀವು ಹಳೇ ಕಾಲದ ಮೊಬೈಲ್‌ಗಳಿಂದ ಇಂದನ ಜನರೇಷನ್‌ಗೆ ಹೊಂದಿಕೊಳ್ಳುತ್ತಿರುವ ಸ್ಮಾರ್ಟ್‌ಫೋನ್‌ಗಳಿಗೆ ಮೊದಲು ಬದಲಾಗಬೇಕು. ನಿಮ್ಮ ಮೊಬೈಲ್ ಮತ್ತು ಸ್ನೇಹಿತರ ಮೊಬೈಲ್‌ಗೆ ಇಂಟರ್ನೆಟ್ ಸಂಪರ್ಕ ಇರಬೇಕಾಗುತ್ತದೆ. ಯಾವುದಾದರೂ ಆಪ್ (ಹೆಚ್ಚು ಪ್ರಸಿದ್ಧವಾಗಿರುವುದು WhatsApp,, ಮತ್ತು ಈಗೀಗ Line ಜನಪ್ರಿಯತೆ ಪಡೆದುಕೊಳ್ಳುತ್ತಿರುವುದು ಐiಟಿe) ಡೌನ್‌ಲೋಡ್ ಮಾಡಿಕೊಳ್ಳಿ. ನಿಮ್ಮ ಸ್ನೇಹಿತವರ್ಗವೂ ಅದೇ ಆಪ್ ಬಳಸಬೇಕಾಗುತ್ತದೆ. ಒಂದು ಸಲ ರಿಜಿಸ್ಟರ್ ಮಾಡಿಕೊಳ್ಳಬೇಕಾಗುತ್ತದೆ.
ರಿಜಿಸ್ಟರ್ ಆದ ಬಳಿಕ, ಆ ಅಪ್ಲಿಕೇಶನ್ ನಿಮ್ಮ ಮೊಬೈಲ್ ಫೋನ್‌ನಲ್ಲಿರುವ ಸ್ನೇಹಿತರ ಸಂಖ್ಯೆಯನ್ನೆಲ್ಲಾ ಹುಡುಕಿ, ಯಾರೆಲ್ಲಾ ಈ ಅಪ್ಲಿಕೇಶನ್ ಬಳಸುತ್ತಿದ್ದಾರೆ ಎಂದು ನಿಮಗೆ ತೋರಿಸುತ್ತದೆ. ಅವರೊಂದಿಗೆ ಹಾಯ್ ಹೇಳುವ ಮೂಲಕ ಮಾತುಕತೆ ಆರಂಭಿಸಬಹುದು, ಚಿತ್ರಗಳನ್ನು ಹಂಚಿಕೊಳ್ಳಬಹುದು. ನಿಮ್ಮದೇ ಒಂದು ಗ್ರೂಪ್ ಕಟ್ಟಿಕೊಂಡು, ಚಾಟಿಂಗ್ ನಡೆಸಬಹುದು. ಇಂತಹಾ ಆಪ್‌ಗಳಲ್ಲಿ ಸ್ಮೆಲಿಗಳು ಅಥವಾ ಎಮೋಟಿಕಾನ್‌ಗಳು ಎಂದು ಕರೆಯಲಾಗುವ ವಿಭಿನ್ನ ಭಾವನೆಗಳನ್ನು ತೋರ್ಪಡಿಸುವ ಮುಖಭಾವಗಳ ಚಿತ್ರಗಳು ಉಚಿತವಾಗಿ ಲಭ್ಯವಾಗಿದ್ದು, ನಿಮ್ಮ ಸಂಭಾಷಣೆಗಳಿಗೆ ಭಾವನೆಗಳನ್ನು ಸೇರಿಸಬಹುದು!
Line  ಅಪ್ಲಿಕೇಶನ್‌ನ ಒಂದು ಅನುಕೂಲವೆಂದರೆ, ೩ಜಿ ಸಂಪರ್ಕದ ಮೂಲಕ ಉಚಿತವಾಗಿ ಕರೆಯನ್ನೂ ಮಾಡಬಹುದು. ಇತ್ತೀಚೆಗಷ್ಟೇ ಭಾರತಕ್ಕೆ ಕಾಲಿರಿಸಿರುವ ಜಪಾನ್‌ನ ಈ ಕಂಪನಿ, ಮೂರೇ ತಿಂಗಳಲ್ಲಿ ೧ ಕೋಟಿ ಬಳಕೆದಾರರನ್ನು ಹೊಂದಿದೆ ಅಂತ ಹೇಳಿಕೊಂಡಿದೆ. ಹೀಗಾಗಿ ಇದನ್ನೂ ಟ್ರೈ ಮಾಡಬಹುದು.

Thursday, 28 November 2013

ಇದು ವಾಸ್ತವ

  • ಒಬ್ಬ ವ್ಯಕ್ತಿ ನಿಮ್ಮ ಬಳಿ ಬಂದು ಬೆರೆಯವರ ಬಗ್ಗೆ ಮಾತನಾಡುವಾಗ ಸೂಕ್ಷ್ಮವಾಗಿ ಅವರನ್ನು ಗಮನಿಸಿ.   ನಿಮ್ಮ ಬಗ್ಗೆ ಅವರು ಬೆರೆಯವರೊಂದಿಗೆ ಏನನ್ನು ಮಾತನಾಡಬಹುದು, ಹೇಗೆ ಮಾತನಾಡಬಹುದು ಎಂದು ಮನವರಿಕೆಯಾಗುತ್ತೆ
  • ಭಾರತದಲ್ಲಷ್ಟೇ ಅಲ್ಲ, ಪ್ರಪಂಚದ ಶೇ.72 ರಷ್ಟು ಜನ 'ಕರ್ಮ'ವನ್ನು ನಂಬುತ್ತಾರಂತೆ. ಕರ್ಮ ಎಂದರೆ ನಾವು ಮಾಡಿದ ಪಾಪ ಕೃತ್ಯಗಳ ಪರಿಣಾಮ ಅಥವಾ ನಮ್ಮ ಕೆಲಸಗಳಿಗೆ ಸಿಗುವ ಪ್ರತಿಫಲ. 
  • ನಿಮ್ಮ ಹೆಬ್ಬೆರಳು ನಿಮ್ಮ ಮೂಗಿನಷ್ಟೇ ಉದ್ದವಾಗಿರುತ್ತೆ. ಇದರಲ್ಲಿ ಅನುಮಾನವಿದ್ದರೆ ಪರೀಕ್ಷಿಸಿಕೊಳ್ಳಿ.
  • ಒಬ್ಬ ಹುಡುಗಿ ಹುಡುಗನಿಗಾಗಿ ಅಳುವುದು ಮಾಮೂಲಿ. ಆದರೆ, ಹುಡುಗಿಗಾಗಿ ಒಬ್ಬ ಹುಡುಗ ಅತ್ತರೆ...?; ನಿಮಗೆ ಗೊತೆ, ಅವನಿಗಿಂತ ಅವಳನ್ನು ಪ್ರೀತಿಸುವವರು ಮತ್ತೊಬ್ಬರಿರುವುದಿಲ್ಲ.
  • ಬೆಳಗಿನ ಒಂದು ಕೆಟ್ಟ ಯೋಚನೆ ದಿನದ ಸಂತೋಷವನ್ನೇ ಹಾಳುಮಾಡಿಬಿಡುತ್ತಂತೆ. ಏಳುವಾಗಲೇ ಖುಷಿ ಹಾಳುಮಾಡಿಕೊಳ್ಳಬೇಡಿ. 
  • ಶೇ.80 ರಷ್ಟು ಟೀನೇಜರ‍್ಸ್ ಬೇಳಗಾಗೆದ್ದು ಹಲ್ಲುಜ್ಜುವ ಮುನ್ನ ತಮ್ಮ ಮೊಬೈಲ್‌ಗಳನ್ನು ಚೆಕ್ ಮಾಡುತ್ತಾರಂತೆ.
  • ಗಾಯದ ಮೇಲೆ ಸಕ್ಕರೆಯನ್ನು ಹಾಕಿಕೊಳ್ಳುವುದರಿಂದ ಗಾಯದಿಂದಾಗುವ ನೋವಿನ ಪ್ರಮಾಣವನ್ನು ಕಡಿಮೆ ಮಾಡಬಹುದಂತೆ ಮತ್ತು ಗಾಯ ವಾಸಿಯಾಗುವಲ್ಲಿ ಸಕ್ಕರೆ ಸಹಕಾರಿಯಾಗುತ್ತಂತೆ.  
  • ಶೇ.80 ರಷ್ಟು ಮಹಿಳೆಯರು ಕೇಳುವ ಪ್ರಶ್ನೆಗಳಿಗೆ ಮೊದಲೇ ಉತ್ತರ ತಿಳಿದಿರುತ್ತಂತೆ.  ಆದ್ದರಿಂದ ಮಹಿಳೆರೊಂದಿಗಿದ್ದಾಗ ನಿಜ ಹೇಳುವುದ ಗಂಡಸರಿಗೆ ಒಳಿತಂತೆ. ಇದರಿಂದ ಮುಂದಾಗುವ ಅವಾಂತರಗಳಿಗೆ ಬ್ರೇಕ್ ಹಾಕಬಹುದಂತೆ. 
  • ಖಿನ್ನತೆಗೊಳಗಾದವರು ಅಥವಾ ದುಖ:ದಲ್ಲಿರುವವರು  ಖುಷಿಯಲ್ಲಿರುವವರಿಗಿಂತ ಹೆಚ್ಚು ಹಣ ವ್ಯಯಿಸುತ್ತಾರಂತೆ.
  • ಒಬ್ಬರೊಂದಿಗೆ ನೀವು ನಿಮ್ಮ ಭಾವನೆಗಳನ್ನು ಆಳವಾಗಿ ಬಿಚ್ಚಿಕೊಂಡಷ್ಟು ನಿಮ್ಮೆದುರಿರುವವರಿಗೆ ನಿಮ್ಮನ್ನು ಹರ್ಟ್ ಮಾಡಲು ಹೆಚ್ಚು ಹೆಚ್ಚು ದಾರಿಗಳನ್ನು ತೋರಿಸಿಕೊಟ್ಟಂತಾಗುತ್ತದೆ.
  • ಶೇ.99.99 ರಷ್ಟು ಜನ ಪಾಸ್‌ವರ್ಡ್ ಟೈಪ್ ಮಾಡುವಾಗ ಒಂದು ಅಕ್ಷರ ಅಥವಾ ಸಂಖ್ಯೆ ತಪ್ಪಾದರೂ ಪೂರ್ಣ ಪಾಸ್‌ವರ್ಡ್‌ನ್ನೇ ಅಳಿಸಿ ಮತ್ತೊಮ್ಮೆ ಟೈಪ್ ಮಾಡುತ್ತಾರಂತೆ. 
  • ನೀವು ಯಾರಿಂದಾರೂ ಏನನ್ನಾರೂ ಕೇಳಲು ನಿರೀಕ್ಷಿಸುತ್ತಿದ್ದರೆ ಯಾರಾದರೂ ಸತ್ಯದ ಬದಲು ಸುಳ್ಳು ಹೇಳಿದರೂ ನೀವು ನಂಬುತ್ತೀರಿ.
  • ಸಾಮಾನ್ಯವಾಗಿ ಎಲ್ಲರಿಗೂ ಸಾವು ಎಂಬುದು  ಎರಡನೇ ದೊಡ್ಡ ಭಯವಾಗಿ ಕಾಡುತ್ತಂತೆ. ಎಲ್ಲರನ್ನೂ ಕಾಡುವ ಮೊದಲನೆಯ ಭಯ ಸೋಲಿನ ಭಯವಂತೆ.
  • ನಮ್ಮ ಆಸೆ, ಆಕಾಂಕ್ಷೆ ಬಯಕೆಗಳು, ಬೇಡಿಕೆಗಳು ಪ್ರತಿ ವರ್ಷ ಬದಲಾಗುತ್ತಿರುತ್ತವೆಯಂತೆ. ಇದೇ ಕಾರಣ ಕೆಲವರನ್ನು ನಮ್ಮಿಂದ ದೂರವಾಗಿಸುತ್ತಂತೆ. 
  • ಅಮೇರಿಕಾದಲ್ಲಿ ಪ್ರತಿ ದಿನ 200 ಮಿಲಿಯನ್ ಜೋಡಿಗಳು ಪ್ರೀತಿಯಲ್ಲಿ ಬೀಳುತ್ತಾರಂತೆ. ಅಲ್ಲಿ ನಡೆಯುವ ಪ್ರತಿ ಎರಡು ಮದುವೆಗಳಲ್ಲಿ ಒಂದು ಮದುವೆ ವಿಚ್ಚೇದನದಲ್ಲಿ ಕೊನೆಗೊಳ್ಳುತ್ತೆ. 
  • ಹೊಸ ಪೆನ್‌ಗಳನ್ನು ಖರೀದಿಸಿದ ನಂತರ ಶೇ.97 ರಷ್ಟು ಜನ ಮೊದಲು ತಮ್ಮ ಹೆಸರನ್ನು ಬರೆದುಕೊಳ್ಳುತ್ತಾರಂತೆ. 
  • ಪ್ರತಿಯೊಬ್ಬರೂ ತಮ್ಮ ಜೀವಿತಾವಧಿಯ 3 ವರ್ಷಗಳನ್ನು ಟಾಯ್ಲೆಟ್‌ನಲ್ಲಿಯೇ ಕಳೆಯುತ್ತಾರಂತೆ.  
  • ಕುತ್ತಿಗೆಯ ಭಾಗದಲ್ಲಿ ಕಿಸ್ ಮಾಡುವ ಹುಡುಗರನ್ನು ಹುಡುಗಿಯರು ಹೆಚ್ಚು ಇಷ್ಟ ಪಡುತ್ತಾರಂತೆ. 
  • ವಯಸ್ಸಿಗೆ ಬಂದ ಮಹಿಳೆ ತನ್ನ ಜೀವಿತಾವಧಿಯ ಒಂದು ವರ್ಷವನ್ನು ಯಾವ ಡ್ರೆಸ್ ಹಾಕಿಕೊಳ್ಳಬೇಕು ಎಂದು ಯೋಚಿಸುವುದರಲ್ಲೇ ಕಳೆಯುತ್ತಾಳಂತೆ.
  • ಶೇ.83 ರಷ್ಟು ಮಹಿಳೆಯರು ತಮ್ಮ ದೇಹದ ತೂಕದ ಬಗ್ಗೆ ಸುಳ್ಳು ಹೇಳುತ್ತಾರಂತೆ.
  • ಗಂಡಸರು ಇಲ್ಲದ ವೇಳೆಯಲ್ಲಿ ಹೆಂಗಸರು ಹೆಚ್ಚು ತಿನ್ನಲು  ಬಯಸುತ್ತಾರಂತೆ.
  • ದಿನಕ್ಕೆ 3 ರಿಂದ 5 ಮುತ್ತುಗಳು(Kisses) ನಿಮ್ಮ ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತಂತೆ.
  • ಮಗುವಿಗೆ ಜನ್ಮ ನೀಡುತ್ತಿರುವ ತಾಯಿ ಅನುಭವಿಸುವ ನೋವು ಜೀವಂತ ಸುಟ್ಟುಕೊಳ್ಳುವ ನೋವಿಗಿಂತ ಹೆಚ್ಚಾಗಿರುತ್ತಂತೆ.     
  • ಶೇ.79 ರಷ್ಟು ಜನ ಸ್ನಾನ ಮಾಡುವ ಸಮಯದಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುತ್ತಾರಂತೆ.
  • ಪುರುಷರ ಮೆದುಳು ಮಹಿಳೆಯರ ಮೆದುಳಿಗಿಂತ ಶೇ.10 ರಷ್ಟು ಗಾತ್ರದಲ್ಲಿ ದೊಡ್ಡದಾಗಿದ್ದರೂ, ,ಮಹಿಳೆಯರ ಮೆದುಳು ಪುರುಷರ ಮೆದುಳಿಗಿಂತ ವೇಗವಾಗಿ  ಕೆಲಸ ಮಾಡುತ್ತದೆ. 
  • ಭಾರತದಲ್ಲಿ ಟಾಯ್ಲೆಟ್(ಶೌಚಾಲಯ)ಗಳಿಗಿಂತ ಮೊಬೈಲ್‌ಗಳೇ ಹೆಚ್ಚಾಗಿವೆಯೆಂತೆ.


     


Monday, 25 November 2013

ನಿರುದ್ಯೋಗಿಗಳಿಗೇಕಿಲ್ಲ ’ಉದ್ಯೋಗ ಭಾಗ್ಯ’...?


ಒಂದು ದೇಶದ ಭವಿಷ್ಯ ಆ ದೇಶದ ಯುವ ಜನತೆಯನ್ನು ನೇರವಾಗಿ ಅವಲಂಬಿಸಿರುತ್ತೆ ಎಂದು ಹೇಳುತ್ತಾರೆ. ಆದರೆ, ಇಂದು ಭಾರತದಲ್ಲಿ ನಿರುದ್ಯೋಗ ಹೆಚ್ಚಾಗುತ್ತಿರುವುದರಿಂದ ಯುವಕರ ಕೈಗಳಿಗೆ ಕೆಲಸವಿಲ್ಲದಂತಾಗುತ್ತಿದೆ. ಸರ್ಕಾರ ರೂಪಿಸುತ್ತಿರುವ ದಿನಕ್ಕೊಂದು ಯೋಜನೆಗಳು ಉದ್ಯೋಗ ಸೃಷ್ಟಿಸುವ ಇರಾದೆಯನ್ನೇ ಇಟ್ಟುಕೊಳ್ಳುತ್ತಿಲ್ಲ.

ಭಾರತದಲ್ಲಿನ ಲಕ್ಷಾಂತರ ನಿರುದ್ಯೋಗಿಗಳ ಕೈಗಳು ಕೆಲಸಕ್ಕಾಗಿ ಹಾತೊರೆಯುತ್ತಿವೆ. ಆದರೆ, ಆ ಕೈಗಳಿಗೆ ಸೂಕ್ತವಾದ ಕೆಲಸ ಸಿಗುತ್ತಿಲ್ಲ. ಸಿಕ್ಕ ಕೆಲಸದಲ್ಲಿ ಮೂಲಭೂತ ಅವಶ್ಯಕತೆಗಳನ್ನೂ  ಪೂರೈಸಿಕೊಳ್ಳಲಾಗುತ್ತಿಲ್ಲ. ಇದು ಇನ್ನೊಂದೆಡೆ ಬಡತನಕ್ಕೆ ದಾರಿಮಾಡಿಕೊಡುತ್ತಿದೆ.   ಉದ್ಯೋಗ ಸೃಷ್ಟಿಸುವಲ್ಲಿ ರಾಜ್ಯ ಸರ್ಕಾರವಾಗಲಿ, ಕೇಂದ್ರ ಸರ್ಕಾರವಾಗಲೀ ಸೂಕ್ತ ಯೋಜನೆಗಳನ್ನು ರೂಪಿಸದೆ ತಮ್ಮ ಜವಾಬ್ದಾರಿಯನ್ನು ಮರೆಯುತ್ತಿವೆ.  ಉದ್ಯೋಗ ಸೃಷ್ಟಿಸದಿರುವ ಯಾವುದೇ ಯೋಜನೆ ಅಭಿವೃದ್ದಿಶೀಲ ಭಾರತಕ್ಕೆ  ಕೊಡಲಿ ಏಟು ನೀಡದೇ ಇರದು.

ವೈಜ್ಞಾನಿಕ ಯೋಜನೆಗಳನ್ನು ಜಾರಿಗೊಳಿಸುವುದರೊಂದಿಗೆ ಆ ಯೋಜನೆಗಳು ಉದ್ಯೋಗ ಸೃಷ್ಟಿಸುವ ಆಗರಗಳಾಗುವಂತೆ ಯೋಜನೆಗಳ ರೂಪುರೇಷೆ ತಯಾರಿಸುವುದು ಅಭಿವೃದ್ದಿಶೀಲ ರಾಷ್ಟ್ರ ಭಾರತಕ್ಕೆ ಅನಿವಾರ್ಯವೂ ಹೌದು. ಸಾಮಾನ್ಯರ ಬದುಕಿಗೆ ಒಂದು ಹೊತ್ತಿನ ಊಟ ನೀಡುವ ಯೋಜನೆಗಳನ್ನು ರೂಪಿಸುವ ಜಾಗದಲ್ಲಿ ಸಣ್ಣದೊಂದು ಉದ್ಯೋಗ ಕಲ್ಪಿಸಬಲ್ಲ ಯೋಜನೆಗಳತ್ತ ಗಮನ ಹರಿಸಿದರೆ  ಆ ಸಣ್ಣದೊಂದು ಉದ್ಯೋಗ ಮೂರು ಹೊತ್ತಿನ ಹಸಿವನ್ನು ನೀಗಿಸಬಲ್ಲದು.

ನಮ್ಮ ದೇಶದಲ್ಲಿ ಮಾನವ ಸಂಪನ್ಮೂಲ ಹೇರಳವಾಗಿದೆ. ಅದನ್ನು ಸೂಕ್ತವಾಗಿ ಬಳಸಿಕೊಳ್ಳುವ ಯೋಜನೆಗಳು ಬೇಕಾಗಿವೆ ಅಷ್ಟೆ.  ಒಂದೆಡೆ ಬಡತನವನ್ನು ನೀಗಿಸಿ ಇನ್ನೊಂದೆಡೆ ಉದ್ಯೋಗವನ್ನು ಸೃಷ್ಟಿಸುವಂತಹ ಮುಂದಾಲೋಚನೆಗಳುಳ್ಳ ಯೋಜನೆಗಳು ಭಾರತದ ಸದ್ಯದ ಪರಿಸ್ಥಿತಿಗೆ ಅನಿವಾರ್ಯವಾಗಿದೆ.

ಇತ್ತೀಚೆಗೆ ರಾಜ್ಯದಲ್ಲಿ ಆಡಳಿತಕ್ಕೆ ಬಂದ ರಾಜ್ಯ ಸರ್ಕಾರ ಅನ್ನಭಾಗ್ಯ?, ಶಾಧಿ ಭಾಗ್ಯ? ದಂತಹ ಯೋಜನೆಗಳನ್ನು ರೂಪಿಸುತ್ತಿದೆ. ಕೋಟಿ ಕೋಟಿ ಹಣವನ್ನು ಬೇಡುವ ಈ ಯೋಜನೆಗಳು ಸರ್ಕಾರಕ್ಕೆ ಮತ್ತಷ್ಟು ಹೊರೆ ಯಾಗುವುದರೊಂದಿಗೆ ಆದಾಯದ ಮೂಲಕ್ಕೇ ಮುಳ್ಳಾಗುವ ಸಾಧ್ಯತೆಗಳೇ ಹೆಚ್ಚು.

ಇಂದು ಭಾರತದ ಅಭಿವೃದ್ಧಿಗೆ ಬೇಕಾಗಿರುವುದು, ಒಂದು ಹೊತ್ತಿನ ಊಟ ಅಥವಾ ಸರ್ಕಾರ ನೀಡುವ ಮದುವೆ ಹಣ ಅಲ್ಲ. ತಮ್ಮ ಬದುಕನ್ನು ತಾವೇ ಸ್ವತಂತ್ರ್ಯವಾಗಿ ರೂಪಿಸಿಕೊಡಬಲ್ಲಂತಹ ಉದ್ಯೋಗಾವಕಾಶಗಳು. ಈ ನಿಟ್ಟಿನಲ್ಲಿ ಸರ್ಕಾರ ಆಲೋಚಿಸಿದಲ್ಲಿ ಆರ್ಥಿಕ ಮಟ್ಟವನ್ನು ಸುಧಾರಿಸಬಹುದೇ ಹೊರತು ಅವೈಜ್ಞಾನಿಕ ಯೋಜನೆಗಳನ್ನು ರೂಪಿಸಿ  ಇರುವ ಉದ್ಯೋಗಾವಕಾಶಗಳನ್ನು ಕಿತ್ತುಕೊಳ್ಳುವುದರಿಂದ ಅಲ್ಲ.

ಭಾರತ ಕೃಷಿ ಆಧಾರಿತ ದೇಶ. ಕೃಷಿ ದೇಶದ ಆಧಾರ ಸ್ತಂಭ. ಅಷ್ಟ್ಟೇ ಅಲ್ಲ ಹೆಚ್ಚು ಜನರಿಗೆ ಉದ್ಯೋಗಾವಕಾಶಗಳನ್ನೂ ಸೃಷ್ಟಿಸುವ ಏಕೈಕ ಕ್ಷೇತ್ರ. ಆದರೆ, ಕೃಷಿಗೆ ಹೆಚ್ಚಿನ ಆದ್ಯತೆ ಇಲ್ಲದಿರುವುದರಿಂದ ಹಳ್ಳಿಯ ಯುವ ಜನಾಂಗ ಉದ್ಯೋಗ ಅರಸಿ ನಗರಗಳತ್ತ ವಲಸೆ ಬರುತ್ತಿದ್ದಾರೆ. ಕೃಷಿಗೆ ಹೆಚ್ಚಿನ ಆದ್ಯತೆ ನೀಡಿ, ಇತರೆ ಕ್ಷೇತ್ರಗಳಂತೆ ಕೃಷಿಯನ್ನೂ ಒಂದು ಉದ್ಯಮದ ರೂಪದಲ್ಲಿ ಬೆಳೆಸಲು ಸರ್ಕಾರಗಳ ಸೂಕ್ತ ಯೋಜನೆಗಳು ಅನಿವಾರ್ಯ. ಈ ಮೂಲಕ ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯವನ್ನು ಕಲ್ಪಿಸುವುದರಿಂದ ಸರ್ಕಾರ ನೀಡುವ ಅಕ್ಕಿ ಅಥವಾ ಮದುವೆಯ ಹಣವನ್ನು ಅವಲಂಬಿಸದೇ ಸ್ವಾವಲಂಬಿಗಳನ್ನಾಗಿ ಮಾಡಬಹುದಾಗಿದೆ.

ಕೊನೆಯದಾಗಿ ಆಡಳಿತಾರೂಢ ಸರ್ಕಾರದಲ್ಲಿ  ಒಂದು ಮನವಿ. ಅನ್ನಭಾಗ್ಯ?, ಶಾದಿಭಾಗ್ಯ? ಯೋಜನೆಗಳಂತೆ ಉದ್ಯೋಗ ಭಾಗ್ಯ?ವನ್ನೂ ಕಲ್ಪಿಸುವ ಯೋಜನೆಗಳತ್ತ ಹೆಚ್ಚು ಆಲೋಚನೆಗಳನ್ನು ಮಾಡಿ. ಹಸಿದವರಿಗೆ ಅರೆಹೊತ್ತಿನ ಊಟದ ಬದಲು. ಸಣ್ಣದೊಂದು ಉದ್ಯೋಗಾವಕಾಶವನ್ನು ಕಲ್ಪಿಸಿ. ಜನರನ್ನು ಸ್ವಾವಲಂಬಿಗಳಾಗಿ ಬದುಕಲು ಅವಕಾಶ ಮಾಡಿಕೊಡಿ.              - - ಶ್ರೀಕಾಂತ್

Tuesday, 19 November 2013

ಭರವಸೆಗಳ ಬದುಕಿಗೆ ಬೆಳಕಾಗಲಿ ದೀಪಾವಳಿ



ದಾಪುಗಾಲಿಟ್ಟು ದೀಪಗಳ ಬೆಳಕನ್ನು ಹೊತ್ತು ಮತ್ತೆ ಬಂದಿದೆ ದೀಪಾವಳಿ. ಸಂಭ್ರಮ ತುಂಬಿಕೊಂಡು ಮನೆಯ ಅಂಗಳದಲ್ಲಿ ಜೋಡಿಸಿ ಸಾಲಾಗಿ ಇಟ್ಟ ದೀಪಗಳು ಇನ್ನೇನು ಮೆರವಣಿಗೆ ಹೊರಡುತ್ತವೆ. ಆ ವೈಭವವನ್ನು ಕಣ್ತುಂಬಿಕೊಳ್ಳುತ್ತಾ ಕುಳಿತರೆ ಮನದೊಳಗೆ ಆವರಿಸಿದ್ದ ಕತ್ತಲೆಯನ್ನು ಬೆಳಕು ಬಂದು ಹೊಡೆದೊಡಿಸಿದಂತಹ ಅನುಭವ.   ಕತ್ತಲೆಯಿಂದ ಬೆಳಕಿನೆಡೆಗೆ ಎನ್ನುವ ಮಾತಿದೆ. ಅದರಂತೆಯೇ ದೀಪ ಹಚ್ಚಿ ಬರಿಯ ಮನೆಯ ಒಳ-ಹೊರಗನ್ನು ಬೆಳಗಿಕೊಳ್ಳದೇ, ನಮ್ಮೊಳಗೂ ಬೆಳಗಿಕೊಳ್ಳುತ್ತೇವೆ.  ಅಧ್ಯಾತ್ಮದಲ್ಲಿ ನಮ್ಮೊಳಗೆ ಬೆಳಗಿಕೊಳ್ಳುವುದೆಂದರೆ ಆತ್ಮಾವಲೋಕನಕ್ಕೆ ಅವಕಾಶ ಕಲ್ಪಿಸಿಕೊಳ್ಳುವುದು. ಕಷ್ಟದ ಕತ್ತಲನ್ನು ಧೈರ್ಯದ ಜ್ಯೋತಿಯಿಂದ  ದೂರವಾಗಿಸಿಕೊಂಡು. ಹೊಸ ಬಾಳಿಗೆ ಹೊಸದೊಂದು ಮುನ್ನುಡಿ ಬರೆಯುವ ಪ್ರಯತ್ನವೇ ಈ ದೀಪಾವಳಿ ತಾತ್ಪರ್ಯ.   ಜೀವನದಲ್ಲಿ ಏಳುಬೀಳುಗಳು ಸಹಜ. ಹಗಲು-ರಾತ್ರಿಗಳ ಹಾಗೆ.  ಒಮ್ಮೆ ರಾತ್ರಿಯಾದರೆ ನಿರಾಸೆಗೊಳ್ಳದೆ ಬೆಳಕನ್ನು ಹೊತ್ತು ತರುವ ಸೂರ್ಯನಿಗೆ ಎದುರು ನೋಡುವ ಪ್ರಯತ್ನದಲ್ಲೇ ಜೀವನದ ಸಂತೋಷದ ಗುಟ್ಟು ಅಡಗಿರುತ್ತೆ. ಅದಕ್ಕೇ ಇರಬೇಕು, ದೀಪಾವಳಿಯೊಂದಿಗೆ ದೀಪಗಳನ್ನು ಗಂಟು ಹಾಕಿರುವುದು. ದೀಪಗಳ ಕಾಂತಿಯಲ್ಲೇ ಬದುಕಿನ ದೀಪದ ಉತ್ಸಾಹದ ಬತ್ತಿಗೆ ಸಂತೋಷದ ಕಾಂತಿ ಹಚ್ಚಿಕೊಂಡು ಕಂಗೊಳಿಸುವುದು. ದೀಪಾವಳಿ ಬರಿ ಉಂಡು ಕಳೆಯುವ ಹಬ್ಬವಲ್ಲ. ಮತ್ತೊಂದು ದೀಪಾವಳಿ ಬರುವವರೆಗೂ ಸಂಭ್ರಮವನ್ನು  ಮನಸ್ಸಿನ ಉಗ್ರಾಣದೊಳಗೆ ತುಂಬಿಕೊಳ್ಳುವ ಕ್ಷಣ. ಮನೆಯಲ್ಲಿ ಎಲ್ಲರೂ ಇದ್ದರೆ ಭವ್ಯ ಬೆಳಕು ಹೊತ್ತಿಕೊಂಡಂತೆಯೇ. ಹಾಗಾಗಿಯೇ ಈ ಹಬ್ಬಕ್ಕೆಂದರೆ ಎಲ್ಲರೂ ಮನೆಗೆ ಬಂದು ಸೇರುತ್ತಾರೆ. ನಮ್ಮಲ್ಲಿಯ ಕುಟುಂಬ ಪರಿಕಲ್ಪನೆಯಲ್ಲಿ ಹೀಗೆ ಎಲ್ಲರೂ ಕೂಡಿ-ಆಡಿ ನಲಿದರೆ ಸಂತೋಷದ ಹೊಳೆಯೇ ಹರಿದುಬಿಡುತ್ತದೆ. ಆ ಬೆಳಕಿನಿಂದಲೇ ಭರವಸೆಗಳು ಹುಟ್ಟುತ್ತವೆ. ಆ ಭರವಸೆಗಳೇ ಬದುಕಿಗೆ ಆಧಾರ ಸ್ಥಂಭಳಿದ್ದಂತೆ.

ಈ ಬಾರಿಯ ದೀಪಾವಳಿಯಿಂದ ಬಾಳಿನಲ್ಲ್ಲಿ ತುಂಬಿಕೊಂಡ ಬೆಳಕು ಮುಂದಿನ ದೀಪಾಳಿಯವರೆಗೂ ನಿಮ್ಮ ಬದುಕಿನ ಹಾದಿಗೆ ದಾರಿ ತೋರಿಸಲಿ. ಕಷ್ಟಗಳು ದೇವತೆಗಳನ್ನೇ ಬಿಟ್ಟಿಲ್ಲ. ಇಂದಿಗೂ ಜಗತ್ತನ್ನೇ ಬೆಳಗುವ ಸೂರ್ಯನಿಗೂ ಕೂಡ ಗ್ರಹಣದ ಹೆಸರಲ್ಲಿ ಅಂಧಕಾರ ಕವಿದುಕೊಳ್ಳುತ್ತದೆ. ಆದರೆ ಅದು ಕ್ಷಣಮಾತ್ರ. ತದನಂತರ ಸೂರ್ಯ ಮತ್ತೆ ತಾನು ಪ್ರಕಾಶಿಸಿ ಜಗತ್ತನ್ನು ಬೆಳಗುತ್ತಾನೆ.

ಕಷ್ಟಗಳು ಹುಟ್ಟುವಾಗ ಅದರ ಜೊತೆ ಪರಿಹಾರವೂ ಜನ್ಮತಾಳಿರುತ್ತೆ. ಆ ಪರಿಹಾರವನ್ನೂ ಹುಡುಕಿಕೊಳ್ಳುವ ಸಮಾಧಾನದ ನಡವಳಿಕೆ ನಮ್ಮಲ್ಲಿರಬೇಕು ಅಷ್ಟೇ. ಕಷ್ಟ-ಸುಖಗಳು ಒಂದೇ ನಾಣ್ಯದ ಎರಡು ಮುಖಗಳು. ಕಷ್ಟದ ಹಿಂದೆಯೇ ಸುಖ ಅಡಗಿರುತ್ತದೆ. ನಾಣ್ಯದ ಮುಖ ಬದಲಾಗುವವರೆಗೂ ಕಾಯುವವರಿಗೆ ಮಾತ್ರ ಸುಖದ ದರ್ಶನವಾಗೋದು. ಆ ತಾಳ್ಮೆ, ನೆಮ್ಮದಿ, ಆರೋಗ್ಯ, ಚೈತನ್ಯ  ಐಶ್ವರ್ಯಗಳ ಪ್ರತೀಕವಾಗಲಿ ಈ ದೀಪಾವಳಿ. ಮನದಲ್ಲಿ ಜ್ಞಾನದ ಜ್ಯೋತಿಯನ್ನು ಬೆಳಗಿಸಲು ಪ್ರತಿ ದಿನವೂ ಪ್ರಯತ್ನಿಸಿ. ಈ ದೀಪಾವಳಿ ತಂದಿರುವ ದಿವ್ಯ ದೀಪದಲ್ಲಿ ನಮ್ಮ ಮನೆ-ಮನಗಳ ದೀಪಗಳನ್ನು ಹಚ್ಚಿಕೊಳ್ಳಬೇಕು. ಆ ಬೆಳಕಿನಲ್ಲಿ ನಾವು ನಮ್ಮ ಬದುಕಿನ ಭರವಸೆಗಳನ್ನು ಬೆಳೆಸಿಕೊಳ್ಳಬೇಕು.  ಮಧುರ ಬಾಂಧವ್ಯದ ಎಣ್ಣೆ ಸುರಿದು ನಂದಾದೀಪವಾಗುವಂತೆ ಮಾಡಿಕೊಳ್ಳಬೇಕು. ಅಂಥ ಕ್ಷಣ ಎದುರಾಗಿದೆ. ಬನ್ನಿ ಎಲ್ಲರೂ ದೀಪ ಹಚ್ಚೋಣ, ಹಚ್ಚಿಕೊಳ್ಳೋಣ, ಬೆಳಗೋಣ, ನಮ್ಮೊಳಗೂ ಬೆಳಗಿಕೊಳ್ಳೋಣ. ಬದುಕಿಗೆ ಭರವಸೆಗಳನ್ನು ಬೆಳೆಸಿಕೊಳ್ಳೋಣ. ಬದುಕೋಣ.

ಸಂಬಂಧಗಳ ಮೇಲೊಂದು ಸಮೀಕ್ಷೆ




ಓದಲು ಮುಜುಗರವೆನಿಸಿದರೂ ಓದಲೇಬೇಕಾದ ಕೆಲವೊಂದು ಬೆತ್ತಲಾದ ಸತ್ಯಗಳಿವು. ನಂಬಿದರೆ ನಂಬಿ ಬಿಟ್ಟರೆ ಬಿಡಿ. ಒಂದು ದಿನದಲ್ಲಿ ಸಾವಿರಾರು ಸಮೀಕ್ಷೆಗಳು ನಡೆಯುತ್ತವೆ. ಪ್ರತಿಯೊಂದು ಸಮೀಕ್ಷೆಯೂ ಒಂದೊಂದು ಅಚ್ಚರಿಯನ್ನು ಹೊರಹಾಕುತ್ತವೆ.. ಹಾಗೆಯೇ ಇಲ್ಲಿ ಕೆಲವು ಪತ್ರಿಕೆಗಳು, ಸಂಸ್ಥೆಗಳು, ಎನ್‌ಜಿಓಗಳು ನಡೆಸಿದ ಆಯ್ದ ಕುತೂಹಲ ಕೆರಳಿಸುವ ಕೆಲವು ಸಮೀಕ್ಷೆಗಳು ನಿಮ್ಮ ಮುಂದಿವೆ. ನಿಜಕ್ಕೂ ಅವು ನಿಮ್ಮನ್ನು ದಂಗಾಗಿಸುತ್ತವೆ. ಏಕೆಂದರೆ ಈ ಸಮೀಕ್ಷೆಗೆ ಆಯ್ದುಕೊಂಡ ವಿಷಯವೇ ಅಂತಹದ್ದು. ಸೂಕ್ಷ್ಮ ಸಂಬಂಧಗಳ ನಡುವಿನ ಸಂಘರ್ಷಗಳ ಪರಿಣಾಮವೇ ಈ ಸಮೀಕ್ಷೆಯ ಮೂಲ.

ನಿಮಗೆ ಗೊತ್ತು, ಒಂದು ಸುಂದರ ಸಂಸಾರದಲ್ಲಿ ಹುಳಿ ಹಿಂಡುವ ವಿಷಯವೊಂದಿದ್ದರೆ ಅದು ಅಕ್ರಮ ಸಂಬಂಧದ ಸಂಶಯದ ಗಾಳಿ. ಒಂದು ಹಂತದಲ್ಲಿ ವಯಸ್ಸೆಂಬುದು ನಮ್ಮ ಜೀವನದಲ್ಲಿ ಬಹು ಆಯ್ಕೆ ಪ್ರಶ್ನೆಯಾಗಿ ಎದುರು ನಿಂತುಬಿಡುತ್ತದೆ. ಆ ಪ್ರಶ್ನೆಗೆ ಹೇಗೆ ಉತ್ತರಿಸಬೇಕು ಎಂಬ ಗೊಂದಲದಲ್ಲಿ ನಾನಾ ತಪ್ಪುಗಳು ಅರಿವಿಗೆ ಬರದೇ ನಡೆದು ಹೋಗಬಹುದು. ಇನ್ನೂ ಕೆಲವು ತಪ್ಪುಗಳು ನಮ್ಮ ಅವಸರ, ಆತುರದಿಂದ ನಡೆದು ಹೋಗಿಬಿಡುತ್ತವೆ. ನಂಬಿದವರ ನಂಬಿಕೆಯ ಕನ್ನಡಿಯಲ್ಲಿ ಬಿರುಕು ಕಾಣಿಸಿಕೊಂಡು ನಮ್ಮ ಮುಖವೇ ನಮಗೆ ವಿಕಾರವಾಗಿ ಕಾಣಸಲಾರಂಭಿಸುತ್ತದೆ.

ಜಗತ್ತಿನಲ್ಲಿ ಅತಿ ಹೆಚ್ಚು ಅಪರಾಧ ಕೃತ್ಯಗಳು ನಡೆಯಲು ಕಾರಣವೇ ಪ್ರೇಮ ಮತ್ತು ಕಾಮ ಎಂಬುವ ಎರಡು ಕೊನೆ ಇಲ್ಲದ ಸಮಸ್ಯೆಗಳು. ಈ ವಿಷಯವನ್ನೇ ಆಧಾರವಾಗಿಟ್ಟುಕೊಂಡು ನಡೆದ ಕೆಲವು ಸಮೀಕ್ಷೆಗಳ  ಕೂತೂಹಲಕಾರಿ ಅಂಶಗಳು ಇಲ್ಲಿವೆ ನೋಡಿ.

ಮೊದಲನೆಯ ಸಮಿಕ್ಷೆ ನಿಮಗೆ ಶಾಕ್ ನೀಡಬಹುದು. ಆದರೆ ಅದೇ ಸತ್ಯವಂತೆ. ಇಂದು ಒಬ್ಬ ವ್ಯಕ್ತಿಯು ಮದುವೆಯ ಸಂದರ್ಭದಲ್ಲಿ ಪರ್ಯಾಯ ಸಂಬಂಧವೊಂದನ್ನು ಹೊಂದಿರುವ  ಶೇ.೫೦-೫೦ ಸಂಭವವಿರುತ್ತದೆ ಎಂದು ಕೆಲವು ಸಂಶೋಧಕರು ಹೇಳುತ್ತಾರೆ. ಇದು ದೈಹಿಕ ಮತ್ತು ದೈಹಿಕವಲ್ಲದ ಸಂಬಂಧಗಳನ್ನು ಒಳಗೊಂಡಿರುತ್ತದೆ. ಸುಮಾರು ೩೦ರಿಂದ ೬೦%ರಷ್ಟು ವಿವಾಹಿತರು (ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ) ಅವರ ಮದುವೆಗೆ ಮುಂಚಿನ ಯಾವುದೊದರೊಂದು ಸಂದರ್ಭದಲ್ಲಿ ದಾಂಪತ್ಯ ದ್ರೋಹದಲ್ಲಿ ತೊಡಗಿರುತ್ತಾರೆ ಎಂದು ಅಂದಾಜಿಸಲಾಗಿದೆ. ಕೆಲವು ತಜ್ಞರು (ಉದಾಹರಣೆಗಾಗಿ, ಗ್ರೊ ಅಪ್ ಗೋಲ್ಡನ್ ಬುಕ್ಸ್‌ನ ಫ್ರ್ಯಾಂಕ್ ಪಿಟ್‌ಮ್ಯಾನ್) ೯೦%ರಷ್ಟು ಮೊದಲ ಬಾರಿಯ ವಿವಾಹ-ವಿಚ್ಛೇದನಗಳಿಗೆ ದಾಂಪತ್ಯ ದ್ರೋಹವು ಕಾರಣವಾಗಿರುತ್ತದೆ ಎಂಬುದನ್ನು ಪತ್ತೆಹಚ್ಚಿದ್ದಾರೆ. ಕ್ರಿಸ್ಟಿನ್ ಗಾರ್ಡನ್ ೧೯೯೭ರಲ್ಲಿ ಮಾಡಿದ ಅಧ್ಯಯನವು, “ದಾಂಪತ್ಯ ದ್ರೋಹವನ್ನು ಅನುಭವಿಸುವ ಅರ್ಧಕ್ಕಿಂತಲೂ ಹೆಚ್ಚಿನ ಮದುವೆಗಳು ವಿವಾಹ-ವಿಚ್ಛೇದನದಲ್ಲಿ ಕೊನೆಗೊಳ್ಳುತ್ತವೆ ಎಂದು ಪತ್ತೆಯಾಗಿದೆ. ಮದುವೆಯಾಗಿ ಸಂತೋಷವಾಗಿರುವ ೨೭%ರಷ್ಟು ಮಂದಿ ಒಂದು ಪರ್ಯಾಯ ಸಂಬಂಧವನ್ನು ಹೊಂದಿರುತ್ತಾರಂತೆ..!  ೧೬,೦೦೦ ವಿಶ್ವವಿದ್ಯಾನಿಲಯದ-ವಿದ್ಯಾರ್ಥಿಗಳ ೫೩ ರಾಷ್ಟ್ರಗಳಲ್ಲಿನ ಒಂದು ಇತ್ತೀಚಿನ ಸಮೀಕ್ಷೆಯಲ್ಲಿ, ೨೦%ರಷ್ಟು ದೀರ್ಘ-ಕಾಲದ ಸಂಬಂಧಗಳು ಒಬ್ಬ ಅಥವಾ ಇಬ್ಬರೂ ಸಂಗಾತಿಗಳು ಮತ್ತೊಬ್ಬರೊಂದಿಗೆ ಪರ್ಯಾಯ-ಸಂಬಂಧ ಹೊಂದಿದ್ದಾಗ ಇದು ಆರಂಭವಾಗುತ್ತವೆ ಎಂದು ಹೇಳಲಾಗಿದೆ.  ಸುಮಾರು ೩೦-೪೦%ನಷ್ಟು ಡೇಟಿಂಗ್ ಸಂಬಂಧಗಳು ಹಾಗೂ ೧೮-೨೦%ನಷ್ಟು ಮದುವೆಗಳು ಕನಿಷ್ಠ ಒಂದು ಲೈಂಗಿಕ ದಾಂಪತ್ಯ ದ್ರೋಹದ ಸಂಗತಿಯನ್ನು ಹೊಂದಿರುತ್ತವೆ ಎಂದು ಈ ಅಧ್ಯಯನಗಳು ಸೂಚಿಸುತ್ತವೆ. ವಿವಾಹಿತ ಅಥವಾ ಡೇಟಿಂಗ್ ಸಂಬಂಧದಲ್ಲಿ ಮಹಿಳೆಯರಿಗಿಂತ ಹೆಚ್ಚು ಪುರುಷರು ಪರ್ಯಾಯ ಲೈಂಗಿಕ ಸಂಬಂಧವನ್ನು ಹೊಂದಿರುತ್ತಾರೆ ಎಂದು ಹೇಳಲಾಗುತ್ತಿದೆ.

ಯುನೈಟೆಡ್ ಕಿಂಗ್‌ಡಮ್‌ನ ಐವತ್ತು ವಿವಾಹ-ವಿಚ್ಛೇದನ ವಕೀಲರಲ್ಲಿ, ೨೦೦೩ರಲ್ಲಿ ಅವರ ಪ್ರಕರಣಗಳಿಗೆ ಹೆಚ್ಚು ಸಾಮಾನ್ಯ ಕಾರಣಗಳು ಯಾವೆಂದು ಕೇಳಲಾಯಿತು. ವಿವಾಹೇತರ ಸಂಬಂಧಗಳು ಕಾರಣವೆಂದು ಸೂಚಿಸಿದವರಲ್ಲಿ ೫೫%ನಷ್ಟು ಮಂದಿ ಇದಕ್ಕೆ ಸಾಮಾನ್ಯವಾಗಿ ಪತಿ ಕಾರಣವೆಂದು ಹಾಗೂ ೪೫%ನಷ್ಟು ಮಂದಿ ಪತ್ನಿಯರು ಕಾರಣವೆಂದು ಹೆಚ್ಚಿನ ತಜ್ಞರು ನಂಬಿದ್ದಾರೆ.

   * ದಾಂಪತ್ಯ ದ್ರೋಹ :

“ಸಾಂದರ್ಭಿಕ ಲೈಂಗಿಕತೆಗೆ ಲಿಂಗ ಭಿನ್ನತೆಯು ಕಾರಣವಾಗಿರುತ್ತದೆ. ದಾಂಪತ್ಯ ದ್ರೋಹವು ವಿವಿಧ ರೀತಿಯ ಕಾರಣಗಳಿಂದ ಬರುತ್ತದೆ, ಕೆಲವೊಮ್ಮೆ ಸಂಕೀರ್ಣವಾಗಿಯೂ ಇರುತ್ತದೆ. ಅದು ಪುರುಷ, ಸ್ತ್ರೀ ಮತ್ತು ಪುರುಷರೂ-ಸ್ತ್ರೀಯರೂ ಅಲ್ಲದ ಲಿಂಗಗಳಲ್ಲಿ ಭಿನ್ನವಾಗಿರುತ್ತವೆ. ಮೈಕೆಲ್ ಎ. ಫಾರ್ಮಿಕಾನ “ಸೈಕಾಲಿಜಿ ಟುಡೆ ಬ್ಲಾಗ್‌ನ ಪ್ರಕಾರ, “ಲೈಂಗಿಕತೆ ಮತ್ತು ಭಾವನಾತ್ಮಕತೆ ಮಧ್ಯೆ ಒಂದು ಅನ್ಯೋನ್ಯ ಸಂಬಂಧವಿದೆ. ಪುರುಷರು ಮತ್ತು ಮಹಿಳೆಯರು ಆ ಸಂಬಂಧವನ್ನು ವ್ಯಾಪಕವಾಗಿ ಭಿನ್ನ ಸೂಚನೆಗಳ ಮೂಲಕ ಸಾಧಿಸುತ್ತಾರೆ. ಆ ಭಿನ್ನತೆಗಳು ಸ್ಪಷ್ಟವಾಗಿ ಪ್ರತಿಯೊಂದು ಲಿಂಗದ ದಾಂಪತ್ಯ ದ್ರೋಹದ ಮೇಲೆ ಪರಿಣಾಮ ಬೀರುತ್ತವೆ, ದಾಂಪತ್ಯ ದ್ರೋಹವು ಭಾವನಾತ್ಮಕವಾಗಿರಲಿ ಅಥವಾ ಲೈಂಗಿಕವಾಗಿರಲಿ.

ಆನೆಟ್ಟ್ ಲಾವ್ಸನ್‌ಳ “ಅಡಲ್ಟರಿ ಆನ್ ಅನಾಲಿಸಿಸ್ ಆಫ್ ಲವ್ ಆಂಡ್ ಬೆಟ್ರಾಯಲ್ನಲ್ಲಿ ಆಕೆ ಹೀಗೆಂದು ವಿಚಾರ ಮಾಡುತ್ತಾಳೆ - ಪುರುಷರು ಪರ್ಯಾಯ-ಸಂಬಂಧಗಳನ್ನು ಹೊಂದಿರುವಾಗ, ಅವರು ತಮ್ಮನ್ನು ತಾವು ಖಂಡನೆಗೆ ಒಳಪಡಿಸಲು ಮತ್ತು ಅವಲಂಬಿತರಾಗಲು ಬಯಸುತ್ತಾರೆ. ಅದೇ ಮಹಿಳೆಯರು ಪರ್ಯಾಯ-ಸಂಬಂಧಗಳನ್ನು ಹೊಂದಿರುವಾಗ ಹೆಚ್ಚು ಪ್ರಬಲರಾಗಬೇಕೆಂದು ಮತ್ತು ಸ್ವತಂತ್ರರಾಗಬೇಕೆಂದು ಬಯಸುತ್ತಾರೆ.

* ಕೆಲಸದಲ್ಲಿ ದಾಂಪತ್ಯ ದ್ರೋಹ :

ಕಛೇರಿಯಲ್ಲಿನ ರೊಮಾನ್ಸ್ , ಕೆಲಸದಲ್ಲಿನ ರೊಮಾನ್ಸ್ ಅಥವಾ ಸಂಸ್ಥೆಯಲ್ಲಿನ ಪರ್ಯಾಯ-ಸಂಬಂಧ ಎಂದರೆ ಒಂದೇ ಕಛೇರಿ, ಉದ್ಯೋಗದ-ಸ್ಥಳ ಅಥವಾ ವ್ಯವಹಾರದಲ್ಲಿ ಒಟ್ಟಿಗೆ ಕೆಲಸ ಮಾಡುವ ಇಬ್ಬರು ಮಧ್ಯೆ ಕಂಡುಬರುವ ರೊಮಾನ್ಸ್ ಆಗಿದೆ.   ಕಛೇರಿಯಲ್ಲಿನ ರೊಮಾನ್ಸ್‌ಗಳು ಬೆಳೆಯಲು ಮತ್ತೊಂದು ಕಾರಣವೆಂದರೆ ಸಹೋದ್ಯೋಗಿಗಳು ಒಟ್ಟಿಗೆ ಹೆಚ್ಚು ಸಮಯ ಕಳೆಯುವುದು. ಇಂದು ದಂಪತಿಗಳು ಪರಸ್ಪರ ಒಟ್ಟಿಗೆ ಇರುವುದಕ್ಕಿಂತ ಹೆಚ್ಚು ಕಾಲ ಸಹೋದ್ಯೋಗಿಗಳೊಂದಿಗೆ ಇರುತ್ತಾರೆ. ಲೀಸಾ ಮಿಲ್ಲರ್ ಮತ್ತು ಲೊರೈನ್ ಅಲಿ ನ್ಯೂಸ್‌ವೀಕ್‌ನ ಲೇಖನ “ದಿ ನ್ಯೂ ಇನ್ಫಿಡೆಲಿಟಿಯಲ್ಲಿ ಹೀಗೆಂದು ಸೂಚಿಸಿದ್ದಾರೆ - “ಸುಮಾರು ಶೇಕಡಾ ೬೦ರಷ್ಟು ಅಮರಿಕನ್ ಮಹಿಳೆಯರು ಮನೆಯಿಂದ ಹೊರಗೆ ಹೋಗಿ ಕೆಲಸ ಮಾಡುತ್ತಾರೆ. ಈ ಪ್ರಮಾಣವು ೧೯೬೪ರಲ್ಲಿದ್ದ ಶೇಕಡಾ ೪೦ರಷ್ಟಕ್ಕಿಂತ ಹೆಚ್ಚಾಗಿದೆ. ಶೇವ್ ಮ್ಯಾಗಜಿನ್‌ಗಾಗಿ ಡಾ. ಡೆಬ್ರಾ ಲೈನೊ ಬರೆದ ಲೇಖನದ ಪ್ರಕಾರ, ಮಹಿಳೆಯರು ಉದ್ಯೋಗದ-ಸ್ಥಳದಲ್ಲಿ ವಂಚಿಸಲು ಕಾರಣವೆಂದರೆ ಅವರು ಕೆಲಸದ-ಸ್ಥಳದಲ್ಲಿ ಪುರುಷರೊಂದಿಗೆ ಮಿತಿತಪ್ಪಿ ವ್ಯವಹರಿಸುವುದು ಹಾಗೂ ಅದರ ನೇರ ಪರಿಣಾಮವಾಗಿ ಹೆಚ್ಚಿನವರು ವಂಚಿಸುವ ಅವಕಾಶಗಳನ್ನು ಹೊಂದಿರುತ್ತಾರೆ.

* ದಾಂಪತ್ಯ ದ್ರೋಹ ಮತ್ತು ಇಂಟರ್ನೆಟ್

ಇಂಟರ್ನೆಟ್ ಮತ್ತು ತಂತ್ರಜ್ಞಾನದ ಬೆಳವಣಿಗೆಯು ಸಾಮಾನ್ಯವಾಗಿ ಆಧುನಿಕ ಜೋಡಿಗಳಿಗೆ ಹೊಸ ಸವಾಲುಗಳನ್ನು ತಂದೊಡ್ಡಿದೆ. ೨೦೦೩ರ ಗ್ಲೋಬಲ್ ಇಂಟರ್ನೆಟ್ (ಅಂಕಿಅಂಶ) ಸ್ಟ್ಯಾಟಿಸ್ಟಿಕ್ಸ್‌ನ ಪ್ರಕಾರ, ಪ್ರಪಂಚದಾದ್ಯಂತ ಇಂಟರ್ನೆಟ್ ಬಳಕೆದಾರರ ಸಂಖ್ಯೆಯು ಒಂದು ದಶಕದೊಳಗೆ ಅಸಾಧಾರಣ ರೀತಿಯಲ್ಲಿ ಅತಿ ವೇಗವಾಗಿ ಬೆಳೆದಿದೆ, ೧೯೯೫ರಲ್ಲಿ ೧೬ ದಶಲಕ್ಷದಷ್ಟಿದ್ದ ಬಳಕೆದಾರರ ಸಂಖ್ಯೆಯು ೨೦೦೩ರ ಉತ್ತರಾರ್ಧದಲ್ಲಿ ಸರಿಸುಮಾರು ೬೮೦ ದಶಲಕ್ಷಕ್ಕೆ ಏರಿದೆ. ಅದು೨೦೧೨ ಶೇ.೧೦ ರಷ್ಟು ಹೆಚ್ಚಾಗಿದೆ. ಈಗಂತೂ ಇನ್‌ಟರ್‌ನೆಟ್ ಇಲ್ಲದೇ ಜೀವನವೇ ಇಲ್ಲ ಎಂಬಂತಾಗಿದೆ.  ಅಂತಹ ದಶಲಕ್ಷದಷ್ಟು ಬಳಕೆದಾರರು ಅಪರಿಚಿತರನ್ನು ಭೇಟಿಯಾಗಲು, ಪ್ರೇಮದ ಚೆಲ್ಲಾಟವಾಡಲು ಮತ್ತು ಹೆಚ್ಚಾಗಿ ಲೈಂಗಿಕತೆಯ ಬಗ್ಗೆ ಮಾತಕತೆಯಾಡಲು ಇಂಟರ್ನೆಟ್‌ನ್ನು ಬಳಸುವವರಹ ಹೆಚ್ಚಾಗಿದ್ದಾರೆ.

ಇಂಟರ್ನೆಟ್ ದಾಂಪತ್ಯ ದ್ರೋಹದ ಬಗೆಗಿನ ಸಂಶೋಧನೆಯು ಹೆಚ್ಚುಕಡಿಮೆ ಹೊಸ ಆಸಕ್ತಿಯ ವಿಷಯವಾಗಿದೆ. ಇಂಟರ್ನೆಟ್ ಮೂಲಕ ಯಾವುದೇ ರೀತಿಯ ಲೈಂಗಿಕ ಮಾತುಕತೆಯನ್ನು ದಾಂಪತ್ಯ ದ್ರೋಹವೆಂದು ಹೇಳಲಾಗುವುದಿಲ್ಲ ಏಕೆಂದರೆ ಇದರಲ್ಲಿ ದೈಹಿಕ ಸಂಪರ್ಕವಿರುವುದಿಲ್ಲ. ಅಲನ್ ಸಾಬಲ್ ಮತ್ತು ನಿಕೋಲಸ್ ಪವರ್ “ದಿ ಫಿಲಾಸಫಿ ಆಫ್ ಸೆಕ್ಸ್ ಪುಸ್ತಕದಲ್ಲಿ ಈ ವಿಷಯ ದಾಖಲಿಸಿದ್ದಾರೆ.

ಇಂದಿನ ಮೊಬೈಲ್, ಇನ್‌ಟರ್‌ನೆಟ್,  ಫೇಸ್‌ಬುಕ್, ಟ್ವಿಟರ್, ವಾಟ್ಸ್‌ಅಪ್, ವೀಚಾಟ್, ಗೂಗಲ್ ಚಾಟ್ ಸೇರಿದಮತೆ ಹಲವು ಉಪಯುಕ್ತ ತಂತ್ರಜ್ಞಾನಗಳೂ ಸಹ ಇತ್ತೀಚೆಗೆ ಅಕ್ರಮ ಸಂಬಂಧಗಳಿಗೆ ಕೊಂಡಿ ಬೆಸೆಯುವ ಕಾರ್ಯ ಮಾಡಲು ಸಹಕಾರಿಯಾಗುತ್ತವೆ ಎಂದು ಸಮೀಕ್ಷೆಯೊಂದು ಸ್ಪಷ್ಟಪಡಿಸಿದೆ. ಆದಷ್ಟೂ ಚಾಟಿಂಗ್‌ನಿಂದ ದೂರವಿರುವುದು ಸೇಫ್ ಜೀವಕ್ಕೆ ಸಹಕಾರಿಯೆಂದೂ ಸಹ ತಿಳಿಸಲಾಗಿದೆ.